ತೆಲಂಗಾಣ ಸಿಎಂ ಜತೆ ಚರ್ಚಿಸಿ ಕ್ರಮ
ಜಿಲ್ಲೆಯ ಎಲ್ಲ ಹಳ್ಳಿಗಳಿಗೆ ಶಾಶ್ವತವಾಗಿ ಕುಡಿಯುವ ನೀರು ಕಲ್ಪಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚನೆ
Team Udayavani, Jun 23, 2019, 10:57 AM IST
ಯಾದಗಿರಿ: ಚಂಡರಕಿ ಗ್ರಾಮದಿಂದ ನಿರ್ಗಮಿಸುವ ವೇಳೆಯೂ ಸಿಎಂ ಕುಮಾರಸ್ವಾವಿ ಅವರಿಗೆ ಸಾರ್ವಜನಿಕರು ಮನವಿ ಸಲ್ಲಿಸಿದರು.
ಯಾದಗಿರಿ: ತೆಲಂಗಾಣ ರಾಜ್ಯದ ಸಂಗಂಬಂಡಾ ಹಳ್ಳದ ಬ್ಯಾರೇಜ್ ಹಿನ್ನೀರಿನಿಂದ ಗುರುಮಠಕಲ್ ಕ್ಷೇತ್ರದ ಹಳ್ಳಿಗಳ 400 ಎಕರೆ ಜಮೀನು ಮುಳುಗಡೆ ಭೀತಿ ಇದೆ. ಸಂಕ್ಲಾಪುರ, ಚಲ್ಹೇರಿ, ಇಡ್ಲೂರು, ಜೈಗ್ರಾಂ ಭಾಗದ ರೈತರಲ್ಲಿ ಆತಂಕ ಇದೆ. ಇಂಜಿನಿಯರ್ಗಳನ್ನು ಕಳುಹಿಸಿ ಸಮಸ್ಯೆಗಳ ಮಾಹಿತಿ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಚಂಡರಕಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಶಾಸಕರು ಗಮನಕ್ಕೆ ತಂದಿದ್ದು, ಪರಿಹಾರ ಕುರಿತು ತೆಲಂಗಾಣ ಸಿಎಂ ಜತೆ ಚರ್ಚಿಸಿ ಯಾವ ರೀತಿ ಕ್ರಮ ವಹಿಸಬೇಕು ಎನ್ನುವ ತೀರ್ಮಾನಕ್ಕೆ ಬರಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಎಲ್ಲ ಹಳ್ಳಿಗಳಿಗೆ ಶಾಶ್ವತವಾಗಿ ಕುಡಿಯುವ ನೀರು ಕಲ್ಪಿಸುವಂತೆ ಗ್ರಾಮೀಣ ಕುಡಿಯುವ ನೀರಿನ ಇಲಾಖೆಗೆ ಸೂಚನೆ ನೀಡಲಾಗಿದೆ. ಗುರುಮಠಕಲ್ಗೆ ವಿಶೇಷವಾಗಿ ಶಾಸಕ ನಾಗನಗೌಡ ಕಂದಕೂರ ಅವರು ಹಲವು ಬೇಡಿಕೆಗಳ ಕುರಿತು ಗಮನಕ್ಕೆ ತಂದಿದ್ದಾರೆ. ಎಲ್ಲವನ್ನೂ ಅನುಷ್ಠಾನಕ್ಕೆ ಸಿದ್ಧತೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿದರು.
ನಿಯಮಾವಳಿಗಳ ಸಡಿಲಿಕೆ ಬಗ್ಗೆ ತೀರ್ಮಾನ: ಹೈಕ ಭಾಗಕ್ಕೆ ಶಿಕ್ಷಕ ನೇಮಕಾತಿಯಲ್ಲಿ ಅರ್ಹತಾ ಪರೀಕ್ಷೆ ನಿಯಮಾವಳಿಗಳ ಸಡಿಲಿಕೆ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.
ಹೈಕ ಭಾಗದಲ್ಲಿ ಶಿಥಿಲಗೊಂಡಿರುವ ಎಲ್ಲ ಶಾಲೆಗಳ ಕಟ್ಟಡಗಳನ್ನು ಈ ವರ್ಷವೇ ಸಂಪೂರ್ಣ ರಿಪೇರಿ, ಹೊಸ ಕಟ್ಟಡ ನಿರ್ಮಿಸಲು ತೀರ್ಮಾನ ಮಾಡಿದ್ದೇವೆ. ಹಿಂದಿನ ಸರ್ಕಾರದ ಭರವಸೆಗಳು ನನಗೆ ಗೊತ್ತಿಲ್ಲ. ಶಿಥಿಲ ಕಟ್ಟಡಗಳ ಪಟ್ಟಿ ಮಾಡಿ, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಪಶು ಇಲಾಖೆಯಲ್ಲಿ ಖಾಲಿ ಇರುವ 150 ವೈದ್ಯರ ಹುದ್ದೆ ಭರ್ತಿಗೆ ಹೈಕ ಭಾಗದಿಂದ ಕೇವಲ 70 ಜನರು ಅರ್ಜಿ ಹಾಕಿದ್ದಾರೆ ಎಂದು ತಿಳಿಸಿದರು.
ಅಗತ್ಯ ಸೌಲಭ್ಯ: ಯಾದಗಿರಿ ಜಿಲ್ಲೆಯ ಎಸ್ಎಸ್ಎಲ್ಸಿ ಫಲಿತಾಂಶ ಮೊದಲನೇ ಸ್ಥಾನಕ್ಕೆ ತರಲು ಅಗತ್ಯ ಮೂಲಭೂತ ಸೌಕರ್ಯ, ಶಿಕ್ಷಕರ ಕೊರತೆ ನೀಗಿಸಲಾಗುವುದು. ಮೊದಲ ಸ್ಥಾನಕ್ಕೆ ತರುವ ವಾತಾವರಣ ನಿರ್ಮಾಣ ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗಣಿ ಮತ್ತು ಭೂ ವಿಜ್ಞಾನ ಖಾತೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಪಾಟೀಲ, ಸಮಾಜ ಕಲ್ಯಾಣ ಖಾತೆ ಸಚಿವ ಪ್ರಿಯಾಂಕ್ ಎಂ. ಖರ್ಗೆ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಖಾತೆ ಸಚಿವ ವೆಂಕಟರಾವ ನಾಡಗೌಡ, ಪ್ರವಾಸೋದ್ಯಮ ಖಾತೆ ಸಚಿವ ಸಾ.ರಾ.ಮಹೇಶ, ಸಹಕಾರ ಖಾತೆ ಸಚಿವ ಬಂಡೆಪ್ಪ ಖಾಶೆಂಪುರ, ಗುರುಮಠಲ್ ಶಾಸಕ ನಾಗನಗೌಡ ಕಂದಕೂರ, ಜಿಲ್ಲಾಧಿಕಾರಿ ಕೂರ್ಮಾರಾವ್, ಎಸ್ಪಿ ಋಷಿಕೇಷ ಸೋನವಣೆ, ಸಿಇಒ ಕವಿತಾ ಮನ್ನಿಕೇರಿ ಮತ್ತಿತರರಿದ್ದರು.