ಮಂಗಳೂರು ವಿ.ವಿ: 10 ದಿನಗಳಲ್ಲಿ ಫಲಿತಾಂಶ ಬರಲಿದೆ; ಸಚಿವ ಅಶ್ವತ್ಥನಾರಾಯಣ
Team Udayavani, Dec 22, 2022, 6:25 PM IST
ಸುವರ್ಣ ವಿಧಾನಸೌಧ: ಮಂಗಳೂರು ವಿಶ್ವವಿದ್ಯಾಲಯದ ವಿವಿಧ ಸೆಮಿಸ್ಟರ್ಗಳ ವಿಳಂಬವಾಗಿರುವ ಫಲಿತಾಂಶವನ್ನು ಮುಂದಿನ 10 ದಿನಗಳಲ್ಲಿ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ವಿಧಾನಸಭೆಯಲ್ಲಿ ಶೂನ್ಯವೇಳೆ ಕಾಂಗ್ರೆಸ್ ಉಪನಾಯಕ ಯು,ಟಿ.ಖಾದರ್ ಅವರು ವಿಷಯ ಪ್ರಸ್ತಾಪಿಸಿ, ಮಂಗಳೂರು ವಿ.ವಿ.ಯ ವಿವಿಧ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶ ವಿಳಂಬವಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ತರಗತಿಗೆ ಹೋಗಲು ಅಥವಾ ವೃತ್ತಿಪರ ಜೀವನ ನಡೆಸಲು ಕಷ್ಟವಾಗುತ್ತಿದೆ. ಅಲ್ಲದೆ, ಶಿಷ್ಯವೇತನ, ವಿದ್ಯಾರ್ಥಿ ವೇತನ ಪಡೆಯಲು ಸಾಧ್ಯವಾಗುತ್ತಿಲ್ಲ. ನ್ಯಾಕ್ ಶ್ರೇಣಿಯಲ್ಲಿ ಎ ಕ್ರಮಾಂಕದಿಂದ ಬಿ ಕ್ರಮಾಂಕಕ್ಕೆ ಇಳಿದಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಸಮಸ್ಯೆ ತಂದೊಡ್ಡಿ ಫಲಿತಾಂಶ ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಬೇಕು ಮತ್ತು ಶೀಘ್ರ ಫಲಿತಾಂಶ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಸ್ಪಂದಿಸಿದ ಸಚಿವರು 10 ದಿನಗಳಲ್ಲಿ ಫಲಿತಾಂಶ ನೀಡಲಿದ್ದೇವೆ ಎಂದರು.