ಹಕ್ಕಿ ಜ್ವರದ ಭೀತಿ: ಬನ್ನೇರುಘಟ್ಟ ಉದ್ಯಾನವನದಲ್ಲಿ ಮುನ್ನೆಚ್ಚರಿಕೆ ಕ್ರಮ
Team Udayavani, Jan 7, 2021, 1:28 PM IST
ಆನೇಕಲ್: ಬೆಂಗಳೂರು ಬನ್ನೇರುಘಟ್ಟ ಜೈವಿಕ ಉದ್ಯಾನ ಕೊರೊನಾ ಆತಂಕದ ನಡುವೆಯೂ ಒಂದಷ್ಟು ಪ್ರವಾಸಿಗರು ಆಗಮಿಸುತ್ತಿದ್ದ ಸಂತಸದ ಬೆನ್ನಲ್ಲೇ ಇದೀಗ ಹಕ್ಕಿ ಜ್ವರದ ಭೀತಿ ಕಾಣಿಸಿಕೊಂಡಿದ್ದು ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ.
ಹಕ್ಕಿ ಜ್ವರದ ಸುಳಿವು ಸಿಕ್ಕ ಕೂಡಲೇ ಉದ್ಯಾನವನದ ಅಧಿಕಾರಿಗಳು ಹಕ್ಕಿ ಜ್ವರದ ವಿರುದ್ಧ ಹೋರಾಡಲು ಎಲ್ಲ ಸಿದ್ಧತೆ ಮಾಡಕೊಳ್ಳ ತೊಡಗಿದ್ದಾರೆ.
ಬೆಂಗಳೂರು ಬನ್ನೇರುಘಟ್ಟ ಜೈವಿಕ ಉದ್ಯಾನ ವನದಲ್ಲಿ ವಿವಿಧ ಬಗೆಯ ಪ್ರಾಣಿ- ಪಕ್ಷಿಗಳ ಸಂಕುವಿಲದ್ದು ಮುನ್ನೆಚ್ಚರಿಕೆ ಕ್ರಮವಾಗಿ ಕಟ್ಟೆಚ್ಚರ ವಹಿಸಲಾಗಿದೆ. ಬೆಂಗಳೂರು, ಸೇರಿದಂತೆ ದೇಶ ವಿದೇಶಿ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ಉದ್ಯಾನವನದ ಒಳ ಹಾಗೂ ಹೊರ ಭಾಗದಲ್ಲಿ ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪೊಟ್ಯಾಷಿಯಂ ಪರ್ಮಾಂಗನೇಟ್ ಔಷಧಿ ಹಾಗೂ ಕೀಟನಾಶಕ ಪುಡಿ ಹಾಕಲಾಗುತ್ತಿದೆ. ಜತೆಗೆ ಪಕ್ಷಿಗಳ ಹಿಕ್ಕೆ ಮತ್ತು ಬನ್ನೇರುಘಟ್ಟ ಜೈವಿಕ ಉದ್ಯಾನವನದ
ಸುತ್ತಮುತ್ತಲಿನ ಕಡೆ ಯಾವುದಾದರೂ ಪಕ್ಷಿ ಸಾವನ್ನಪ್ಪಿದರೆ ಅದರ ಬಗ್ಗೆ ತೀವ್ರ ನಿಗಾ ವಹಿಸಲಾಗಿದೆ. ಇದುವರೆಗೆ ಬನ್ನೇರುಘಟ್ಟ
ಜೈವಿಕ ಉದ್ಯಾನವನದಲ್ಲಿ ಹಕ್ಕಿ ಜ್ವರದಂತಹ ಯಾವುದೇ ಲಕ್ಷಣ ಕಂಡು ಬಂದಿಲ್ಲ. ಹೀಗಾಗಿ ಹೊರಗಿನಿಂದ ಬರುವ ಪಕ್ಷಿಗಳು
ಉದ್ಯಾನವನದಲ್ಲಿರುವ ಪಕ್ಷಿಗಳ ಸಂಪರ್ಕಕ್ಕೆ ಸಿಗದಂತೆ ನೋಡಿಕೊಳ್ಳಲಾಗುತ್ತಿದೆ.
ಉದ್ಯಾನವನಕ್ಕೆ ಒಳ ಬರುವಾಗ ಹಾಗೂ ಹೊರ ಹೋಗುವ ಸಂದರ್ಭದಲ್ಲಿ ಸಿಬ್ಬಂದಿ ಕೈ ಕಾಲು ತೊಳೆದುಕೊಂಡು ಸ್ಯಾನಿಟೈಸರ್, ಮಾಸ್ಕ್ ಹಾಕಿಕೊಂಡು ಕಡ್ಡಾಯವಾಗಿ ಬರಲು ಸೂಚನೆ ನೀಡಲಾಗಿದೆ. ಜತೆಗೆ ಪ್ರವೇಶ ಬಾಗಿಲು, ನಿರ್ಗಮನದ ಬಾಗಿಲಿನ ಬಳಿ ಪ್ರಾಣಿ- ಪಕ್ಷಿ ಪ್ರಿಯರು ಈ ಔಷಧದ ಮೇಲೆ ಕಾಲಿಟ್ಟು ಕೈಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಿಕೊಂಡು ಒಳ ಹಾಗೂ ಹೊರ ಹೋಗುವ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಬರುವ ಪ್ರತಿ ವಾಹನಕ್ಕೆ ಔಷಧ ಸಿಂಪಡಣೆ ಮಾಡಿ ಒಳ ಬಿಡಲಾಗುತ್ತಿದ್ದು ಹಕ್ಕಿ ಜ್ವರದ ಹಿನ್ನೆಲೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಹಣಾಧಿಕಾರಿ ವನಶ್ರೀ ವಿಪಿನ್ ಸಿಂಗ್ ಮಾಹಿತಿ ನೀಡಿದ್ದಾರೆ.