ಸದನದಲ್ಲಿ ಸಚಿವರ ಗೈರು: ಸ್ಪೀಕರ್ ಗರಂ
Team Udayavani, Dec 22, 2022, 10:30 PM IST
ಸುವರ್ಣವಿಧಾನಸೌಧ: ಸಚಿವರು ಸದನದಲ್ಲಿ ಹಾಜರಿರದ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಗರಂ ಆದ ಪ್ರಸಂಗ ಗುರುವಾರ ನಡೆಯಿತು.
ಗಮನ ಸೆಳೆಯುವ ಸೂಚನೆ ವೇಳೆ ಕಂದಾಯ ಸಚಿವ ಆರ್.ಅಶೋಕ್, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಇರಲಿಲ್ಲ. ಸದಸ್ಯರು ಸಚಿವರು ಇಲ್ಲದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಕೋಪಗೊಂಡ ಸ್ಪೀಕರ್, ಹತ್ತು ದಿನಗಳ ಕಾಲ ಇರುವ ಅಧಿವೇಶನದಲ್ಲಿ ಸಚಿವರೇ ಇಲ್ಲದಿದ್ದರೆ ಹೇಗೆ? ನಾನು ಸದನ ಹೇಗೆ ನಡೆಸಬೇಕು ಎಂದರು. ಸಚೇತಕ ಸತೀಶ್ ರೆಡ್ಡಿ, ಸಚಿವರು ಹೊರಗೆ ಇದ್ದು ಬರಲಿದ್ದಾರೆ, ನಾಳೆಗೆ ಹಾಕಿದರೆ ಉತ್ತರ ಕೊಡಲಿದ್ದಾರೆ ಎಂದರು.
ಇದಕ್ಕೆ ಮತ್ತಷ್ಟು ಗರಂ ಆದ ಸ್ಪೀಕರ್, ನಿಮಗೆ ಊಟ ಉಪಾಹಾರ ಮುಖ್ಯವೋ ಸದನ ಮುಖ್ಯವೋ. ಎಲ್ಲ ಸಚಿವರನ್ನು ಕರೆಸಿ ಎಂದು ತಾಕೀತು ಮಾಡಿದರು.
ಕಾಂಗ್ರೆಸ್ನ ಯಶವಂತರಾಯಗೌಡ ಪಾಟೀಲ್, ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸುವ ಅಧಿವೇಶನದಲ್ಲಿ ಸಚಿವರೇ ಬರದಿದ್ದರೆ ಎಷ್ಟರ ಮಟ್ಟಿಗೆ ಸರ್ಕಾರ ಗಂಭೀರವಾಗಿದೆ ಎಂಬುದು ಗೊತ್ತಾಗುತ್ತದೆ ಎಂದು ಬೇಸರ ಹೊರ ಹಾಕಿದರು.