10 ಲಕ್ಷ ರೂ.ವೆಚ್ಚದಲ್ಲಿ ರಂಗನತಿಟ್ಟು ಪಕ್ಷಿಧಾಮ ಅಭಿವೃದ್ಧಿ
Team Udayavani, Feb 8, 2020, 7:23 PM IST
ಶ್ರೀರಂಗಪಟ್ಟಣ: ಕಳೆದ ವರ್ಷ ಕಾವೇರಿ ಕಣಿವೆಯಲ್ಲಿ ಧಾರಾಕಾರ ಮಳೆ ಸುರಿದು ಕೆಆರ್ಎಸ್ ಜಲಾಶಯ ಭರ್ತಿಯಾಗಿ ಕಾವೇರಿ ನದಿ ಮೂಲಕ ಹೆಚ್ಚುವರಿ ನೀರನ್ನು ಹೊರಬಿಟ್ಟ ಹಿನ್ನೆಲೆಯಲ್ಲಿ ರಂಗನತಿಟ್ಟು ಪಕ್ಷಿಧಾಮ ಹಾನಿಗೀಡಾಗಿತ್ತು. ಹೀಗಾಗಿ, ಸಾವಿರಾರು ಪಕ್ಷಿಗಳು ತೊಂದರೆ ಅನುಭವಿಸಿದ್ದವು. ಪ್ರವಾಸಿಗರೂ ನಾನಾ ಪ್ರಭೇದಗಳ ಪಕ್ಷಿಗಳನ್ನು ಕಾಣದೇ ನಿರಾಶರಾಗುತ್ತಿದ್ದರು. ಈ ಹಿನ್ನೆಲೆಯಲ್ಲಿ ದ್ವೀಪವನ್ನು ಮತ್ತೆ ಅಭಿವೃದ್ಧಿಪಡಿಸಲಾಗುತ್ತಿದೆ.
ಕೆಆರ್ಎಸ್ ಜಲಾಶಯದಿಂದ 1 ಲಕ್ಷ ಕ್ಯೂಸೆಕ್ಗೂ ಅಧಿಕ ನೀರನ್ನು ಹರಿಸಿದ ಪರಿಣಾಮ ಪಕ್ಷಿಧಾಮದಲ್ಲಿ ಪಕ್ಷಿಗಳು ಕುಳಿತುಕೊಳ್ಳಲು ನಿರ್ಮಾಣ ಮಾಡಿದ್ದ ಒಟ್ಟು 16 ದ್ವೀಪಗಳು ಹಾನಿಗೀಡಾಗಿದ್ದವು. ದ್ವೀಪಗಳ ಅಭಿವೃದ್ಧಿಗೆ ಸರ್ಕಾರ ಸುಮಾರು 10 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದೆ. ಆದ್ಯತೆ ಮೇರೆಗೆ ಸ್ಪೂನ್ ಬಿಲ್ ಮತ್ತು ಓಪನ್ ಬಿಲ್ ದ್ವೀಪವನ್ನು ಅಭಿವೃದ್ಧಿ ಮಾಡಲಾಗುತ್ತಿದೆ.
ಇನ್ನೂ 3 ದ್ವೀಪಗಳನ್ನು ನಂತರದಲ್ಲಿ ಅಭಿವೃದ್ಧಿಗೊಳಿಸಲಾಗುವುದು. ಕೃತಕ ನಡುಗಡ್ಡೆ ನಿರ್ಮಿಸಿ ಹುಲ್ಲು ಹಾಗೂ ಮರ ಬೆಳೆಸಲಾಗಿದೆ. ಪಕ್ಷಿಧಾಮದ ಪ್ಲಾಟ್ಫಾರ್ಮ್ಗಳನ್ನು ಎತ್ತರಿಸಿ, ಪ್ರವಾಹ ತಡೆಯುವ ಉದ್ದೇಶದಿಂದ ದ್ವೀಪ ಅಭಿವೃದ್ಧಿ ಪಡಿಸಲಾಗುತ್ತಿದೆ. ನದಿ ತೀರದ ದೋಣಿ ಕೇಂದ್ರದುದ್ದಕ್ಕೂ ತಡೆಗೋಡೆಯನ್ನು ಎತ್ತರಕ್ಕೇರಿಸಲಾಗಿದೆ. ಪಕ್ಷಿಧಾಮದಲ್ಲಿ ನಡೆದಾಡುವ ರಸ್ತೆಯಲ್ಲಿ ಚಪ್ಪಡಿ ಕಲ್ಲನ್ನು ತೆಗೆದು ಸಿಮೆಂಟ್ ಟೈಲ್ಸ್ ಬಳಸಿ ಆಧುನೀಕರಣಗೊಳಿಸಲಾಗಿದೆ. 15 ಗುಂಟೆ ವಿಸ್ತೀರ್ಣದ ಈ ದ್ವೀಪವನ್ನು ಮರಳು ಮತ್ತು ಕೆಂಪು ಮಣ್ಣು ತುಂಬಿದ ಮೂಟೆಗಳನ್ನು ಜೋಡಿಸಿ ಅಭಿವೃದ್ಧಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.