ಯಕ್ಷಗಾನ ಹಿಮ್ಮೇಳ ವಾದಕ ಯುವರಾಜ ಆಚಾರ್ಯ ವಿಧಿವಶ
Team Udayavani, Jul 15, 2020, 10:48 AM IST
ಪುಂಜಾಲಕಟ್ಟೆ: ಖ್ಯಾತ ಯಕ್ಷಗಾನ ಹಿಮ್ಮೇಳ ವಾದಕ, ಬಂಟ್ವಾಳ ತಾಲೂಕಿನ ಕಾವಳಕಟ್ಟೆ ನಿವಾಸಿ
ಯುವರಾಜ ಆಚಾರ್ಯ ಕಾವಳಕಟ್ಟೆ( 60) ಅನಾರೋಗ್ಯದಿಂದ ಜು.14 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಆರಂಭದಲ್ಲಿ ಹವ್ಯಾಸಿ ಮದ್ದಳೆವಾದಕರಾಗಿದ್ದ ಅವರು ಬಳಿಕ ಸುಮಾರು 15 ವರ್ಷಗಳ ಕಾಲ ವಿವಿಧ ಮೇಳಗಳಲ್ಲಿ ಮದ್ದಳೆಗಾರರಾಗಿ ಸೇವೆ ಸಲ್ಲಿಸಿದ್ದರು. ಹೊಸನಗರ ಮೇಳ, ಹಿರಿಯಡ್ಕ, ಮಂಗಳಾದೇವಿ, ಬಪ್ಪನಾಡು, ಸಸಿಹಿತ್ಲು ಮೇಳಗಳಲ್ಲಿ ಮದ್ದಳೆ ವಾದಕರಾಗಿದ್ದ ಅವರು ಅನಾರೋಗ್ಯ ದಿಂದ ಮೇಳದಿಂದ ನಿವೃತ್ತಿ ಪಡೆದಿದ್ದರು. ಪ್ರಸ್ತುತ ಯಕ್ಷಗಾನ, ತಾಳ ಮದ್ದಳೆಗಳಲ್ಲಿ ಚಕ್ರತಾಳ ವಾದಕರಾಗಿ ಬೇಡಿಕೆ ಪಡೆದಿದ್ದರು.
ಪುಂಜಾಲಕಟ್ಟೆ ಸರಕಾರಿ ಪ್ರೌಢ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ ಮತ್ತು ರಿಲಯನ್ಸ್ ಕ್ರಿಕೇಟರ್ಸ್, ಶ್ರೀ ಶಾರದಾಂಬಾ ಯುವಕ ಮಂಡಲದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದರು.