ಸೋಲಾರ್ ಗ್ರಿಡ್ಗೆ ಪ್ರಸ್ತಾವನೆ ಸಿದ್ಧಪಡಿಸಲು ಶಾಸಕರ ಸೂಚನೆ
Team Udayavani, Dec 25, 2019, 1:12 AM IST
ಬಂಟ್ವಾಳ : ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ವಿದ್ಯುತ್ ಬಿಲ್ ಪಾವತಿ ಗ್ರಾ.ಪಂ.ಗಳಿಗೆ ಹೊರೆಯಾಗುತ್ತಿದ್ದು, ಈ ಹೊರೆ ತಪ್ಪಿಸಲು ಸೋಲಾರ್ ಘಟಕ ಅಳವಡಿಸಲು ಅವಕಾಶವಿದ್ದು, ಅದರ ಕುರಿತು ಚರ್ಚೆ ನಡೆಸಿ ಪ್ರಸ್ತಾವನೆ ಸಿದ್ಧಪಡಿಸುವಂತೆ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಗಳವಾರ ಬಿ.ಸಿ. ರೋಡ್ನಲ್ಲಿರುವ ಎಸ್ಜಿಎಸ್ವೈ ಸಭಾಂಗಣದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕುರಿತು ಅಧಿಕಾರಿಗಳು, ಗ್ರಾ.ಪಂ. ಅಧ್ಯಕ್ಷರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಂಟ್ವಾಳ ಕ್ಷೇತ್ರದಲ್ಲಿ ಈಗಾಗಲೇ ಅನುಷ್ಠಾನಗೊಂಡಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಕರೋಪಾಡಿಯಲ್ಲಿ 65.08 ಲಕ್ಷ ರೂ. ಹಾಗೂ ಸಂಗಬೆಟ್ಟಿನಲ್ಲಿ 59 ಲಕ್ಷ ರೂ. ಬಾಕಿ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಈ ಮೊತ್ತ ಪಾವತಿ ಗ್ರಾ.ಪಂ.ಗಳಿಗೆ ಹೊರೆಯಾಗುತ್ತಿದ್ದು, ಇದರ ಜತೆಗೆ ಸಮರ್ಪಕ ನೀರು ಪೂರೈಕೆಯಿಲ್ಲದೆ ಗ್ರಾ.ಪಂ.ಗಳ ಪಂಪನ್ನೂ ಉಪಯೋಗಿಸಬೇಕಾದ ಸ್ಥಿತಿ ಇದೆ. ಹೀಗಾಗಿ ಅದು ಹೊರೆಯಾಗುತ್ತಿದೆ ಎಂದು ಗ್ರಾ.ಪಂ. ಪಿಡಿಒ ಒಬ್ಬರು ಸಭೆಗೆ ಮಾಹಿತಿ ನೀಡಿದರು.
ಕೆಲವು ಕಡೆ ಬಾಕಿ ಮನ್ನಾ
ಕೊಳ್ನಾಡು ಗ್ರಾ.ಪಂ. ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ, ಕೆಲವು ಜಿಲ್ಲೆಗಳಲ್ಲಿ ಈ ಮೊತ್ತವನ್ನು ಸರಕಾರ ಮನ್ನಾ ಮಾಡಿದ್ದು, ನಮಗೂ ಮನ್ನಾ ಮಾಡುವಂತೆ ತಾ.ಪಂ. ಇಒ ಮೂಲಕ ಸರಕಾರಕ್ಕೆ ಮನವಿ ಮಾಡಿದ್ದೇವೆ ಎಂದರು. ಈ ಕುರಿತು ಪ್ರಯತ್ನಿಸುವುದಾಗಿ ಶಾಸಕರು ಭರವಸೆ ನೀಡಿದರು.
ಇದಕ್ಕೆ ಶಾಶ್ವತ ಪರಿಹಾರ ನೀಡಬೇಕಾದರೆ ಸೋಲಾರ್ ಗ್ರಿಡ್ಗಳ ಅಳವಡಿಕೆ ಅಗತ್ಯವಾಗಿದ್ದು, ಅಳವಡಿಸುವ ನಿಟ್ಟಿನಲ್ಲಿ ಸ್ಥಳ ಪರಿಶೀಲನೆ ನಡೆಸಿ, ಎಷ್ಟು ಕೆವಿಯ ಸೋಲಾರ್ ಘಟಕ ನಿರ್ಮಿಸಬೇಕು, ಅದಕ್ಕೆ ತಗಲುವ ವೆಚ್ಚದ ಕ್ರೀಯಾಯೋಜನೆ ಸೇರಿ ಪ್ರಸ್ತಾವನೆ ಸಿದ್ಧಪಡಿಸುವಂತೆ ಶಾಸಕರು ಸೂಚನೆ ನೀಡಿದರು. ಪ್ರಸ್ತುತ ಒಂದು ಕಡೆ ಅದನ್ನು ಅನುಷ್ಠಾನಗೊಳಿಸಿ ಸಾಧಕ- ಬಾಧಕ ನೋಡಿ ಎಲ್ಲ ಕಡೆಗೂ ವಿಸ್ತರಿಸಲು ಚಿಂತನೆ ನಡೆಸೋಣ ಎಂದರು.
ವಿದ್ಯುತ್ ವ್ಯತ್ಯಯದಿಂದ ನೀರು ಪೂರೈಕೆ ಎಲ್ಲ ಕಡೆಗೂ ಕಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಮೆಸ್ಕಾಂ ಎಇಇ ಪ್ರಶಾಂತ್ ಪೈ ಅವರನ್ನು ಸಭೆಗೆ ಕರೆಸಿದಾಗ, ರೆಂಬೆಗಳಿಂದಾಗಿ ಕೆಲವು ಕಡೆ ತೊಂದರೆಯಾಗುತ್ತಿದೆ ಎಂದರು. ಅದರ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.
ಗ್ರಾ.ಪಂ. ಅಧ್ಯಕ್ಷರ ಆರೋಪ
ವಿಟ್ಲ ಪಟ್ನೂರು ಗ್ರಾ.ಪಂ. ಅಧ್ಯಕ್ಷ ರವೀಶ್ ಶೆಟ್ಟಿ, ತಮ್ಮ ಗ್ರಾ.ಪಂ. ವ್ಯಾಪ್ತಿ ಯಲ್ಲಿ ಕೆಲವಡೆ 2 ದಿನಗಳಿಗೊಮ್ಮೆ ನೀರು ನೀಡಲಾಗುತ್ತಿದೆ. ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯ ಅನುಷ್ಠಾನಗೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಪಂಜಿಕಲ್ಲು ಗ್ರಾ.ಪಂ. ಅಧ್ಯಕ್ಷ ಸುಮಿತ್ರಾ, ತಮ್ಮ ಗ್ರಾ.ಪಂ.ನ 2 ಟ್ಯಾಂಕ್ಗಳಿಗೆ ನೀರು ಹೋಗುತ್ತಿಲ್ಲ. ಮಜಲೋಡಿಯಲ್ಲಿ ಸಂಪ್ ಮಾಡಿಲ್ಲ ಎಂದು ದೂರಿದರು.
ಅಮಾrಡಿ ಗ್ರಾ.ಪಂ. ಅಧ್ಯಕ್ಷ ಹರೀಶ್ ಪಡು, ಲೊರೆಟ್ಟೋ ಟ್ಯಾಂಕ್ಗೆ ನೀರು ಹೋಗುತ್ತಿಲ್ಲ, ಕುರಿಯಾಳ ಟ್ಯಾಂಕ್ಗೆ ಸಂಪರ್ಕ ಕೊಟ್ಟಿಲ್ಲ ಎಂದು ಆರೋಪಿಸಿದರು. ಚೆನ್ನೈತ್ತೋಡಿ ಗ್ರಾ.ಪಂ. ಅಧ್ಯಕ್ಷ ಯತೀಶ್ ಶೆಟ್ಟಿ, ತಲಾ ಒಬ್ಬರಿಗೆ ದಿನಕ್ಕೆ 55 ಲೀ. ನೀರು ಸಾಲುತ್ತಿಲ್ಲ ಎಂದರು.
ಕ್ರಿಯಾಯೋಜನೆ ಸಿದ್ಧಪಡಿಸಿ
ಸಂಗಬೆಟ್ಟು ಯೋಜನೆಗೆ ನೀರಿನ ಕೊರತೆ ಬಾರದಂತೆ ಕಪೆì ಡ್ಯಾಂನ ಕಾಮಗಾರಿ ಭರದಿಂದ ಸಾಗು ತ್ತಿದ್ದು, ಎಪ್ರಿಲ್ನೊಳಗೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರ ರಿಗೆ ಸೂಚಿಸಲಾಗಿದೆ ಎಂದು ಶಾಸಕರು ತಿಳಿಸಿದರು. ಜತೆಗೆ ಪೊಳಲಿ ಪ್ರದೇಶಗಳ ಗ್ರಾ.ಪಂಗಳಿಗೆ ಪೊಳಲಿ ಡ್ಯಾಂನ ಕಾಮಗಾರಿ ನಡೆ ಯುತ್ತಿದೆ. ಆ ಭಾಗದಲ್ಲಿ ಹೊಸ ಯೋಜನೆಗೆ ಸಚಿವರು ಅನು ದಾನ ಘೋಷಿಸಿದ್ದು, ಶೀಘ್ರ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಸೂಚಿಸಿದರು. ಅಮಾrಡಿ ಗ್ರಾ.ಪಂ. ವ್ಯಾಪ್ತಿಯ ಕೆಂಪುಗುಡ್ಡೆ ಪ್ರದೇಶದಿಂದ ನೀರಿನ ಸಮಸ್ಯೆ ಕುರಿತು ಪದೇ ಪದೇ ಕರೆ ಬರುತ್ತಿದ್ದು, ಅದಕ್ಕೆ ಶಾಶ್ವತ ಪರಿಹಾರ ನೀಡುವಂತೆ ತಾ.ಪಂ.ಇಒ ರಾಜಣ್ಣ ಅವರು ಎಂಜಿನಿಯರ್ಗಳಿಗೆ ತಿಳಿಸಿದರು.
ಕೊಳವೆಬಾವಿಗೆ ಅನುದಾನವಿಲ್ಲ!
ಬಂಟ್ವಾಳ ವಿಧಾನಸಭಾ ಕ್ಷೇತ್ರದ ಎಲ್ಲ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವಿಸ್ತರಣೆಗೊಂಡ ಬಳಿಕ ಕೊಳವೆಬಾವಿಗೆ ಅನುದಾನ ನೀಡುವುದನ್ನು ನಿಲ್ಲಿಸು ತ್ತೇನೆ. ಈ ವರ್ಷ ಶೇ. 50, ಮುಂದಿನ ವರ್ಷ ಶೇ. 100 ಕೊಳವೆ ಬಾವಿಗೆ ಅನುದಾನ ಕಡಿತಗೊಳಿಸಲಾಗುತ್ತದೆ. ಜತೆಗೆ ಗ್ರಾ.ಪಂ.ವ್ಯಾಪ್ತಿಯ ಸರಕಾರಿ, ಖಾಸಗಿ ಕೊಳವೆಬಾವಿಗಳಿಗೆ ಮಳೆನೀರು ಕೊಯ್ಲು ಯೋಜನೆ ಅಳವಡಿಸಬೇಕು. ಈ ಕುರಿತು ಅಧ್ಯಕ್ಷರು, ಪಿಡಿಒಗಳಿಗೆ ಕಾರ್ಯಾಗಾರ ಆಯೋಜಿಸುವುದಾಗಿ ಶಾಸಕ ರಾಜೇಶ್ ನಾೖಕ್ ಭರವಸೆ ನೀಡಿದರು.
ಕೆಯುಡಬ್ಲ್ಯುಎಸ್ಡಿಬಿ ನಿವೃತ್ತ ಎಇಇ ಶೀನ ಮೂಲ್ಯ ಉಪಸ್ಥಿತರಿದ್ದರು. ಕಿರಿಯ ಎಂಜಿನಿಯರ್ಗಳಾದ ಜಗದೀಶ್ಚಂದ್ರ ನಿಂಬಾಳ್ಕರ್,ಅಜಿತ್ ಕೆ.ಎನ್. ಮಾಹಿತಿ ನೀಡಿದರು.