ಪಾರದರ್ಶಕ ಚುನಾವಣೆ ನಡೆಸಲು ಸೂಚನೆ
Team Udayavani, Dec 3, 2020, 4:06 PM IST
ಯಾದಗಿರಿ: ರಾಜ್ಯ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಅಗತ್ಯ ತಯಾರಿಯೊಂದಿಗೆ ಪಾರದರ್ಶಕವಾಗಿಜಿಲ್ಲೆಯ ಗ್ರಾಪಂಗಳ ಚುನಾವಣೆ ಪ್ರಕ್ರಿಯೆಗಳನ್ನು ನಡೆಸಲು ಜಿಲ್ಲಾಧಿಕಾರಿ ಡಾ| ರಾಗಪ್ರಿಯ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬುಧವಾರ ನಡೆದ ಗ್ರಾಪಂ ಚುನಾವಣೆ ಹಿನ್ನೆಲೆ ಪೂರ್ವಭಾವಿ ಸಭೆಯಲ್ಲಿ ಅವರುಮಾತನಾಡಿದರು. ಕಂದಾಯ ನಿರೀಕ್ಷಕರು,ಪಿಡಿಒ, ಕಾರ್ಯದರ್ಶಿಗಳು ಹಾಗೂ ಚುನಾವಣಾ ಸಿಬ್ಬಂದಿಗಳೊಂದಿಗೆ ನಿರಂತರ ಸಂಪರ್ಕ ಹೊಂದಿ ಚುನಾವಣೆ ಪೂರ್ವತಯಾರಿ ನಡೆಸಿಕೊಂಡು, ಗೊಂದಲ ಸರಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಚುನಾವಣೆ ಪ್ರಕ್ರಿಯೆ ಕುರಿತು ಬೂತ್ ಮಟ್ಟ ಸೇರಿದಂತೆ ಇತರ ವಿಷಯಗಳ ಬಗ್ಗೆ ಸಾಮಾನ್ಯ ಮಾಹಿತಿ ನೀಡಲಾಗಿದೆ. ಅಭ್ಯರ್ಥಿಗಳಿಂದ ನಾಮಪತ್ರ ಸ್ವೀಕರಿಸುವ ವೇಳೆ, ಮೀಸಲು, ಕ್ಷೇತ್ರದಹೆಸರು, ನಮೂನೆ, ಅಂಚೆ ವಿಳಾಸ, ವಯಸ್ಸು ಸೇರಿದಂತೆ ಇತರ ಮಾಹಿತಿಪರಿಶೀಲಿಸಿಕೊಳ್ಳಬೇಕು. ಈಗಿನಿಂದಲೇ ಚುನಾವಣೆ ನಡೆಯುವ ಬೂತ್ಗಳಲ್ಲಿ ಕೊಠಡಿ, ವಿದ್ಯುತ್, ವಾಹನ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಿದರು.
ಸಭೆಯಲ್ಲಿ ಜಿಪಂ ಸಿಇಒ ಶಿಲ್ಪಾ ಶರ್ಮ, ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ್,ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ವಿಭಾಗಿಯ ಸಾರಿಗೆ ಅಧಿಕಾರಿ ರಮೇಶ ಪಾಟೀಲ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಸಕಾಲ ಜಾಗೃತಿ ಅಭಿಯಾನಕ್ಕೆ ಚಾಲನೆ :
ಯಾದಗಿರಿ: ನಿಗದಿತ ಕಾಲಮಿತಿಯಲ್ಲಿ ನಾಗರಿಕರಿಗೆ ಸೇವೆಗಳನ್ನು ಒದಗಿಸುವ ಉದ್ದೇಶದ ಸಕಾಲ ಯೋಜನೆ ಕುರಿತು ಹೆಚ್ಚಿನ ಅರಿವು ಮೂಡಿಸಲು ಹಾಗೂ ಸಕಾಲದಡಿ ಬಾಕಿ ಉಳಿದ ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಲು ಸಕಾಲ ಸಪ್ತಾಹವನ್ನು ಆಚರಿಸಲಾಗುತ್ತಿದೆ ಎಂದು ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ಕೆ.ದಾಮೋದಾರರಾವ ತಿಳಿಸಿದರು.
ನಗರದ ಪ್ರಾದೇಶಿಕ ಸಾರಿಗೆ ಇಲಾಖೆಯ ಕಚೇರಿ ಆವರಣದಲ್ಲಿ ಇತ್ತೀಚೆಗೆ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾಗರೀರಿಗೆನಿಗದಿತ ಕಾಲಮಿತಿಯಲ್ಲಿ ಸೇವೆಗಳನ್ನು ಒದಗಿಸುವಉದ್ದೇಶದಿಂದ ಸಕಾಲ ಯೋಜನೆ ಜಾರಿಗೆ ತರಲಾಗಿದೆ. ಸಾರಿಗೆ ಇಲಾಖೆಯಲ್ಲಿ ಒಟ್ಟು 26 ಸೇವೆಗಳನ್ನು ಸಕಾಲ ವ್ಯಾಪ್ತಿಯಡಿಯಲ್ಲಿ ತರಲಾಗಿದೆ ಎಂದು ಹೇಳಿದರು. ನವೆಂಬರ್ 30ರಿಂದ ಡಿ.5ರ ವರೆಗೆ ತಮ್ಮ ಇಲಾಖೆಯಲ್ಲಿ ಸಕಾಲ ಸಪ್ತಾಹ ನಡೆಯಲಿದೆ ಎಂದರು. ಮೋಟಾರ್ ವಾಹನ ನಿರೀಕ್ಷಕ ಮೌನೇಶ, ಶಿವಕುಮಾರ ನವಲೆ, ದಿವಾಣಜಿ, ರಾಮಕೃಷ್ಣ, ಆನಂದ ಬಾವಿ ಇದ್ದರು.