ಕೋವಿಡ್ 19: ಬಸವಕಲ್ಯಾಣ ಕ್ಷೇತ್ರದ ಕಾಂಗ್ರೆಸ್ ಶಾಸಕ ನಾರಾಯಣ ರಾವ್ ಅರೋಗ್ಯ ಸ್ಥಿತಿ ಗಂಭೀರ
Team Udayavani, Sep 23, 2020, 3:53 PM IST
ಬೀದರ: ಕೋವಿಡ್ ಸೋಂಕಿಗೆ ಒಳಗಾಗಿರುವ ಬಸವಕಲ್ಯಾಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾರಾಯಣರಾವ (65) ಅವರ ಆರೋಗ್ಯ ಸ್ಥಿತಿ ತೀವ್ರ ಚಿಂತಾಜನಕವಾಗಿದೆ.
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕಳೆದೆರಡು ವಾರಗಳಿಂದ ಚಿಕಿತ್ಸೆ ಪಡೆಯುತ್ತಿರುವ ಶಾಸಕರು, ಕಳೆದ ರಾತ್ರಿಯಿಂದ ದಿಢೀರ್ ಆರೋಗ್ಯ ಹದಗೆಟ್ಟಿದ್ದು ಕೃತಕ ಉಸಿರಾಟ (ವೆಂಟಿಲೇಟರ್) ವ್ಯವಸ್ಥೆ ಮಾಡಲಾಗಿದೆ. ಚಿಕಿತ್ಸೆಗೂ ಸೂಕ್ತವಾಗಿ ಸ್ಪಂದಿಸದ ಕಾರಣ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಈ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಖಚಿತಪಡಿಸಿದ್ದಾರೆ.
ಶಾಸಕ ನಾರಾಯಣರಾವ್ ಅವರಿಗೆ ಆ.31ರಂದು ಕೋವಿಡ್ ಸೋಂಕು ಪತ್ತೆಯಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಸೆ.1ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಪಿ ಮತ್ತು ಶುಗರ್ ಹೊಂದಿರುವ ಶಾಸಕರಿಗೆ ಆರಂಭದಲ್ಲೇ ಶ್ವಾಸಕೋಶಕ್ಕೆ ಸೋಂಕು, ನ್ಯೂಮೋನಿಯಾ ಹಿನ್ನಲೆ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಹಾಗಾಗಿ ಅವರಿಗೆ ಆಸ್ಪತ್ರೆಗೆ ದಾಖಲಾದ ಮರು ದಿನವೇ ವೆಂಟಿಲೇಟೆರ್ ವ್ಯವಸ್ಥೆ ಮಾಡಲಾಗಿತ್ತು.
ಚಿಕಿತ್ಸೆಯಿಂದ ಆರೋಗ್ಯದಲ್ಲಿ ಸುಧಾರಣೆ ಕಂಡಿದ್ದರಿಂದ ಇತ್ತೀಚೆಗೆ ವೆಂಟಿಲೇಟರ್ ಸಹ ತೆಗೆಯಲಾಗಿತ್ತು. ಶೀಘ್ರ ಗುಣಮುಖರಾಗಿ ಬೇಗ ಹೊರಬರಲಿದ್ದಾರೆ ಎಂದೆನ್ನಲಾಗಿತ್ತು. ಆದರೆ, ಈಗ ಮತ್ತೆ ನಾರಾಯಣ ಅವರ ಆರೋಗ್ಯದಲ್ಲಿ ಏರುಪೇರು ಆಗಿದ್ದರಿಂದ ಬಿಗಡಾಯಿಸಿದೆ. ಮತ್ತೆ ಅವರನ್ನು ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿದೆ. ಶಾಸಕ ಖಂಡ್ರೆ ಅವರು ವಿಡಿಯೋ ಕಾಲ್ ಮೂಲಕ ಆಸ್ಪತ್ರೆ ಐಸಿಯುನಲ್ಲಿರುವ ಶಾಸಕ ನಾರಾಯಣರಾವ್ ಅವರ ಸ್ಥಿತಿಯನ್ನು ವೀಕ್ಷಿಸಿದ್ದು, ಆಸ್ಪತ್ರೆ ಮುಖ್ಯಸ್ಥ ಡಾ. ಮಹೇಶ ಅವರೊಂದಿಗೆ ಕರೆ ಮಾಡಿ ಚರ್ಚೆ ನಡೆಸಿದ್ದಾರೆ.