ಕುಡಿದ ಮತ್ತಿನಲ್ಲಿ ದುಬೈ ವಿಮಾನದಲ್ಲಿ ಬಾಂಬ್ ಎಂದು ಹುಸಿ ಕರೆ
ದುಬೈಗೆ ಹೊರಟಿದ್ದವರನ್ನು ತಡೆಯಬೇಕೆಂದು ನಿರ್ಧರಿಸಿದ್ದ ವ್ಯಕ್ತಿ
Team Udayavani, Aug 27, 2022, 7:02 PM IST
ಚೆನ್ನೈ: ತನ್ನ ಕುಟುಂಬದಿಂದ ದುಬೈಗೆ ಹೊರಟಿದ್ದ ಇಬ್ಬರನ್ನು ತಡೆಯಬೇಕೆಂದು ನಿರ್ಧರಿಸಿದ್ದ ವ್ಯಕ್ತಿಯೊಬ್ಬ, ಅವರು ಪ್ರಯಾಣಿಸಬೇಕಿದ್ದ ವಿಮಾನದೊಳಗೆ ಬಾಂಬ್ ಇದೆ ಎಂದು ಹುಸಿ ಕರೆ ಮಾಡಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.
ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ ಶನಿವಾರ ಬೆಳಗ್ಗೆ ಪೊಲೀಸರಿಗೆ ಕರೆ ಮಾಡಿದ್ದು, ದುಬೈಗೆ ತೆರಳಲಿರುವ ಇಂಡಿಗೋ ವಿಮಾನದಲ್ಲಿ ಬಾಂಬ್ ಇದೆ ಎಂದಿದ್ದಾನೆ. ಆ ಹಿನ್ನೆಲೆ ಬೆಳಗ್ಗೆ 7.20ಕ್ಕೆ ಹೊರಡಬೇಕಿದ್ದ ವಿಮಾನವನ್ನು ತಡೆದು, ಪರಿಶೀಲನೆ ನಡೆಸಲಾಗಿದೆ. ನಂತರ ಅದು ಸುಳ್ಳು ಕರೆ ಎನ್ನುವುದು ತಿಳಿದುಬಂದಿದೆ.
ಕರೆ ಮಾಡಿದ ವ್ಯಕ್ತಿಯನ್ನು ಪತ್ತೆಹಚ್ಚಿದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಕುಟುಂಬಸ್ಥರು ದುಬೈಗೆ ಹೋಗುವುದನ್ನು ತಪ್ಪಿಸಬೇಕೆಂದೇ ಆತ ಹೀಗೆ ಮಾಡಿದ್ದಾಗಿ ಬಾಯಿ ಬಿಟ್ಟಿದ್ದಾನೆ. ಈ ಘಟನೆಯಿಂದಾಗಿ ವಿಮಾನವು 6 ಗಂಟೆ ವಿಳಂಬವಾಗಿ ಹೊರಡಬೇಕಾಯಿತು.