ತುಳುನಾಡ ಸೃಷ್ಟಿಕರ್ತನಿಗೆ ಬೃಹತ್ ಪ್ರತಿಮೆಯ ಗೌರವ !
ಬೈಲೂರಿನ ಉಮಿಕ್ಕಳ ಬೆಟ್ಟದಲ್ಲಿ ಪರಶುರಾಮ ಥೀಂ ಪಾರ್ಕ್
Team Udayavani, May 2, 2022, 6:55 AM IST
ಕಾರ್ಕಳ: ತುಳುನಾಡು ಪರಶುರಾಮನ ಸೃಷ್ಟಿ ಎಂಬುದು ಪ್ರತೀತಿ. ಅಂತಹ ಪರಶುರಾಮನ ಥೀಂ ಪಾರ್ಕ್ ಉಡುಪಿ-ಕಾರ್ಕಳ ಹೆದ್ದಾರಿಯಲ್ಲಿ ಸಿಗುವ ಬೈಲೂರಿನ ಉಮಿಕ್ಕಳ ಬೆಟ್ಟದ ಮೇಲೆ ನಿರ್ಮಾಣಗೊಳ್ಳಲಿದೆ. ಅಲ್ಲಿ ಬೃಹತ್ ಕಂಚಿನ ಪ್ರತಿಮೆಯೊಂದು ನಿರ್ಮಾಣ ಹಂತದಲ್ಲಿದೆ.
ಇದಕ್ಕಾಗಿ ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ವಿವಿಧ ಇಲಾಖೆಗಳ ಅನುದಾನ ಬಳಸಲಾಗುತ್ತಿದೆ. ಪ್ರಸ್ತುತ ಬೆಟ್ಟಕ್ಕೆ ತೆರಳುವ ರಸ್ತೆ, ಕಟ್ಟಡದ ತಳ ಪಾಯದ ಕೆಲಸ ಮುಗಿದಿದ್ದು, ಗೋಡೆ ನಿರ್ಮಾಣ ನಡೆಯುತ್ತಿವೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದಿಂದ ಹಾಲ್ ಫ್ರೆàಮ್ ಕೆಲಸವಾಗುತ್ತಿದೆ. ಶೀಘ್ರ ಭೂಮಿ ಪೂಜೆಯೂ ನೆರವೇರಲಿದೆ.
ರಸ್ತೆಯಿಂದ 450 ಅಡಿ ಎತ್ತರದ ಬೆಟ್ಟದ ಮೇಲೆ 57 ಅಡಿ ಎತ್ತರದಲ್ಲಿ 33 ಅಡಿಯ ಕಂಚಿನ ಪ್ರತಿಮೆ ಇರಲಿದೆ. 10 ಅಡಿ ಎತ್ತರದ ಪೀಠ ಇರಲಿದೆ. ಈ ಮೂಲಕ ಉಮಿಕ್ಕಳ ಬೆಟ್ಟ ಪ್ರವಾಸಿ ತಾಣ, ವೀಕ್ಷಣಾ ತಾಣ ವಾಗಿಯಷ್ಟೇ ಅಲ್ಲದೆ ಧಾರ್ಮಿಕ ಕ್ಷೇತ್ರವಾಗಿಯೂ ಮುಂದಿನ ದಿನಗಳಲ್ಲಿ ಗಮನ ಸೆಳೆಯಲಿದೆ. ಕರಾವಳಿಯಲ್ಲಿ ಪರಶುರಾಮನ ಬೃಹತ್ ಗಾತ್ರದ ಪ್ರತಿಮೆ ಎಲ್ಲಿಯೂ ಕಾಣಸಿಗದು.
ಗೊಮ್ಮಟೇಶ್ವರ ಬೆಟ್ಟ, ಹಲವಾರು ಬಸದಿಗಳು, ಸಂತ ಲಾರೆನ್ಸ್ ಬಸಿಲಿಕಾ, ಕೋಟಿ ಚೆನ್ನಯ ಥೀಂ ಪಾರ್ಕ್ ಹೀಗೆ ಹತ್ತು ಹಲವು ಆಕರ್ಷ ಣೀಯ ಸ್ಥಳಗಳ ಮೂಲಕ ಪ್ರವಾಸಿ ಕ್ಷೇತ್ರವಾಗಿ ಗಮನ ಸೆಳೆಯುತ್ತಿರುವ ಕಾರ್ಕಳದ ಹಿರಿಮೆಗೆ ಪರಶುರಾಮ ಥೀಂ ಪಾರ್ಕ್ ಶೀಘ್ರದಲ್ಲೇ ಸೇರಲಿದೆ.
ಕಥೆಯೇ ಹೇಳುತ್ತದೆ
ಪರಶುರಾಮ ಜಮದಗ್ನಿಯ ಪುತ್ರ. ಕೋಪಿಷ್ಟನಾದ ಆತ ತನ್ನ ತಂದೆಯನ್ನು ಕೊಂದ ರಾಜ ಕಾರ್ತಿ ವೀರ್ಯಾರ್ಜುನನ ಮೇಲೆ ಸೇಡು ತೀರಿಸಿಕೊಳ್ಳಲು ಸಮಸ್ತ ಕ್ಷತ್ರಿಯರನ್ನು ನಾಶ ಮಾಡುತ್ತಾನೆ. ಬಳಿಕ ಆಯುಧ (ಪರಶು = ಕೊಡಲಿ)ವನ್ನು ತ್ಯಜಿಸಲು ನಿರ್ಧರಿಸುತ್ತಾನೆ. ಸಹ್ಯಾದ್ರಿಯ ಮೇಲೆ ನಿಂತು ಕೊಡಲಿಯನ್ನು ಬೀಸಿ ಎಸೆಯುತ್ತಾನೆ. ಅದು ಎಲ್ಲಿ ಬೀಳುತ್ತದೋ ಅಲ್ಲಿಯವರೆಗೆ ಹಿಮ್ಮುಖವಾಗಿ ಚಲಿಸುವಂತೆ ಸಮುದ್ರದ ಒಡೆಯ ವರುಣ ದೇವರನ್ನು ಬೇಡುತ್ತಾನೆ. ಸಮುದ್ರ ಹಿಮ್ಮುಖವಾಗಿ ಚಲಿಸುತ್ತದೆ. ಗೋಕರ್ಣದಿಂದ ಕನ್ಯಾಕುಮಾರಿ ತನಕದ ಭೂ ಪ್ರದೇಶ ಉಪ್ಪು ಮೆತ್ತಿ ಕೊಂಡ ಜಾಗವಾಗಿ ವಾಸ ಯೋಗ್ಯ ವಲ್ಲದಿದ್ದಾಗ ಸರ್ಪರಾಜ ವಾಸುಕಿ ಯನ್ನು ತಪಸ್ಸಿನ ಮೂಲಕ ಒಲಿಸಿ ಸಿಹಿ ನೀರು, ಭೂಮಿಯನ್ನು ವಾಸ ಯೋಗ್ಯ ಆಗುವಂತೆ ಮಾಡುತ್ತಾನೆ. ಹೀಗೆ ಸೃಷ್ಟಿಯಾದ ಭೂ ಪ್ರದೇಶವೇ ಕರಾವಳಿ.
ಥೀಂ ಪಾರ್ಕ್ನಲ್ಲಿ
ಪ್ರತಿಮೆಯ ಜತೆಗೆ ಆಡಿಯೋ ವಿಶುವಲ್ ಕೊಠಡಿಯೊಂದಿಗೆ ಸ್ಟೇಟ್ ಆಫ್ ದಿ ಆರ್ಟ್ ಮ್ಯೂಸಿಯಂ, ಪರಶುರಾಮನ ಕ್ಷೇತ್ರವನ್ನು ಆನಂದಿಸಲು ನೇಯ್ಗೆ ಡೆಕ್ ಗ್ಯಾಲರಿ, ಸಾವಿರ ಜನರ ಸಾಮರ್ಥ್ಯದ ಬಯಲು ಮಂದಿರ, ಹಸುರು ಕೋಣೆಗಳ ಪಾಪ್ ಸಂಗ್ರಹಣೆಯಂತಹ ಪೂರಕ ಸೌಲಭ್ಯಗಳನ್ನು ಹೊಂದಿ ರುವ ವೇದಿಕೆ, ನೈಸರ್ಗಿಕ ಸೈಟ್ ವೈಶಿಷ್ಟ್ಯಗಳಿಗೆ ಪೂರಕ ನಿರ್ಮಾಣ ವಾಗಲಿದೆ. ಸಸ್ಯರಾಶಿಗಳ ನಡುವೆ ವೀಕ್ಷಣಾ ಗೋಪುರಗಳು ಇರಲಿವೆ. ವ್ಯೂವ್ಪಾಯಿಂಟ್ ಆಗಿ ಗಮನಸೆಳೆ ಯುವ ರೀತಿಯಲ್ಲಿ ರಚಿಸಲ್ಪಡಲಿದೆ.
ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಮಹಾಪುರುಷ ಪರಶುರಾಮನ ಪ್ರತಿಮೆಗಳಿಲ್ಲ. ಎರಡೂ ಜಿಲ್ಲೆಗಳನ್ನು ಕೇಂದ್ರೀಕರಿಸಿ ಪ್ರತಿಮೆ ಸ್ಥಾಪಿಸಿ ಗಮನ ಸೆಳೆಯಲಾಗುತ್ತಿದೆ.
– ವಿ. ಸುನಿಲ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವ
ಪ್ರವಾಸೋದ್ಯಮ ಇಲಾಖೆ 5 ಕೋ.ರೂ. ಅಂದಾಜು ಪಟ್ಟಿ ಸಿದ್ಧಪಡಿಸಿದೆ. ನಿರ್ಮಿತಿ ಕೇಂದ್ರದ ಮೂಲಕ ಕೆಲಸಗಳಾಗುತ್ತಿವೆ. ಅಂದಾಜು 60 ಲಕ್ಷ ರೂ.ನಷ್ಟು ಕೆಲಸಗಳು ಈಗಾಗಲೇ ಪೂರ್ಣಗೊಂಡಿವೆ. ಇನ್ನುಳಿದ ಇಲಾಖೆಗಳ ಅನುದಾನವನ್ನೂ ಬಳಸಿಕೊಳ್ಳಲಾಗುತ್ತಿದೆ.
– ಕ್ಲಿಫರ್ಡ್ ಲೊಬೋ, ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ
– ಬಾಲಕೃಷ್ಣ ಭೀಮಗುಳಿ