ಚಾಮರಾಜನಗರ: ಸಾಲ ತೀರಿಸಲಾಗದೇ ಮಗನನ್ನೇ ಮಾರಿದ ತಂದೆ
ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ಬಸವ ಮಾಹಿತಿ ನೀಡಿದ್ದಾನೆ.
Team Udayavani, Sep 21, 2022, 12:50 PM IST
ಚಾಮರಾಜನಗರ: ಹೃದಯದ ಕಾಯಿಲೆಯಿದ್ದ ಹೆಂಡತಿಯ ಚಿಕಿತ್ಸೆಗಾಗಿ ಹಾಗೂ ತಾನು ಮಾಡಿದ್ದ ಸಾಲಗಳನ್ನು ತೀರಿಸಲು 20 ದಿನಗಳ ಗಂಡು ಮಗುವನ್ನೇ ತಂದೆಯೋರ್ವ ಮಾರಾಟ ಮಾಡಿರುವ ಪ್ರಕರಣ ನಗರದಲ್ಲಿ ನಡೆದಿದೆ.
ನಗರದ ಹೋಟೆಲ್ ಒಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಬಸವ ಎಂಬಾತ ಮಗುವನ್ನು ಬೆಂಗಳೂರಿನ ವ್ಯಕ್ತಿಯೋರ್ವನಿಗೆ ಮಾರಾಟ ಮಾಡಿದ್ದನ್ನು ಒಪ್ಪಿಕೊಂಡಿದ್ದು ಆತನನ್ನು ಬಂಧಿಸಿರುವ ಪೊಲೀಸರು ಮಗುವನ್ನು ಕೊಂಡಿರುವ ವ್ಯಕ್ತಿಗಾಗಿ ಶೋಧ ನಡೆಸಿದ್ದಾರೆ. ಮಗುವಿನ ತಾಯಿ ಸ್ವಾಧಾರ ಕೇಂದ್ರದಲ್ಲಿರಲು ಒಪ್ಪದ ಕಾರಣ ಆಕೆಯ ಪೋಷಕರ ಜತೆಯಲ್ಲಿದ್ದಾಳೆ.
ನಗರದ ಹೋಟೆಲ್ ಕಾರ್ಮಿಕ ಬಸವ ಹಾಗೂ ಆತನ ಪತ್ನಿ ನಾಗವೇಣಿಗೆ 7 ವರ್ಷದ ಗಂಡು ಮಗುವಿದ್ದು, 25 ದಿನಗಳ ಹಿಂದೆ ಇನ್ನೊಂದು ಮಗು ಜನಿಸಿತ್ತು. ಬಡತನ, ಸಾಲದ ಹೊರೆ, ಹೆಂಡತಿಯ ಹೃದಯದ ಕಾಯಿಲೆ ಕಾರಣ, ಚಿಕಿತ್ಸೆಗಾಗಿ ಹಣ ಬೇಕಾಗಿತ್ತು. ಮಗುವನ್ನು ಸಾಕುವ ಶಕ್ತಿ ನನಗಿರಲಿಲ್ಲ.
ಹಣದ ಸಮಸ್ಯೆ ಕುರಿತು ನನ್ನ ಸಹ ಕಾರ್ಮಿಕ ಖಾಸಿಂ ಎಂಬುವವನ ಬಳಿ ಹೇಳಿಕೊಂಡಿದ್ದೆ. ಮಗುವನ್ನು ಮಾರಾಟ ಮಾಡಲು ಸಿದ್ದವಿದ್ದೇನೆ. ಯಾರಾದರೂ ಇದ್ದರೆ ಹೇಳು ಎಂದಿದ್ದೆ. ಆದರೆ, ನನ್ನ ಬಲವಂತಕ್ಕೆ ಮಣಿದು ಮಗು ಅಗತ್ಯ ಇದ್ದ ಬೆಂಗಳೂರು ಮೂಲದವರಿಗೆ ಮಗುವನ್ನು ಕೊಡಿಸಿದ. ಅವರ ಬಳಿ 50 ಸಾವಿರ ರೂ. ಪಡೆದಿದ್ದೇನೆ ಎಂದು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ಬಸವ ಮಾಹಿತಿ ನೀಡಿದ್ದಾನೆ. ಪತ್ನಿ ನಾಗವೇಣಿ ಮಗುವನ್ನು ಕೊಡಲು ನಿರಾಕರಿಸಿದ್ದಾಳೆ. ಅನಿವಾರ್ಯವಾಗಿ ಖಾಲಿ ಪೇಪರ್ ಮೇಲೆ ಆಕೆ ಸಹಿ ಪಡೆದು ಮಗುವನ್ನು ಮಾರಾಟ ಮಾಡಲಾಗಿದೆ. ಈ ವಿಚಾರವಾಗಿ ನಾಗವೇಣಿಯು ಹೇಳಿಕೆ ದಾಖಲಿಸಿದ್ದಾರೆ.