ಕಾಂಗ್ರೆಸ್ ನವರನ್ನು ರಾಜಕೀಯ ಟಾರ್ಗೆಟ್ ಮಾಡಲಾಗುತ್ತಿದೆ: ದಿನೇಶ್ ಗುಂಡೂರಾವ್
Team Udayavani, Sep 4, 2019, 12:56 PM IST
ಬೆಂಗಳೂರು: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಬಂಧಿಸಿರುವುದು ಫ್ಯಾಸಿಸ್ಟ್ ಧೋರಣೆಯ ಸರ್ಕಾರ. ಬಿಜೆಪಿಯಿಂದ ಕಾಂಗ್ರೆಸ್ ನವರನ್ನು ರಾಜಕೀಯವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ಬಿಜೆಪಿಯಲ್ಲಿ ಭ್ರಷ್ಟರು ಇಲ್ಲವೇ? ಅವರಲ್ಲಿ ಭ್ರಷ್ಟರನ್ನು ಬೆಳೆಸಲಾಗುತ್ತಿದೆ. ಜನರಲ್ಲಿ ಬಿಜೆಪಿ ವಿರುದ್ದ ಆಕ್ರೋಶ ಹೆಚ್ಚಾಗುತ್ತಿದೆ. ಡಿಕೆಶಿಯವರನ್ನು ನಾಲ್ಕು ದಿನ ವಿಚಾರಣೆ ಮಾಡಿ ಬಂಧಿಸುವ ಅಗತ್ಯ ಏನಿತ್ತು? ಕಾನೂನು ಪ್ರಕಾರ ಮಾಡೋದಾಗಿದ್ರೆ ಪ್ರಾಸಿಕ್ಯೂಟ್ ಮಾಡಬೇಕಿತ್ತು ಎಂದು ಹೇಳಿದರು.
ಯಡಿಯೂರಪ್ಪ ಈಗ ಏನೇ ಅನುಕಂಪದ ಮಾತನಾಡಬಹುದು. ಜನಾಕ್ರೋಶ ಬಿಜೆಪಿ ವಿರುದ್ದಇದೆ ಅನ್ನೋದು ಯಡಿಯೂರಪ್ಪಗೂ ಅರ್ಥವಾಗಿದೆ. ಆದರೆ ಯಡಿಯೂರಪ್ಪ ನ ಮಾತನ್ನು ದೆಹಲಿಯಲ್ಲಿ ಯಾರೂ ಕೇಳುವುದಿಲ್ಲ ಎಂದು ಬಿಜೆಪಿ ಮತ್ತು ಯಡಿಯೂರಪ್ಪ ವಿರುದ್ಧ ಗುಡುಗಿದರು.
ನಾವು ಏನೇ ಫೇಲ್ ಆಗಿರಬಹುದು, ಆದರೆ ತುರ್ತು ಪರಿಸ್ಥಿತಿಯಂತ ವಾತಾವರಣ ಸೃಷ್ಟಿಯಾಗಿದೆ. ಇದನ್ನು ನಾವು ಇಲ್ಲಿಗೇ ನಿಲ್ಲಿಸೋದಿಲ್ಲ. ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.