ಕಿಸೆಯಲ್ಲಿಡಬೇಡಿ ಹೆಚ್ಚು ದುಡ್ಡು
Team Udayavani, Mar 15, 2019, 12:30 AM IST
ಬೆಂಗಳೂರು: ಯಾವುದೇ ಕಾರಣಕ್ಕೂ 50 ಸಾವಿರಕ್ಕಿಂತ ಹೆಚ್ಚು ಹಣವನ್ನು ಜೇಬಿನಲ್ಲಿ ಇರಿಸಿಕೊಂಡು ಪ್ರಯಾಣಿಸಬೇಡಿ… 10 ಸಾವಿರ ರೂ.ಗಿಂತ ಹೆಚ್ಚು ಮೌಲ್ಯದ ಉಡುಗೊರೆಗಳನ್ನು ಯಾರಿಗೂ ಕೊಡಬೇಡಿ… ಇದು ಚುನಾವಣ ಆಯೋಗ ನೀಡಿರುವ ಎಚ್ಚರಿಕೆ. ರಾಜ್ಯಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳು ಅನಿವಾರ್ಯ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ. ಒಂದು ವೇಳೆ ಈ ಪ್ರಮಾಣದ ಹಣ ಅಥವಾ ಭರ್ಜರಿ ಉಡುಗೊರೆ ಕೊಂಡೊಯ್ಯುವುದೇ ಆಗಿದ್ದಲ್ಲಿ ಅಗತ್ಯ ದಾಖಲೆ ಇಟ್ಟುಕೊಂಡಿರಬೇಕು ಎಂದಿದ್ದಾರೆ. ಚುನಾವಣ ಆಯೋಗದಿಂದ ರಚಿಸ ಲಾಗಿರುವ ತಪಾಸಣ ತಂಡಗಳು ವಾಹನ ಮತ್ತು ಲಗೇಜು ತಪಾಸಣೆ ಮಾಡು ವಾಗ ಸಾರ್ವಜನಿಕರು ಸಹಕರಿಸಬೇಕು. ಒಂದು ವೇಳೆ ಎಲ್ಲ ದಾಖಲೆಗಳಿದ್ದರೂ ಅನಗತ್ಯವಾಗಿ ಚೆಕ್ಪೋಸ್ಟ್ ಗಳಲ್ಲಿ ತೊಂದರೆ ನೀಡಿದಲ್ಲಿ ಅಥವಾ ಅನುಚಿತ ರೀತಿಯಲ್ಲಿ ತಪಾಸಣೆ ನಡೆಸಿದರೆ ದೂರು ನೀಡಬಹುದು. ಇದಕ್ಕಾಗಿಯೇ ಪ್ರತಿ ಜಿಲ್ಲೆಯಲ್ಲೂ ಜಿಪಂ ಸಿಇಒ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದು ಹೇಳಿದರು.
“ಡಿಜಿಟಲ್ ಪಾವತಿ’ ವಿಧಾನಗಳ ಮೇಲೂ ನಿಗಾ
“ಪೇಟಿಎಂ, ಫೋನ್ಪೇ, ಗೂಗಲ್ ಪೇ’ ಮತ್ತಿತರ ಡಿಜಿಟಲ್ ಪಾವತಿ ವಿಧಾನಗಳ ಮೇಲೆ ನಿಗಾ ಇಡಲಾಗುವುದು. ಇವುಗಳ ಮೂಲಕ ನಡೆಯುವ ಹಣ ವರ್ಗಾವಣೆ ಮತ್ತು ಪಾವತಿಗಳ ಬಗ್ಗೆ ಯಾವ ರೀತಿ ನಿಗಾ ಇಟ್ಟು ಏನು ಕ್ರಮ ಕೈಗೊಳ್ಳಬಹುದು ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ಸ್ಪಷ್ಟ ನಿಲುವು ತಾಳಲಾಗುವುದು ಎಂದವರು ತಿಳಿಸಿದರು.
ಮದುವೆಗೆ ಅನುಮತಿ ಬೇಕಿಲ್ಲ
ಮದುವೆ, ಹುಟ್ಟುಹಬ್ಬ, ಧಾರ್ಮಿಕ ಆಚರಣೆಗೆ ಇಲ್ಲ ಅಡ್ಡಿ.
ಈ ಸ್ಥಳಗಳಲ್ಲಿ ರಾಜಕೀಯ ಪಕ್ಷಗಳು ಹಣ ಹಂಚಬಾರದು, ಬಾಡೂಟ ಹಾಕಿಸಬಾರದು, ಮದ್ಯ ವಿತರಿಸಬಾರದು.
ಯಾವುದೇ ಕಾರಣಕ್ಕೂ ಖಾಸಗಿ ಕಾರ್ಯಕ್ರಮಗಳಲ್ಲಿ ರಾಜಕಾರಣಕ್ಕೆ ಅವಕಾಶ ಕೊಡಬೇಡಿ.
ಬ್ಯಾಂಕ್ಗಳಿಗೂ ನಿಯಮ
ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ನಗದು ಸಾಗಾಣಿಕೆಯಲ್ಲಿ ಎಚ್ಚರ ವಹಿಸಬೇಕು
ಕೇಂದ್ರ ಹಣಕಾಸು ಸಚಿವಾಲಯದ ಸ್ಟಾ éಂಡರ್ಡ್ ಆಪರೇಟಿಂಗ್ ಪ್ರೊಸೆಸರ್ (ಎಸ್ಒಪಿ) ಪಾಲಿಸಬೇಕು.
ಹಣವನ್ನು ಯಾವುದೇ ಕಾರಣಕ್ಕೂ ಹೊರಗುತ್ತಿಗೆಯ ಏಜೆನ್ಸಿಗಳು/ಕಂಪೆನಿಗಳ ವ್ಯಾನ್ಗಳಲ್ಲಿ ಸಾಗಿಸಬಾರದು.
ಬ್ಯಾಂಕಿನ ಹಣವನ್ನು ಹೊರತುಪಡಿಸಿ ಯಾವುದೇ 3ನೇ ವ್ಯಕ್ತಿಯ ಏಜೆನ್ಸಿ/ಕಂಪೆನಿಗಳ ಹಣ ಸಾಗಿಸಬಾರದು.
ಎಟಿಎಂಗಳಿಗೆ ಹಣ ತುಂಬಿಸುವಾಗ, ಶಾಖೆಯಿಂದ ಶಾಖೆಗೆ ನಗದು ಸಾಗಿಸುವಾಗಲೂ ದಾಖಲೆ ಅಗತ್ಯ.ಸಿಬಂದಿ ಬಳಿ ಗುರುತಿನ ಚೀಟಿ ಇರುವುದು ಕಡ್ಡಾಯ.