“ಪ್ಲೀಸ್, ಬಿಟ್ಟುಬಿಡಿ’! ಬಾಬ್ರಿ ಮಸೀದಿ ಧ್ವಂಸದ ಮರುದಿನ ಅಂದಿನ ಪ್ರಧಾನಿಯ ಪ್ರತಿಕ್ರಿಯೆ
Team Udayavani, Nov 15, 2021, 8:00 AM IST
ಹೊಸದಿಲ್ಲಿ: “ದಯವಿಟ್ಟು ಆ ವಿಚಾರವನ್ನು ನನ್ನ ಬಳಿ ಚರ್ಚಿಸಬೇಡಿ. ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡಿ’ – 1992ರ ಡಿ. 6ರಂದು ಅಯೋಧ್ಯೆಯಲ್ಲಿ ವಿವಾದಿತ ಕಟ್ಟಡ ಧ್ವಂಸಗೊಂಡ ಅನಂತರ, ಮರುದಿನ ಬೆಳಗ್ಗೆ ನಡೆದಿದ್ದ ಕೇಂದ್ರ ಸಚಿವರ ಸಭೆಯಲ್ಲಿ ಅಂದಿನ ಪ್ರಧಾನಿ ಪಿ.ವಿ. ನರಸಿಂಹ ರಾವ್ ಹೇಳಿದ ಮಾತಿದು. ಹೀಗೆಂದು, ಹಿರಿಯ ಕಾಂಗ್ರೆಸಿಗ ಸಲ್ಮಾನ್ ಖುರ್ಷಿದ್ ತಮ್ಮ ಇತ್ತೀಚಿನ ಪುಸ್ತಕವಾದ “ಸನ್ರೈಸ್ ಓವರ್ ಅಯೋಧ್ಯಾ: ನೇಶನ್ಹುಡ್ ಇನ್ ಅವರ್ ಟೈಮ್ಸ್’ನಲ್ಲಿ ಬರೆದಿದ್ದಾರೆ.
ಡಿ. 6ರಂದು ಬಾಬ್ರಿ ಮಸೀದಿ ಧ್ವಂಸ ನಡೆದಿತ್ತು. ಡಿ. 7ರ ಬೆಳಗ್ಗೆ ಸಂಸತ್ ಭವನದ ಕೆಳ ಅಂತಸ್ತಿನಲ್ಲಿ ಪ್ರಧಾನಿ ನೇತೃತ್ವದಲ್ಲಿ ಕೇಂದ್ರ ಸಂಪುಟದ ಎಲ್ಲ ಸಚಿವರ ಸಭೆ ಆಯೋಜಿಸಲಾಗಿತ್ತು. ಸಭೆಗೆ ಬಂದವರಲ್ಲಿ ಪ್ರಧಾನಿ ಸಮೇತ ಯಾರೂ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ.
ಒಂದು ರೀತಿಯ ದಿಗ್ಮೂಢತೆಯಲ್ಲಿದ್ದರು. ಸ್ವಲ್ಪ ಸಮಯದ ಅನಂತರ ಗಾಢ ಮೌನ ಮುರಿದ ಮಾಧವರಾವ್ ಸಿಂಧಿಯಾ, ಮಸೀದಿ ಧ್ವಂಸದ ವಿಚಾರವನ್ನು ಪ್ರಧಾನಿ ಮುಂದಿಟ್ಟಾಗ, ರಾವ್ ಅವರು ಬೇಸರದಿಂದ ನನ್ನನ್ನು ಬಿಟ್ಟುಬಿಡಿ ಎಂದರು. ಅನಿರೀಕ್ಷಿತವಾಗಿ ಬಂದ ಈ ಉತ್ತರದಿಂದಾಗಿ, ಸಚಿವರ ಸಭೆ ಅಲ್ಲಿಗೇ ಮುಕ್ತಾಯವಾಯಿತು ಎಂದು ಪುಸ್ತಕದಲ್ಲಿ ಹೇಳಿದ್ದಾರೆ.