ಮೋದಿ ಆಯ್ತು ಈಗ “ಉಮೇಶ ಜಾಧವ್ ಚೋರ್ ಹೈ’ ಘೋಷಣೆ
Team Udayavani, Apr 15, 2019, 3:00 AM IST
ಕಲಬುರಗಿ: ಡಾ| ಬಿ.ಆರ್.ಅಂಬೇಡ್ಕರ್ ಅವರ 128ನೇ ಜಯಂತ್ಯುತ್ಸವ ಹಿನ್ನೆಲೆಯಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ| ಉಮೇಶ ಜಾಧವ್ ಭಾನುವಾರ ಬೆಳಗ್ಗೆ ಜಗತ್ ವೃತ್ತದಲ್ಲಿರುವ ಡಾ| ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಸಂದರ್ಭದಲ್ಲಿ ಕೆಲವರು ಚೌಕಿದಾರ್ ಚೋರ್ ಹೈ ಘೋಷಣೆ ಕೂಗಿದ ಘಟನೆ ನಡೆದಿದೆ.
ಜಾಧವ್ ಅವರು ಅಂಬೇಡ್ಕರ ಪುತ್ಥಳಿಗೆ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಮಾಡಲು ತೆರಳಿದ ಸಂದರ್ಭದಲ್ಲಿ ಕೆಲವರು “ಚೌಕಿದಾರ್ ಚೋರ್ ಹೈ, ಮೋದಿ ಚೋರ್ ಹೈ’ ಎಂಬುದಾಗಿ ಘೋಷಣೆ ಕೂಗಿದರು. ಅಲ್ಲದೆ, “ಜಾಧವ್ ಚೋರ್ ಹೈ, ಅಂಬಾರಾಯ ಅಷ್ಠಗಿ ಚೋರ್ ಹೈ’ ಎಂದು ಕೂಗಿದರು.
ಇದರ ನಡುವೆಯೇ ಜಾಧವ್ ಅವರು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಹೊರ ಬಂದರು. ಆದರೆ, ಘೋಷಣೆಗೆ ಉತ್ತರವಾಗಿ ಮಾತನಾಡಿದ ಮುಖಂಡ ಅಂಬಾರಾಯ ಅಷ್ಠಗಿ, 60 ವರ್ಷ ದೇಶವನ್ನು ಲೂಟಿ ಮಾಡಿದ್ದಾರಲ್ಲ. ಅವರು ಚೋರ್ ಆಗಿದ್ದಾರೆ ಎಂದರು.
ನಂತರ, ಶಹಾಬಜಾರದಲ್ಲಿ ನಡೆದ ಚುನಾವಣಾ ಪ್ರಚಾರಸಭೆಯಲ್ಲಿ ಮಾತನಾಡಿದ ಅಭ್ಯರ್ಥಿ ಡಾ| ಉಮೆಶ ಜಾಧವ್, ಅಂಬೇಡ್ಕರ್ ಅವರಿಗೂ ಅನೇಕ ಸಲ ಕಾಂಗ್ರೆಸ್ನವರು ಅವಮಾನ ಮಾಡಿದ್ದರು. ಆದರೆ, ಅವರು ತಾಳ್ಮೆಯಿಂದ ಸ್ವೀಕರಿಸಿದ್ದರು. ಅದನ್ನು ನೆನಪಿಸಿಕೊಂಡು ತಾಳ್ಮೆಯಿಂದಲೇ ಅವಮಾನ ಸಹಿಸಿಕೊಂಡು ಬಂದಿದ್ದೇನೆ ಎಂದರು.