ಭೂ ಪರಿವರ್ತನೆ ಮಾಡಿಕೊಡಲು ಲಂಚ ಸ್ವೀಕಾರ : ಸರ್ವೇಯರ್ಗೆ 2 ವರ್ಷ ಸಜೆ ವಿಧಿಸಿದ ನ್ಯಾಯಾಲಯ
Team Udayavani, Dec 2, 2021, 8:26 PM IST
ಮಂಗಳೂರು : ಲಂಚ ಸ್ವೀಕಾರ ಪ್ರಕರಣದಲ್ಲಿ ನ್ಯಾಯಾಲಯವು ಸರ್ವೇಯರ್ ಓರ್ವರಿಗೆ ಶಿಕ್ಷೆ ವಿಧಿಸಿದೆ.
ಸರ್ವೇಯರ್ ಟಿ.ಪಿ. ಹೀರೇಗೌಡ ಶಿಕ್ಷೆಗೆ ಒಳಗಾದವನು. ಈತ 2014ರಲ್ಲಿ ಬೆಳ್ತಂಗಡಿ ತಾಲೂಕಿನ ಸರ್ವೇಯರ್ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಭೂ ಪರಿವರ್ತನೆ ಮಾಡಿಕೊಡಲು ಎ.ಕುಟ್ಟಿಚ್ಚ ಮೊಗೇರ ಎಂಬವರಿಂದ 5,000 ರೂ. ಲಂಚದ ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿದ ಮೇರೆಗೆ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗಿತ್ತು. ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಬಿ.ಜಕಾತಿ ಅವರು ವಿಚಾರಣೆ ನಡೆಸಿ ಡಿ.2ರಂದು ತೀರ್ಪು ನೀಡಿದ್ದಾರೆ.
ಅಪರಾಧಿಗೆ 2 ವರ್ಷಗಳ ಸಾದಾ ಸಜೆ, 5,000 ರೂ. ದಂಡ; ದಂಡ ಪಾವತಿಸಲು ವಿಫಲನಾದರೆ ಮತ್ತೆ 6 ತಿಂಗಳ ಸಾದಾ ಸಜೆ ವಿಧಿಸಿ ನ್ಯಾಯಾಧೀಶರು ಆದೇಶ ನೀಡಿದ್ದಾರೆ.
ಲೋಕಾಯುಕ್ತ ಮಂಗಳೂರು ಪೊಲೀಸ್ ನಿರೀಕ್ಷಕ ದಿಲೀಪ್ ಕುಮಾರ್ ಕೆ.ಎಚ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಕರ್ನಾಟಕ ಲೋಕಾಯುಕ್ತದ ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮುನ್ನಿಪಾಡಿ ಅವರು ಸರಕಾರದ ಪರವಾಗಿ ವಾದಿಸಿದ್ದಾರೆ.
ಇದನ್ನೂ ಓದಿ :ಜೀವಕ್ಕೆ ಕುತ್ತು ತಂದ ಅನೈತಿಕ ಸಂಬಂಧ : ಕೊರಟಗೆರೆಯಲ್ಲಿ ವಿವಾಹಿತ ಪ್ರೇಮಿಗಳಿಬ್ಬರ ಆತ್ಮಹತ್ಯೆ