ಆರೋಗ್ಯ ವಾಣಿ: ಬಾಲ್ಯಕಾಲದ ಕ್ಯಾನ್ಸರ್‌ಗಳನ್ನು ಗುಣಪಡಿಸಬಹುದು


Team Udayavani, Feb 19, 2023, 9:40 AM IST

CANCER copy

ಪ್ರತೀ ವರ್ಷ ಜಗತ್ತಿನಲ್ಲಿ ಮೂರರಿಂದ ನಾಲ್ಕು ಲಕ್ಷ ಮಂದಿ ಮಕ್ಕಳಲ್ಲಿ ಕ್ಯಾನ್ಸರ್‌ ಪತ್ತೆಯಾಗುತ್ತಿದೆ. ಭಾರತದಲ್ಲಿ ಪ್ರತೀ ವರ್ಷ 50 ಸಾವಿರ ಮಕ್ಕಳು ಕ್ಯಾನ್ಸರ್‌ಪೀಡಿತರಾಗುತ್ತಿದ್ದಾರೆ. ಕ್ಯಾನ್ಸರ್‌ಪೀಡಿತ ಮಕ್ಕಳು ಬದುಕುಳಿಯುವ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದ ದೇಶಗಳಿಗೂ ಅಭಿವೃದ್ಧಿಶೀಲ ದೇಶಗಳಿಗೂ ಅಪಾರ ಅಂತರವಿದೆ.

ಬಾಲ್ಯಕಾಲದ ಕ್ಯಾನ್ಸರ್‌ಗಳಲ್ಲಿ ಬಹುತೇಕ ಪ್ರಕರಣಗಳು ಬೇಗನೆ ಪತ್ತೆ ಮಾಡಿ ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ಮತ್ತು ಆ ಬಳಿಕ ಸಮರ್ಪಕವಾದ ಪೂರಕ ಆರೈಕೆ ಒದಗಿಸಿದರೆ ಗುಣಪಡಿಸಬಹುದಾದಂಥವು. ಆದರೆ ನಮ್ಮ ದೇಶದ ಅನೇಕ ಭಾಗಗಳಲ್ಲಿ ಕ್ಯಾನ್ಸರ್‌ಪೀಡಿತ ಮಕ್ಕಳಿಗೆ ಸರಿಯಾದ ಚಿಕಿತ್ಸೆ ಲಭ್ಯವಿಲ್ಲ. ಮಕ್ಕಳಲ್ಲಿ ಕಂಡುಬರುವ ಕ್ಯಾನ್ಸರ್‌ಗಳು ವಯಸ್ಕರಲ್ಲಿ ಕಂಡುಬರುವ ಕ್ಯಾನ್ಸರ್‌ಗಳಿಗಿಂತ ಭಿನ್ನ. ಬಾಲ್ಯಕಾಲದ ಬಹುತೇಕ ಕ್ಯಾನ್ಸರ್‌ಗಳು ಯಾಕೆ ಉಂಟಾಗುತ್ತವೆ ಎಂಬುದು ನಮಗೆ ತಿಳಿದುಬರುತ್ತಿಲ್ಲ.

ಮಕ್ಕಳಲ್ಲಿ ಉಂಟಾಗುವ ಕ್ಯಾನ್ಸರ್‌ಗಳಲ್ಲಿ ಜೀವನ ಶೈಲಿ ಸಂಬಂಧಿ, ಪರಿಸರ ಸಂಬಂಧಿ ಅಂಶಗಳ ಪಾತ್ರ ಬಹಳ ಸೀಮಿತವಾದುದು. ಅವು ಮುಂದುವರಿದ ಹಂತಗಳಲ್ಲಿ ಪತ್ತೆಯಾದರೂ ಚಿಕಿತ್ಸೆಗೆ ಚೆನ್ನಾಗಿ ಪ್ರತಿಸ್ಪಂದಿಸುತ್ತವೆ. ಬಾಲ್ಯಕಾಲದಲ್ಲಿ ಕಂಡುಬರುವ ಕ್ಯಾನ್ಸರ್‌ ವಿಧಗಳು ಕೂಡ ವಯಸ್ಕರಲ್ಲಿ ಕಂಡುಬರುವವುಗಳಿಗಿಂತ ಭಿನ್ನ. ಮಕ್ಕಳಲ್ಲಿ ಬಹಳ ಸಾಮಾನ್ಯವಾಗಿ ರಕ್ತದ ಕ್ಯಾನ್ಸರ್‌, ಮಿದುಳಿನ ಗಡ್ಡೆಗಳು, ಜಠರದ ಮಾಂಸದ ಗಡ್ಡೆಗಳು ಮತ್ತು ಲಿಂಫೋಮಾಗಳು ಉಂಟಾಗುತ್ತವೆ.

ಮಕ್ಕಳು ವಯಸ್ಕರಿಗಿಂತ ಹೆಚ್ಚು ಉತ್ತಮವಾಗಿ ಕಿಮೊಥೆರಪಿಯನ್ನು ತಾಳಿಕೊಳ್ಳಬಲ್ಲರು. ಮಕ್ಕಳ ಹೆತ್ತವರು ಮತ್ತು ಸಂಬಂಧಿಗಳು ಸಾಮಾನ್ಯವಾಗಿ ಕೇಳುವ ಪ್ರಶ್ನೆ, ಕ್ಯಾನ್ಸರ್‌ ಉಂಟಾಗುವುದಕ್ಕೆ ಕಾರಣವೇನು ಮತ್ತು ಅದನ್ನು ತಡೆಯುವುದು ಹೇಗೆ? ಜೀವಕೋಶಗಳು ದುರಸ್ತಿ ಹೊಂದುವ ದೇಹದ ವ್ಯವಸ್ಥೆಗೆ ತೊಂದರೆ ಉಂಟಾಗಿ ಕೆಟ್ಟ ಜೀವಕೋಶಗಳು ಅನಿಯಂತ್ರಿತವಾಗಿ ಉತ್ಪಾದನೆಗೊಳ್ಳಲು ಆರಂಭವಾಗುವುದರಿಂದ ಕ್ಯಾನ್ಸರ್‌ ಅಭಿವೃದ್ಧಿ ಹೊಂದುತ್ತದೆ. ಬಾಲ್ಯಕಾಲದ ಕ್ಯಾನ್ಸರ್‌ಗಳನ್ನು ಗುಣಪಡಿಸಬಹುದು.

ಪ್ರತೀ ವರ್ಷ ಫೆಬ್ರವರಿ 15ನೇ ದಿನಾಂಕವನ್ನು ಅಂತಾರಾಷ್ಟ್ರೀಯ ಬಾಲ್ಯಕಾಲದ ಕ್ಯಾನ್ಸರ್‌ ದಿನವನ್ನಾಗಿ ಆಚರಿಸಲಾಗುತ್ತದೆ. ಮಕ್ಕಳಲ್ಲಿ ಕಂಡುಬರುವ ಕ್ಯಾನ್ಸರ್‌ಗಳ ಬಗ್ಗೆ ಸಮಾಜದಲ್ಲಿ ಅರಿವನ್ನು ಹೆಚ್ಚಿಸುವುದು ಮತ್ತು ಕ್ಯಾನ್ಸರ್‌ ಪೀಡಿತ ಮಕ್ಕಳಿರುವ ಕುಟುಂಬಗಳಿಗೆ ನೆರವನ್ನು ಕ್ರೋಡೀಕರಿಸುವುದು ಈ ದಿನಾಚರಣೆಯ ಪ್ರಧಾನ ಉದ್ದೇಶವಾಗಿದೆ.

ಬಾಲ್ಯಕಾಲದಲ್ಲಿ ಕಂಡುಬರುವ ಕ್ಯಾನ್ಸರ್‌ ಗಳಲ್ಲಿ ಅತೀ ಸಾಮಾನ್ಯವಾದುದು ರಕ್ತದ ಕ್ಯಾನ್ಸರ್‌. ಮಕ್ಕಳ ಕ್ಯಾನ್ಸರ್‌ಗಳಲ್ಲಿ ಮೂರನೇ ಒಂದರಷ್ಟು ಪ್ರಕರಣಗಳು ಇವೇ ಆಗಿರುತ್ತವೆ. ಈ ಬಗ್ಗೆ ಹೆತ್ತವರ ಜತೆಗೆ ಸೂಕ್ತ ಆರಂಭಿಕ ಆರೈಕೆ ಒದಗಿಸಿ ಸರಿಯಾದ ಕ್ಯಾನ್ಸರ್‌ ತಜ್ಞ ವೈದ್ಯರಿಗೆ ಶಿಫಾರಸು ಮಾಡಿ ಚಿಕಿತ್ಸೆಗೆ ಕಳುಹಿಸಿಕೊಡುವ ವಿಚಾರವಾಗಿ ವೈದ್ಯರಲ್ಲಿಯೂ ನಾವು ಜಾಗೃತಿಯನ್ನು ಉಂಟು ಮಾಡಬೇಕಿದೆ. ಗುಣ ಹೊಂದದ ದೀರ್ಘ‌ಕಾಲೀನ ಜ್ವರ, ದೇಹದಲ್ಲಿ ನೋವು, ಎಲುಬು ನೋವು, ಸರಿಯಾಗಿ ಆಹಾರ ಸೇವಿಸದಿರುವುದು, ತೂಕ ಕಳೆದುಕೊಳ್ಳುವುದು, ಚರ್ಮದಲ್ಲಿ ಗಾಯದಂತಹ ಗುರುತುಗಳು ಉಂಟಾಗುವುದು, ರಕ್ತಸ್ರಾವ, ಕುತ್ತಿಗೆಯಲ್ಲಿ ಸಣ್ಣದಾಗಿ ಊತ ಕಾಣಿಸಿಕೊಳ್ಳುವುದು ರಕ್ತದ ಕ್ಯಾನ್ಸರ್‌ನ ಲಕ್ಷಣಗಳು.

ಸಿಬಿಸಿಯಂತಹ ಸರಳ ರಕ್ತ ಪರೀಕ್ಷೆಯಿಂದ ರಕ್ತದ ಕ್ಯಾನ್ಸರನ್ನು ಕಂಡುಹಿಡಿಯಬಹುದು; ಈ ಪರೀಕ್ಷೆಯಲ್ಲಿ ಕಡಿಮೆ ಹಿಮೊಗ್ಲೊಬಿನ್‌ ಪ್ರಮಾಣ, ಲಿಂಫೊಸೈಟ್‌ ಹೆಚ್ಚಳ, ಪ್ಲೇಟ್‌ಲೆಟ್‌ ಪ್ರಮಾಣ ಕುಸಿತ, ಬಿಳಿ ರಕ್ತ ಕಣಗಳ ಹೆಚ್ಚಳ ಅಥವಾ ಕುಸಿತ ಪತ್ತೆಯಾಗುತ್ತದೆ. ಸರಿಯಾದ ಚಿಕಿತ್ಸೆಯನ್ನು ಒದಗಿಸಿದರೆ ಶೇ. 80ರಷ್ಟು ರಕ್ತದ ಕ್ಯಾನ್ಸರ್‌ ಪ್ರಕರಣಗಳನ್ನು ಗುಣಪಡಿಸಬಹುದಾಗಿದೆ. ಹಾಜ್‌ಕಿನ್ಸ್‌ ಲಿಂಫೊಮಾ, ವಿಲ್ಮ್ಸ್ ಟ್ಯೂಮರ್‌, ರೆಟಿನೊಬ್ಲಾಸ್ಟೊಮಾದಂಥವುಗಳಲ್ಲಿ ಗುಣ ಹೊಂದುವ ಪ್ರಮಾಣ ಶೇ. 90ರಷ್ಟಿರುತ್ತದೆ.

ಬೆಳಗಿನ ಜಾವದಲ್ಲಿ ವಾಂತಿ, ಪದೇ ಪದೆ ತಲೆನೋವು, ಸಮತೋಲನ ಮತ್ತು ನಡಿಗೆಯಲ್ಲಿ ತೊಂದರೆ, ವರ್ತನೆ ಮತ್ತು ಕೈಬರಹದಲ್ಲಿ ಬದಲಾವಣೆಗಳು ಕಂಡುಬರುವುದು ಮಿದುಳು ಗಡ್ಡೆಗಳ ಲಕ್ಷಣಗಳಾಗಿರಬಹುದು. ಮಕ್ಕಳಲ್ಲಿ ಕಂಡುಬರುವ ಕ್ಯಾನ್ಸರ್‌ಗಳಿಗೆ ಚಿಕಿತ್ಸೆ ಒದಗಿಸುವುದು ಸವಾಲಾಗಿರುತ್ತದೆ. ಮಕ್ಕಳು ಇತರ ಮಕ್ಕಳೊಡನೆ ಬೆರೆತು ಆಟವಾಡುತ್ತ, ಶಾಲೆಯಲ್ಲಿ ಕಲಿಯುತ್ತ ಇರಬೇಕಾದವರು. ಆದರೆ ಒಮ್ಮೆ ಕ್ಯಾನ್ಸರ್‌ಗೆ ಚಿಕಿತ್ಸೆ ಆರಂಭಿಸಿದ ಬಳಿಕ 2-3 ವರ್ಷಗಳ ಕಾಲ ಆಸ್ಪತ್ರೆಯ ಪರಿಸರದಲ್ಲಿ ಅವರು ಸಮಯ ವ್ಯಯಿಸಬೇಕಾಗುತ್ತದೆ.

ಕ್ಯಾನ್ಸರ್‌ ಪೀಡಿತ ಮಕ್ಕಳ ಕುಟುಂಬಗಳು ಕೂಡ ಹೆಣಗಾಡಬೇಕಾಗುತ್ತದೆ, ಪರಿಸ್ಥಿತಿಗೆ ಹೊಂದಿಕೊಳ್ಳಲು ಕಷ್ಟಪಡಬೇಕಾಗುತ್ತದೆ; ಅಂತಹ ಮಕ್ಕಳ ಒಡಹುಟ್ಟಿದವರು ಹೆತ್ತವರ ಗಮನ ತಮ್ಮತ್ತ ಕಡಿಮೆಯಾಗುವುದರಿಂದ ತೊಂದರೆಗೆ ಈಡಾಗಬಹುದು. ಕ್ಯಾನ್ಸರ್‌ ಪೀಡಿತ ಮಕ್ಕಳ ಹೆತ್ತವರಿಬ್ಬರೂ ಮಗುವಿನ ಜತೆಗೆ ಸಾಕಷ್ಟು ಕಾಲ ಆಸ್ಪತ್ರೆಯಲ್ಲಿ ವ್ಯಯಿಸಬೇಕಾದ ಕಾರಣ ಉದ್ಯೋಗ ನಿರ್ವಹಿಸುವುದು ಕಷ್ಟಸಾಧ್ಯವಾಗುತ್ತದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಕ್ಯಾನ್ಸರ್‌ಪೀಡಿತ ಮಕ್ಕಳು ಬದುಕುಳಿಯುವ ಪ್ರಮಾಣ ಶೇ. 90ರಷ್ಟಿದ್ದರೆ ಭಾರತದಲ್ಲಿ ಇದು ಶೇ. 40-50ರಷ್ಟು ಮಾತ್ರವೇ ಇದೆ. ಇದು ಕೂಡ ಕೇಂದ್ರದಿಂದ ಕೇಂದ್ರಕ್ಕೆ, ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ. ಕ್ಯಾನ್ಸರ್‌ ಪತ್ತೆಯಾಯಿತು ಎಂದರೆ ಮರಣದಂಡನೆಗೆ ತುತ್ತಾದಂತೆ ಎಂಬ ಪರಿಸ್ಥಿತಿ ಹಿಂದೆ ಒಂದು ಕಾಲದಲ್ಲಿತ್ತು. ಆದರೆ ಸುದೈವವಶಾತ್‌ ಈಗ ಅಂತಹ ಪರಿಸ್ಥಿತಿ ಇಲ್ಲ.

ಚೈಲ್ಡ್‌ಹುಡ್‌ ಅಕ್ಯೂಟ್‌ ಲಿಂಫೊಬ್ಲಾಸ್ಟಿಕ್‌ ಲ್ಯುಕೇಮಿಯಾ (ರಕ್ತದ ಕ್ಯಾನ್ಸರ್‌ನ ಒಂದು ವಿಧ) ಗುಣ ಹೊಂದುವ ಪ್ರಮಾಣ ಶೇ. 30 ಇದ್ದದ್ದು ಈಗ ಶೇ. 90ಕ್ಕಿಂತಲೂ ಅಧಿಕವಾಗಿದ್ದು, ಇದನ್ನು ಆಧುನಿಕ ವೈದ್ಯಕೀಯದ ಯಶೋಗಾಥೆ ಎಂಬುದಾಗಿ ಬಣ್ಣಿಸಲಾಗುತ್ತಿದೆ. ಇದರ ಚಿಕಿತ್ಸೆಗೆ 2ರಿಂದ 3 ವರ್ಷಗಳು ತಗಲುತ್ತವೆ. ಇತರ ಕ್ಯಾನ್ಸರ್‌ಗಳಿಗೆ 2 ತಿಂಗಳುಗಳಿಂದ ತೊಡಗಿ 12 ತಿಂಗಳುಗಳವರೆಗೆ ಸಮಯ ಬೇಕು.

ಆಧುನಿಕ ಪೆಥಾಲಜಿ ಪ್ರಯೋಗಾಲಯಗಳು, ರೇಡಿಯಾಲಜಿ ಸೇವೆಗಳು, ರಕ್ತನಿಧಿಗಳು, ರೇಡಿಯೇಶನ್‌ ಓಂಕಾಲಜಿಗಳ ಲಭ್ಯತೆ, ಉತ್ತಮ ದಾದಿ ಆರೈಕೆಗಳೊಂದಿಗೆ ಭಾರತದಲ್ಲಿ ಅನೇಕ ಆಸ್ಪತ್ರೆಗಳು ಕ್ಯಾನ್ಸರ್‌ ಪೀಡಿತ ಮಕ್ಕಳಿಗೆ ಸಮಗ್ರ ಆರೈಕೆ ಒದಗಿಸುವಂತಾಗಿದೆ. ಅತ್ಯುತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಸರಿಯಾದ ಸಮಯಕ್ಕೆ ಒದಗಬೇಕಾದರೆ ಸಾಕಷ್ಟು ಹಣ ಕೂಡ ವ್ಯಯಿಸಬೇಕಾಗುತ್ತದೆ. ಆದ್ದರಿಂದ ಕ್ಯಾನ್ಸರ್‌ಗೆ ಚಿಕಿತ್ಸೆ ಸಾಕಷ್ಟು ದುಬಾರಿಯಾಗಿದೆ. ಅದೃಷ್ಟವಶಾತ್‌ ಈಗಿನ ದಿನಗಳಲ್ಲಿ ಅಗತ್ಯವುಳ್ಳ ಮಕ್ಕಳಿಗೆ ಧನಸಹಾಯ ಒದಗಿಸಲು ಉದಾರ ದಾನಿಗಳು, ಸರಕಾರೇತರ ಸಂಸ್ಥೆಗಳು ಮುಂದೆ ಬರುತ್ತಿವೆ; ಸರಕಾರಿ ಯೋಜನೆಗಳು ಕೂಡ ಇವೆ.

ಈ ಎಲ್ಲ ಸಹಾಯದಿಂದಾಗಿ ಚಿಕಿತ್ಸೆಯನ್ನು ಸಂಪೂರ್ಣಗೊಳಿಸುವ ಮೂಲಕ ಗುಣ ಹೊಂದುವ ಒಟ್ಟಾರೆ ಪ್ರಮಾಣ ಚೆನ್ನಾಗಿದೆ. ಕರ್ನಾಟಕದ ಕರಾವಳಿಯ ನಮ್ಮ ಈ ಭಾಗದಲ್ಲಂತೂ ಕ್ಯಾನ್ಸರ್‌ ಪೀಡಿತ ಯಾವುದೇ ಒಂದು ಮಗು ಹಣಕಾಸಿನ ಕೊರತೆಯ ಕಾರಣದಿಂದಾಗಿ ಚಿಕಿತ್ಸೆ ಪಡೆಯದಂತಹ ಪರಿಸ್ಥಿತಿ ಇಲ್ಲ.

~ ಡಾ| ಹರ್ಷಪ್ರಸಾದ ಎಲ್‌, ಕನ್ಸಲ್ಟಂಟ್‌ ಪೀಡಿಯಾಟ್ರಿಕ್‌ ಹೆಮಟಾಲಜಿಸ್ಟ್‌ ಮತ್ತು ಓಂಕಾಲಜಿಸ್ಟ್‌ ಕೆಎಂಸಿ ಆಸ್ಪತ್ರೆ, ಮಂಗಳೂರು

ಇದನ್ನೂ ಓದಿಆ್ಯಂಬುಲೆನ್ಸ್‌ನಲ್ಲೇ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

ಟಾಪ್ ನ್ಯೂಸ್

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.