ಪ್ರವಾಸಕ್ಕೆ ತೆರಳಿ ದುರಂತಕ್ಕೀಡಾದರು
Team Udayavani, Apr 23, 2019, 4:02 AM IST
ಬೆಂಗಳೂರು: ಕೊಲಂಬೋದಲ್ಲಿ ಭಾನುವಾರ ನಡೆದ ಬಾಂಬ್ ಸ್ಫೋಟ ದುರಂತದಲ್ಲಿ ಮೃತಪಟ್ಟವರ ವಿವರ ಇಲ್ಲಿದೆ.
ಕೆ.ಜಿ.ಹನುಮಂತರಾಯಪ್ಪ: ನೆಲಮಂಗಲ ಸಮೀಪದ ಕಾಚನಹಳ್ಳಿ ಮೂಲದ ಕೆ.ಜಿ.ಹನುಮಂತರಾಯಪ್ಪ ಬಹಳ ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆನಂತರ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದ್ದು, ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕಾರಣಾಂತರಗಳಿಂದ ಕೈ ತಪ್ಪಿತ್ತು. ಹೀಗಾಗಿ ಮುಂದಿನ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದರು ಎಂದು ಅವರ ಆಪ್ತ ವಲಯಗಳು ತಿಳಿಸಿವೆ. ಹನುಮಂತರಾಯಪ್ಪ ಅವರಿಗೆ ಪತ್ನಿ ಸುಧಾ, ಪುತ್ರ ಚೇತನ್, ಪುತ್ರಿಯರಾದ ಚೈತ್ರಾ, ಮಿಂಚು ಇದ್ದಾರೆ.
ಎಚ್.ಶಿವಕುಮಾರ್: ನೆಲಮಂಗಲ ತಾಲೂಕು ವ್ಯಾಪ್ತಿಯ ಜೆಡಿಎಸ್ ಮುಖಂಡರಾಗಿದ್ದ ಶಿವಕುಮಾರ್, ಗೋವೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿದ್ದರು. ಪ್ರಥಮ ದರ್ಜೆ ಗುತ್ತಿಗೆದಾರರಾಗಿದ್ದರು. ಪತ್ನಿ ಸುನಂದಾ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ. ದಂಪತಿಗೆ ಪುತ್ರ ಮಂಜುನಾಥ್, ಒಬ್ಬ ಪುತ್ರಿ ಇದ್ದಾರೆ. ಜತೆಗೆ ಶಿವಕುಮಾರ್ ಕೈಗಾರಿಕೋದ್ಯಮಿ ಕೂಡ ಹೌದು.
ಲಕ್ಷ್ಮೀನಾರಾಯಣ: ನೆಲಮಂಗಲ ತಾಲೂಕಿನ ಕಾಚನಹಳ್ಳಿಯ ಲಕ್ಷ್ಮೀನಾರಾಯಣ ಪ್ರಥಮ ದರ್ಜೆಯ ಗುತ್ತಿಗೆದಾರರಾಗಿದ್ದು, ಒಂದೂವರೆ ದಶಕದಿಂದ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಎರಡು ಬಾರಿ ತಾಲೂಕು ಪಂಚಾಯಿತಿ ಸದಸ್ಯರು ಹಾಗೂ ಒಂದು ಬಾರಿ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದರು. ಅವರಿಗೆ ಪತ್ನಿ ಚಂದ್ರಕಲಾ, ಪುತ್ರ ಅಭಿಲಾಶ್, ಪುತ್ರಿ ಅಪೂರ್ವ ಇದ್ದಾರೆ.
ಎಂ.ರಂಗಪ್ಪ: ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡರಾಗಿದ್ದ ಎಂ.ರಂಗಪ್ಪ, ರಿಯಲ್ ಎಸ್ಟೇಟ್ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದರು. ಅವರಿಗೆ ಪತ್ನಿ, ಮೂವರು ಮಕ್ಕಳು ಇದ್ದಾರೆ.
ನಿರ್ಲಕ್ಷ್ಯ ವಹಿಸುತ್ತಿದ್ದಾರೆ: “ನಮ್ಮ ತಂದೆಯ ಸಾವಿಗೆ ಪ್ರತಿಷ್ಠಿತ ಹೋಟೆಲ್ನ ಭದ್ರತಾ ವೈಫಲ್ಯವೇ ಕಾರಣ’ ಎಂದು ದುರ್ಘಟನೆಯಲ್ಲಿ ಮೃತಪಟ್ಟ ಲಕ್ಷ್ಮೀನಾರಾಯಣ ಪುತ್ರ ಅಭಿಲಾಶ್ ಆರೋಪಿಸಿದ್ದಾರೆ. ಸಾಮಾನ್ಯ ಮಳಿಗೆಗಳಲ್ಲೇ ಲೋಹಶೋಧಕ ಯಂತ್ರ ಅಳವಡಿಸಿರುತ್ತಾರೆ. ಆದರೆ, ಅಷ್ಟು ದೊಡ್ಡ ಹೋಟೆಲ್ನಲ್ಲಿ ಮೆಟಲ್ ಡಿಟೆಕ್ಟರ್ ಇಲ್ಲದಿರುವುದು ಬೇಸರದ ಸಂಗತಿ.
ಹೀಗಾಗಿ ದುರ್ಘಟನೆಗೆ ಹೋಟೆಲ್ನ ಆಡಳಿತವೇ ಕಾರಣ ಎಂದು ಆರೋಪಿಸಿದರು. ಅಲ್ಲದೆ, ಮುಂಜಾನೆಯಿಂದ ಶ್ರೀಲಂಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ನಿರಂತರ ಸಂಪರ್ಕಿಸಲಾಗುತ್ತಿದೆ. ಆದರೆ, ಯಾರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಗೊಂದಲದ ಉತ್ತರ ನೀಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕೊನೆಯ ಕರೆಗಳು: ದುರ್ಘಟನೆಯಲ್ಲಿ ಮೃತಪಟ್ಟ ಹನುಮಂತರಾಯಪ್ಪ ಮತ್ತು ಲಕ್ಷ್ಮೀನಾರಾಯಣ ಕೊನೇ ಬಾರಿಗೆ ತಮ್ಮ ಪುತ್ರರಿಗೆ ಕರೆ ಮಾಡಿದ್ದಾರೆ. ಭಾನುವಾರ ಬೆಳಗ್ಗೆ ಏಳು ಗಂಟೆ ಸುಮಾರಿಗೆ ಕೊಲಂಬೋ ವಿಮಾನ ನಿಲ್ದಾಣದಲ್ಲಿರುವುದಾಗಿ ತಂದೆ ಕರೆ ಮಾಡಿದ್ದು, ತಮ್ಮನ್ನು ಸಂಪರ್ಕಿಸಲು ಅಂತಾರಾಷ್ಟ್ರೀಯ ನಂಬರ್ ಕೂಡ ಕೊಟ್ಟಿದ್ದರು. ಬಳಿಕ 8.15ರ ಸುಮಾರಿಗೆ ಮತ್ತೂಂದು ಕರೆ ಮಾಡಿದ್ದರು ಎಂದು ಲಕ್ಷ್ಮೀನಾರಾಯಣ ಪುತ್ರ ಅಭಿಲಾಶ್ ಹೇಳಿದರು.
ಹನುಮಂತರಾಯಪ್ಪ ಕೂಡ ಪುತ್ರ ಚೇತನ್ಗೆ ಕರೆ ಮಾಡಿ ಕೆಲ ಹೊತ್ತು ಮಾತನಾಡಿದ್ದಾರೆ. ಶಿವಕುಮಾರ್ ಸಹ ಪುತ್ರಿಗೆ ಕರೆ ಮಾಡಿ ಮಾತನಾಡಿದ್ದಾರೆಂದು ಅವರ ಸಂಬಂಧಿಗಳು ಹೇಳಿದರು. ಆನಂತರ ಮಾಧ್ಯಮಗಳಲ್ಲಿ ಬಾಂಬ್ ಸ್ಫೋಟದ ಸುದ್ದಿ ಬಿತ್ತರವಾಗುತ್ತಿದ್ದಂತೆ ಆತಂಕಗೊಂಡ ಕುಟುಂಬ ಸದಸ್ಯರು ಕೂಡಲೇ ಅಂತಾರಾಷ್ಟ್ರೀಯ ನಂಬರ್ಗೆ ಸಂಪರ್ಕಿಸಿದರೂ ಸಾಧ್ಯವಾಗಿಲ್ಲ.
ಶ್ರೀಲಂಕಾಗೆ ಹೊರಟ ಕುಟುಂಬಸ್ಥರು: ಮೃತ ಸುದ್ದಿ ಖಚಿತವಾಗುತ್ತಿದ್ದಂತೆ ಶಾಸಕರಾದ ಮಂಜುನಾಥ್, ವಿಶ್ವನಾಥ್, ಶ್ರೀನಿವಾಸಮೂರ್ತಿ ಹಾಗೂ ಇತರೆ ಮುಖಂಡರ ಜತೆ ಮೃತ ಕುಟುಂಬದ ಸದಸ್ಯರು ಶ್ರೀಲಂಕಾಕ್ಕೆ ದೌಡಾಯಿಸಿದ್ದಾರೆ.
ಶ್ರೀಲಂಕಾದಲ್ಲಿರುವ ಭಾರತೀಯ ಕಚೇರಿಯ ಇಬ್ಬರು ಅಧಿಕಾರಿಗಳು ಭಾರತೀಯರ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಒಂದೆರಡು ದಿನಗಳಲ್ಲಿ ಮುಕ್ತಾಯಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲಿಗೆ ಹೋಗುವ ಸಂಬಂಧಿಗಳಿಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುವುದು. ಮೃತ ದೇಹಗಳನ್ನು ಆದಷ್ಟು ಬೇಗ ತಾಯ್ನಾಡಿಗೆ ಕರೆ ತರಲಾಗುವುದು.
-ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ