Desi Swara@100: ಯಾವ ಮೋಹನ ಮುರಳಿ ಕರೆಯಿತು…
Team Udayavani, Nov 27, 2023, 3:06 PM IST
“ಕೃಷ್ಣ ನಾನೊಂದು ಪ್ರಶ್ನೆ ಕೇಳಬಹುದೇ…’,” ರಾಧೆ ಅದಕ್ಯಾಕೆ ಇಷ್ಟೊಂದು ಕೋರಿಕೆ,ಗೊತ್ತಿದ್ದರೆ ಖಂಡಿತ ಹೇಳುವೆ…’
” ಕೃಷ್ಣ ನೀನೇಕೆ ನನಗೆ ಇಷ್ಟು ಇಷ್ಟವಾದೆ…??’ ” ರಾಧೆ ನಿನ್ನೊಳಗೆ ನಾನಿರುವೆ ಅದಕ್ಕೆ…’ ” ಹಾಗಾದರೆ ಕೃಷ್ಣ ನೀನು ನನ್ನ ಅಷ್ಟೊಂದು ಪ್ರೀತಿಸುವೆಯಾ..??’ ಕುತೂಹಲ ತುಂಬಿದ ಧ್ವನಿಯಲ್ಲಿ ಕೇಳಿದಳು…. “ಛೇ ರಾಧೆ ನಾನ್ಯಾವಾಗ ನಿನ್ನನ್ನು ಪ್ರೀತಿಸುತ್ತಿರುವೆ ಎಂದೂ ಹೇಳಿರುವೆ…’ ಕೆಣಕುವಂತೆ ಉತ್ತರ ಕೊಟ್ಟ ಕೃಷ್ಣ. ” ಕೃಷ್ಣ ಸುಮ್ಮನೆ ನನ್ನನ್ನು ಸತಾಯಿಸಬೇಡ, ನಿಜ ಹೇಳು ನಿನಗೆ ನನ್ನ ಮೇಲೆ ಪ್ರೀತಿ ಇಲ್ಲವೇ…??’ ಕಣ್ಣ ತುಂಬಾ ಕಂಬನಿ ತುಂಬಿ ಕೇಳುವಳು.
” ಅಯ್ಯೋ ರಾಧೆ ಇಷ್ಟು ಚಿಕ್ಕ ವಿಷಯಕ್ಕೆ ಯಾರಾದರೂ ಅಳುತ್ತಾರ. ನಿನ್ನ ಪ್ರಶ್ನೆಗೆ ಉತ್ತರ ಬೇಕಲ್ಲವಾ ಸರಿ ಹೇಳುವೆ ಕೇಳು…., ನನ್ನ ನಾನು ಎಷ್ಟು ಪ್ರೀತಿಸುವೇನೋ ಅದಕ್ಕೂ ಮಿಗಿಲಾಗಿ ನಿನ್ನ ಪ್ರೀತಿಸುವೆ…ಪ್ರೇಮಿಸುವೆ…ಆರಾಧಿಸುವೆ…ನನ್ನ ಹೃದಯದ ಅರಮನೆಯಲ್ಲಿ ಎಂದಿಗೂ ಬಿಡುಗಡೆ ಸಿಗದಂತೆ ಪ್ರೀತಿಯಲ್ಲಿ ಬಂಧಿಸಿರುವೆ ನಿನ್ನ…ದೇವಕನ್ಯೆ…ಗಂಧರ್ವಕನ್ಯೆ…ಅಂದದ ರಾಶಿಯ ಅಪ್ಸರೆಯರೇ ಬಂದರು ನನ್ನ ಸಂಯಮ ಎಂದಿಗೂ ಕದಡದು. ನನ್ನ ತನು – ಮನ ಎಂದಿಗೂ ನಿನ್ನ ಸನಿಹಕ್ಕೆ ಮಾತ್ರ ಕಂಪಿಸುವುದು. ನನ್ನ ಹೃದಯ ಎಂದಿಗೂ ನಿನಗೆ ಮಾತ್ರ ಮೀಸಲು….ಅರ್ಥವಾಯಿತೇ ರಾಧೆ ‘ ಅವಳ ಮುಖವನ್ನು ತನ್ನ ಬೊಗಸೆಯಲ್ಲಿ ಹಿಡಿದು ಕಣ್ಣಲ್ಲಿ ಕಣ್ಣಿಟ್ಟು ಪ್ರೀತಿ ತುಂಬಿದ ಧ್ವನಿಯಲ್ಲಿ ಹೇಳಿದ…
ಕೃಷ್ಣ ನಾನೆಷ್ಟು ಪುಣ್ಯವಂತೆ. ನಿನ್ನ ಪ್ರೀತಿ ಪಡೆಯಲು, ನಿನ್ನ ಈ ಪ್ರೀತಿಗೆ ನಿಜವಾಗಲೂ ನಾನು ಅರ್ಹಳೆ ಎಂದು ತಿಳಿಯದು ನನಗೆ ಕೃಷ್ಣ. ಆದರೇ ಒಂದು ಸತ್ಯ ಹೇಳುವೆ ಕೇಳು, ಕೃಷ್ಣ ನನಗೆ ಈ ಕ್ಷಣ ಸಾವು ಬಂದರು ಖುಷಿಯಾಗಿ ನಿನ್ನ ಮಡಿಲಲ್ಲಿ ಉಸಿರು ಚೆಲ್ಲುವೆ. ತೃಪ್ತಿಯ ನಗೆ ಬೀರಿ ಹೇಳಿದಳು…..
” ಛೇ ರಾಧೆ ಹೀಗೇಕೆ ಹೇಳುವೆ, ನಿಜವಾದ ಪ್ರೀತಿಗೆ ಎಂದಿಗೂ ಸೋಲಿಲ್ಲ. ನಮ್ಮದು ನಿಜವಾದ ಪ್ರೀತಿ. ಎಂದಿಗೂ ಯಾರು ನಮ್ಮನ್ನು ದೂರ ಮಾಡಲಾಗದು ಆ ಸಾವು ಕೂಡ…’ “ಹೌದಾ…ಹಾಗಾದರೆ ನಿಜವಾದ ಪ್ರೀತಿ ಎಂದರೇನು…??’ ಕೃಷ್ಣ ಇದೆ ಕೊನೆ ಪ್ರಶ್ನೆ ಮತ್ತೆ ಕೇಳಲಾರೆ ಎಂದು ಕೇಳಿದಳು.
” ಸರಿ ಹೇಳುವೆ ಕೇಳು…ಆದರೆ ನನಗೆ ಈ ನಿನ್ನ ಪ್ರೀತಿ ತುಂಬಿರುವ ಭಕ್ತಿಯ, ಪರಾಕಾಷ್ಠೆ ತುಂಬಿರುವ ಸಿಹಿ ಮಧುವನ್ನು ಸವಿಯಲು ಕೊಡುವುದಾದರೆ ಹೇಳುವೆ ಆಗಬಹುದಾ ರಾಧೆ…’ ಎಂದೂ ಆಸೆ ತುಂಬಿದ ಮುಖಭಾವ ಹೊತ್ತು ಕೇಳಿದ…” ಆಗಲಿ ಕೃಷ್ಣ ಈ ತನು ಮನ ಎಂದಿಗೂ ನಿನ್ನದೇ ಅಲ್ಲವಾ…’ ಎಂದೂ ನಾಚಿಕೆಯ ಧ್ವನಿಯಲ್ಲಿ ಹೇಳಿದಳು…ಅವಳ ಒಪ್ಪಿಗೆ ಕೇಳಿ ಅವನ ಮುಖದಲ್ಲಿ ತುಂಟ ಮುಗುಳುನಗೆ ಮೂಡಿತು.
“ಸರಿ ಹೇಳುವೆ ಕೇಳು…ರಾಧೆ ಪ್ರೀತಿ ಎಂದರೇ ಸಮುದ್ರದಷ್ಟು ವಿಶಾಲ. ಮುಳುಗಿದಷ್ಟು ಆಳ. ಅರಿಯದಷ್ಟು ಅರ್ಥ.
ಪ್ರೀತಿ ಅಂದರೆ ಒಂದು ಸುಂದರ ಮೌನವಿದ್ದಂತೆ. ಆ ಮೌನವನ್ನು ಅರಿಯುವುದು ಒಂದು ಕಡೆ ಕಷ್ಟವೂ ಹೌದು….ಸುಖವೂ ಹೌದು. ನಾವು ಯಾರನ್ನು ಪ್ರೀತಿಸುತ್ತಿವೋ ಅವರ “ಮನಸ್ಸು’, “ಮೌನ’ ಇವೆರಡು ಅರ್ಥ ಮಾಡಿಕೊಂಡಿರುತ್ತಾರೋ ಅವರಿಗೆ ಪ್ರೀತಿ ಎಂದರೇನು ಎಂದು ಅರ್ಥವಾಗಿರುತ್ತೆ. ನೀ ನನಗೆ ಸಿಗದಿದ್ದರೂ ಪರವಾಗಿಲ್ಲ ಆದರೇ ಎಲ್ಲಿದ್ದರು ಹೇಗಿದ್ದರೂ ನಿನ್ನ ಮುಖದಲ್ಲಿ ಎಂದೂ ಮಾಸದ ಮುಗುಳುನಗೆ ಯಾವಾಗಲೂ ನಿನ್ನೊಂದಿಗೆ ಇರಲಿ ಎಂದು ಬಯಸುವುದೇ ಈ ನಿಜವಾದ ಪ್ರೀತಿ…,
ಹರಿಯುವ ಗಂಗೆಯಷ್ಟು ಪವಿತ್ರ ಈ ಪ್ರೀತಿ…..’ ಅವನ ಉತ್ತರ ಕೇಳಿ ಮಾತು ಬರದಂತಾಯಿತು ಅವಳಿಗೆ. ಸುಮ್ಮನೆ ಮೌನದಿ ಬಿಗಿದಪ್ಪಿದಳು ಅವನನ್ನು…ಅವಳ ಅಪ್ಪುಗೆಯನ್ನೇ ಒಪ್ಪಿಗೆ ಎಂದೂ ತಿಳಿದು ಅವಳ ಮೃದುವಾದ ಕೈಗಳನ್ನು ಬಂಧಿಸಿ ಅವಳು ಸಾಕು ಎನ್ನುವವರೆಗೂ ಮುದ್ದಿಸಿ ಕೊನೆಗೆ ಅವಳ ಹಣೆಗೆ ಹೂ ಮುತ್ತು ನೀಡಿ, ನನ್ನ ಉಸಿರಿರುವ ವರೆಗೂ ನಿನ್ನ ಹೆಜ್ಜೆಗೆ ಹೆಜ್ಜೆ ಬೆಸೆದು ನಿನ್ನ ನೆರಳಿಗೂ ನೆರಳಂತೆ ಅಪ್ಪಿ ಕಣ್ಣಾರೆಪ್ಪೆಯಂತೆ ಸದಾ ಕಾವಲಾಗಿರುವೆ ಎಂದೂ ಅಪ್ಪುಗೆಯನ್ನು ಬಿಗಿಯಾಗಿಸಿದ….’
*ಮಹಾಲಕ್ಷ್ಮಿ ಸುಬ್ರಹ್ಮಣ್ಯ, ಶಾರ್ಜಾ