ಕಣ್ಣೂರು: ಅಪಾರ್ಟ್ಮೆಂಟ್ ಮಾಲಕನ ಮೇಲೆ ಬಾಡಿಗೆದಾರರಿಂದ ಹಲ್ಲೆ
Team Udayavani, Feb 1, 2023, 1:52 AM IST
ಮಂಗಳೂರು: ಕಣ್ಣೂರು ಗ್ರಾಮದ ಯೂಸುಫ್ ನಗರದ ಅಪಾರ್ಟ್ಮೆಂಟ್ ಮನೆಯೊಂದರಲ್ಲಿ ಲೀಸ್ ಅವಧಿ ಮುಗಿದರೂ ವಾಸವಾಗಿದ್ದ ಕುಟುಂಬದ ಸದಸ್ಯರು ಮಾಲಕರಾದ ಎಚ್.ಎಸ್. ಅಬ್ದುಲ್ ರಹಿಮಾನ್ರನ್ನು ಅವಾಚ್ಯ ಶಬ್ದಗಳಿಂದ ಬೈದು ಅವರ ಮೇಲೆ ಹಲ್ಲೆ ನಡೆಸಿ ಕೊಲೆಯತ್ನ ಮಾಡಿದ್ದಾರೆ ಎಂದು ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಬ್ದುಲ್ ರಹಿಮಾನ್ ಅವರು ಅಪಾರ್ಟ್ಮೆಂಟ್ನ ನಂ. 3-4 ರ ಫ್ಲ್ಯಾಟ್ ಅನ್ನು ಇಕ್ಬಾಲ್ ಅವರಿಗೆ 11 ತಿಂಗಳ ಅವಧಿಗೆ ಲೀಸ್ಗೆ ನೀಡಿದ್ದರು. 2019ರ ಜೂ.25ಕ್ಕೆ ಲೀಸ್ ಅವಧಿ ಮುಗಿದಿದ್ದು, ಆ ಬಳಿಕ ಇಕ್ಬಾಲ್ ಅವರ ಕುಟುಂಬ ಮನೆ ತೆರವು ಮಾಡುವ ಬದಲು ಒತ್ತುವರಿ ಮಾಡಿಕೊಂಡಿತ್ತು.
ಜ.27ರಂದು ಬೆಳಗ್ಗೆ 9.15ಕ್ಕೆ ಅಪಾರ್ಟ್ಮೆಂಟ್ನ ಬಾಡಿಗೆದಾರರೊಬ್ಬರ ಮನೆಯಲ್ಲಿ ನೀರಿನ ಪೈಪ್ಲೈನ್ನ ದುರಸ್ತಿ ಕೈಗೊಳ್ಳಲು ರಹಿಮಾನ್ ಅವರು ಹೋಗಿದ್ದರು. ಆಗ ಆರೋಪಿಗಳು ಅವರಿಗೆ ಅವಾಚ್ಯ ಭಾಷೆಯಲ್ಲಿ ಬೈದು, ಹಲ್ಲೆ ಮಾಡಿ ಕೊಲೆ ಯತ್ನ ನಡೆಸಿದ್ದಾರೆ. ನೆಲಕ್ಕೆ ತಳ್ಳಿ ಕಾಲಿನಿಂದ ಒದ್ದು ಗಾಯಗೊಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ಅವರ ಪುತ್ರ ಬಂದು ಆಸ್ಪತ್ರೆಗೆ ದಾಖಲಿಸಿದ್ದು, ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.