ಕೆಲವೆಡೆ ಅನ್ ಲಾಕ್ ? ಪಾಸಿಟಿವಿಟಿ ಕಡಿಮೆ ಇರುವಲ್ಲಿ ಸಡಿಲಿಕೆ
Team Udayavani, Jun 7, 2021, 7:20 AM IST
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಕೆಲವು ಜಿಲ್ಲೆಗಳಲ್ಲಿ ಜೂ. 14ಕ್ಕೂ ಮುನ್ನ ನಿರ್ಬಂಧ ಸಡಿಲಿಸುವ ಸಾಧ್ಯತೆ ಇದೆ.
ಸೋಮವಾರ ಉನ್ನತ ಮಟ್ಟದ ಟಾಸ್ಕ್ಫೋರ್ಸ್ ಸಭೆ ನಡೆಯಲಿದೆ. ಡಿಸಿಎಂ ಡಾ| ಅಶ್ವತ್ಥನಾರಾಯಣ ಅಧ್ಯಕ್ಷತೆಯ ಸಭೆಯಲ್ಲಿ ಸೋಂಕು ಕಡಿಮೆ ಇರುವ ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಿಲಿಕೆ ಮಾಡುವ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.
ಎರಡನೇ ಹಂತದ ಲಾಕ್ಡೌನ್ ಜೂ. 7ರಂದು ಮುಕ್ತಾಯವಾಗಲಿದೆ. ಸಾವಿನ ಪ್ರಮಾಣವೂ ತಗ್ಗಿದ್ದು, ಕೆಲವು ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ. 5ಕ್ಕಿಂತ ಕಡಿಮೆಯಾಗಿದೆ.
ಲಸಿಕೆ ಅಭಿಯಾನದ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ದೊರೆಯುವಂತೆ ಮಾಡಲು ವಿಸ್ತೃತ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳುವ ನಿರ್ಧಾರ ಕೈಗೊಳ್ಳುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಅಧಿಕವಾಗುತ್ತಿರುವ ಬ್ಲಾಕ್ ಫಂಗಸ್ ಸೋಂಕಿಗೆ ಹೆಚ್ಚು ಔಷಧವನ್ನು ಕೇಂದ್ರದಿಂದ ಪಡೆಯುವ, ಬ್ಲ್ಯಾಕ್ ಫಂಗಸ್ ಸೋಂಕಿಗೆ ಆಯುಷ್ಮಾನ್ ಭಾರತ ಮತ್ತು ಆರೋಗ್ಯ ಕರ್ನಾಟಕ ಯೋಜನೆ ಅಡಿ ಉಚಿತ ಚಿಕಿತ್ಸೆ ನೀಡುವ ಬಗ್ಗೆ ಸಭೆ ನಿರ್ಧಾರ ತೆಗೆದು ಕೊಳ್ಳುವ ಸಾಧ್ಯತೆ ಇದೆ.
ಉಪ ನೋಂದಣಿ ಆರಂಭ
2ನೇ ಹಂತದ ಲಾಕ್ಡೌನ್ ಮುಕ್ತಾಯ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯು ಎಲ್ಲ ಜಿಲ್ಲಾ ನೋಂದಣಿ ಮತ್ತು ಉಪ ನೋಂದಣಿ ಕಚೇರಿಗಳ ಚಟುವಟಿಕೆ ಪುನರಾರಂಭಕ್ಕೆ ಅನುಮತಿ ನೀಡಿದೆ. ಇವು ಕೊರೊನಾ ಮಾರ್ಗ ಸೂಚಿ ಅನುಸರಿಸಿ ಕಾರ್ಯಾರಂಭ ಮಾಡಲಿವೆ. ಇದರಿಂದ ಗ್ರಾಮೀಣ ಜನರಿಗೆ ಅನುಕೂಲ ಆಗಲಿದೆ. ಜಮೀನು ಖರೀದಿ, ಮಾರಾಟ ಮತ್ತಿತರ ವ್ಯವಹಾರಗಳಿಂದ ಸರಕಾರಕ್ಕೂ ಆದಾಯ ಬರಲಿದೆ.