ಜಾಗದ ತಕರಾರು: ಪುತ್ರನಿಂದ ತಾಯಿಗೆ ಹಲ್ಲೆ, ಜೀವ ಬೆದರಿಕೆ
Team Udayavani, May 18, 2023, 6:15 AM IST
ಮಣಿಪಾಲ: ಜಾಗದ ವಿಚಾರಕ್ಕೆ ಸಂಬಂಧಿಸಿ ಪುತ್ರನೇ ತಾಯಿಗೆ ನಿಂದಿಸಿ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ.
ಪೆರಂಪಳ್ಳಿಯ ಲೀಲಾವತಿ ಅವರ ಪುತ್ರ ಕಿರಣ ತನ್ನ ಪತ್ನಿ ಗೀತಾ ಹಾಗೂ ಮಕ್ಕಳೊಂದಿಗೆ ಚಿಕ್ಕಮಗಳೂರಿನಿಂದ ಮನೆಗೆ ಬಂದು ತಾಯಿ ಲೀಲಾವತಿ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಮನೆಯಲ್ಲಿದ್ದ ಕಬ್ಬಿಣದ ರಾಡ್ನಿಂದ ತಲೆಗೆ ಹೊಡೆದಿದ್ದಾನೆ. ಜಾಗ ಮತ್ತು ಮನೆ ನನಗೆ ಸೇರಿದ್ದು ನೀನು ಇಲ್ಲಿ ಇರಬಾರದು. ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾನೆ. ಈ ವೇಳೆ ಕಿರಣನ ಪತ್ನಿ ಗೀತಾ ಕೂಡ ಲೀಲಾವತಿ ಅವರ ಸೊಂಟಕ್ಕೆ ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾರೆ.
ಗಾಯಾಳು ಲೀಲಾವತಿ ಅವರನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.