ಆಶ್ರಮದಲ್ಲಿ ಚಹಾ ಸೇವಿಸಿದ ನಂತರ ಇಬ್ಬರು ಸಾಧುಗಳ ನಿಗೂಢ ಸಾವು: ಮತ್ತೊಬ್ಬರ ಸ್ಥಿತಿ ಚಿಂತಾಜನಕ
Team Udayavani, Nov 22, 2020, 2:25 PM IST
ಉತ್ತರಪ್ರದೇಶ: ಆಶ್ರಮವೊಂದರಲ್ಲಿ ಚಹಾ ಸೇವಿಸಿದ ನಂತರ ಇಬ್ಬರು ಸಾಧುಗಳು ಮೃತಪಟ್ಟ ಘಟನೆ ಮಥುರಾದಲ್ಲಿ ನಡೆದಿದೆ. ಮತ್ತೊಬ್ಬ ಸಾಧುವಿನ ಸ್ಥಿತಿ ಗಂಭೀರವಾಗಿದ್ದು, ಮಥುರಾದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಸಾಧುಗಳನ್ನು ಗುಲಾಬ್ ಸಿಂಗ್ ಮತ್ತು ಶ್ಯಾಮ್ ಸುಂದರ್ ಎಂದು ಗುರುತಿಸಲಾಗಿದೆ. ಶನಿವಾರ( ನ.21) ರಂದು ಮಥುರಾದ ಆಶ್ರಮವೊಂದರಲ್ಲಿ ಮೂವರು ಸಾಧುಗಳು ಚಹಾ ಸೇವನೆ ಮಾಡಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ ಇಬ್ಬರು ಸಾಧುಗಳು ನಿಗೂಢವಾಗಿ ಸಾವನ್ನಪ್ಪಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.
60 ವರ್ಷ ವಯಸ್ಸಿನ ಗುಲಾಬ್ ಸಿಂಗ್ ಸ್ಥಳದಲ್ಲೇ ಮೃತಪಟ್ಟರೇ, ಶ್ಯಾಮ್ ಸುಂದರ್ ಎಂಬ ಸಾಧು ಜಿಲ್ಲಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಮತ್ತೊಬ್ಬ ಸಾಧುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಮಥುರಾ ಎಸ್ ಎಸ್ ಪಿ ಗೌರವ್ ಗ್ರೋವರ್ ತಿಳಿಸಿದ್ದಾರೆ.
ಇದನ್ನೂ ಓದಿ: ಮುಫ್ತಿ ಅನಾಸ್ ನೊಂದಿಗೆ ವಿವಾಹ: ಬಾಲಿವುಡ್ ಗೆ ‘ಗುಡ್ ಬೈ’ ಹೇಳಿದ ನಟಿ ಸನಾ ಖಾನ್
ಸ್ಥಳಕ್ಕೆ ವಿಧಿವಿಜ್ಞಾನ ತಂಡ ಆಗಮಿಸಿದ್ದು ಸಾಕ್ಷ್ಯ ಕಲೆಹಾಕುವಲ್ಲಿ ನಿರತವಾಗಿದೆ. ಸಾಧುಗಳ ಸಾವಿಗೆ ಕಾರಣವೇನೆಂದು ಶೀಘ್ರದಲ್ಲಿ ಪತ್ತೆಹಚ್ಚಲಾಗುವುದೆಂದು ಗೌರವ್ ತಿಳಿಸಿದ್ದಾರೆ.
ಸಾಧುಗಳಾದ ಗುಲಾಬ್ ಸಿಂಗ್ ದೌಲತಾ ಗ್ರಾಮದವರಾಗಿದ್ದು, ಶ್ಯಾಮ್ ಸುಂದರ್ ಹಾಗು ರಾಮು ಬಾಬು ಪೈಂಥಾ ಗ್ರಾಮದಲ್ಲಿ ವಾಸಿಸುತ್ತಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ರಾಮು ಬಾಬು ಸಹೋದರ ಗೋಪಾಲ್ ದಾಸ್, ಆಶ್ರಮದಲ್ಲಿ ಮೂವರಿಗೆ ವಿಷಪ್ರಾಶನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಭೂಲೋಕದ ಅಮೃತ ವಾದ ತುಪ್ಪವನ್ನು ಸರಿಯಾಗಿ ಬಳಸುವುದು ಹೇಗೆ ?