ಚುನಾವಣೆಯಲ್ಲಿ ಟಿಕೆಟ್ ನೀಡದ ಬಿಜೆಪಿಗೆ ಬೆಂಬಲವಿಲ್ಲ
Team Udayavani, Apr 17, 2019, 3:00 AM IST
ಬೆಂಗಳೂರು: “ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕುರುಬ ಸಮುದಾಯಕ್ಕೆ ಬಿಜೆಪಿ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಈ ಪಕ್ಷಕ್ಕೆ ಜನಾಂಗದವರು ಬೆಂಬಲ ನೀಡಬಾರದು’ ಎಂದು ಅಖೀಲ ಕರ್ನಾಟಕ ಕುರುಬರ ಮಹಾಸಭಾ ಅಧ್ಯಕ್ಷ ಜಗದೀಶ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಶೇ.63ರಷ್ಟು ಹಿಂದುಳಿದ ವರ್ಗದವರು ಮತ್ತು ಶೇ.12ರಷ್ಟು ಮುಸ್ಲಿಮರು ಇದ್ದು, ಒಟ್ಟಾರೆ ಶೇ.75ರಷ್ಟು ಅಭ್ಯರ್ಥಿಗಳ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ.
ಆದರೆ ಬಿಜೆಪಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಲು ಹಿಂದುಳಿದ ವರ್ಗ ಮತ್ತು ಮುಸ್ಲಿಮರಿಗೆ ಟಿಕೆಟ್ ನೀಡಿಲ್ಲ. ಅದರಲ್ಲಿ ಹಿಂದುಳಿದ ವರ್ಗದ ಮುಂಚೂಣಿಯಲ್ಲಿರುವ ಅಂದರೆ ರಾಜ್ಯದ ಜನಸಂಖ್ಯೆಯ 3ನೇ ಭಾಗಕ್ಕೂ ಹೆಚ್ಚಿರುವ ಕುರುಬ ಸಮುದಾಯವನ್ನು ಪಕ್ಷ ಕಡೆಗಣಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿಗೆ ಅಲ್ಪ ಸಂಖ್ಯಾತರು ಮತ ನೀಡಬೇಡಿ ಎಂದು ಬಿಜೆಪಿ ನಾಯಕ ಈಶ್ವರಪ್ಪ ಹೇಳಿಕೆ ನೀಡಿದ್ದು, ತಾವು ಕೋಮುವಾದಿ ಪಕ್ಷ ಎಂದು ಸಾಬೀತು ಪಡಿಸಿದ್ದಾರೆ. ಬಿಜೆಪಿಗೆ ಮತ ನೀಡದಂತೆ ಎಲ್ಲ ಹಿಂದುಳಿದ ವರ್ಗದವರು ಹೋರಾಟ ಹಮ್ಮಿಕೊಳ್ಳುವಂತೆ ಕರೆ ನೀಡಿದರು.