ಕುಡಿಯುವ ನೀರು ಯೋಜನೆಗಳಿಗೆ 540 ಕೋಟಿ ಮಂಜೂರು
Team Udayavani, Sep 19, 2020, 12:03 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಸುರಪುರ (ಯಾದಗಿರಿ): ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಮತ್ತು ತಾಲೂಕುಗಳ ಕುಡಿಯುವ ನೀರು ಯೋಜನೆಗಾಗಿ ಸರ್ಕಾರ 540 ಕೋಟಿ ಅನುದಾನ ಮಂಜೂರು ಮಾಡಲಾಗಿದೆ.
ಇದರಲ್ಲಿ ಸುರಪುರಕ್ಕೆ 240 ಕೋಟಿ ರೂ ಒದಗಿಸಲಾಗಿದೆ ಎಂದು ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಶಾಸಕ ನರಸಿಂಹ ನಾಯಕ ಹೇಳಿದರು.
ನಗರದ ತಮ್ಮ ನಿವಾಸದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ನಗರಕ್ಕೆ ಶಾಶ್ವತವಾಗಿ ನೀರು ಒದಗಿಸಲು ವಿಶೇಷ ಯೋಜನೆ ರೂಪಿಸಲಾಗಿದೆ. ನಗರದ ಹತ್ತಿರದಲ್ಲಿ 72 ಎಕರೆ ಕೆರೆ ಗುರುತಿಸಲಾಗಿದ್ದು ನದಿಯ ನೀರಿನ ಜೊತೆಗೆ ಕೆರೆ ನೀರು ಶುದ್ಧೀಕರಿಸಿ ನಿರಂತರ ನೀರು ಒದಗಿಸುವ ಉದ್ದೇಶವಿದೆ ಎಂದರು.
ಇದರಿಂದ ಬಹುದಿನಗಳ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಂತಾಗಿದ್ದು ಶೀಘ್ರದಲ್ಲಿಯೇ ಟೆಂಡರ್ ಕರೆಯಲಾಗುವುದು ಎಂದರು.
ಅಧ್ಯಕ್ಷನಾದ ನಂತರ ಮೊದಲ ಬಾರಿಗೆ ರಾಜ್ಯ ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ನೀರಿನ ಸಮಸ್ಯೆ ಕುರಿತು ಮಾಹಿತಿ ಪಡೆದು ಕೊಂಡಿದ್ದು ಸರ್ಕಾರದ ಗಮನಕ್ಕೆ ತಂದು ಅನುದಾನ ಮಂಜೂರಿ ಮಾಡಿಸಿದ್ದೇನೆ.
ಪ್ರಥಮ ಹಂತವಾಗಿ ಶಹಾಪುರಕ್ಕೆ 68 ಕೋಟಿ, ಅಫ್ಜ್ಜಲ್ಪುರ 88 ಕೋಟಿ, ಔರಾದ 70 ಕೋಟಿ, ಅಳಂದ 90 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿದ್ದು ಶೀಘ್ರವೇ ಟೆಂಡರು ಕರೆಯಲು ಸೂಚಿಸಲಾಗಿದೆ ಎಂದು ಅವರು ವಿವರಿಸಿದರು.
ಮುಂಬರುವ ದಿನಗಳಲ್ಲಿ ಇನ್ನಷ್ಟು ಅನುದಾನ ತಂದು ಯಾದಗಿರಿ, ರಾಯಚೂರು ಕೊಪ್ಪಳ, ಬಳ್ಳಾರಿ ಸೇರಿದಂತೆ ನೀರಿನ ಸಮಸ್ಯೆ ಇರುವ ಇತರೆ ಜಿಲ್ಲೆ ತಾಲೂಕು, ನಗರ ಪ್ರದೇಶಗಳಿಗೆ ಅನುದಾನ ಕಲ್ಪಸಿ ನೀರಿನ ಸಮಸ್ಯೆ ನೀಗಿಸಲಾಗುವುದು. ರಾಜ್ಯದೆಲ್ಲೆಡೆ ನಗರ ಪ್ರದೇಶದ ಜನರಿಗೆ ಸಮರ್ಪಕವಾಗಿ ನೀರು ಒದಗಿಸುವುದು ತನ್ನ ಮೊದಲ ಆದ್ಯತೆಯಾಗಿದೆ ಎಂದರು.