Fraud: ವಿಮಾನದ ಟಿಕೆಟ್ ಬುಕ್ ಮಾಡಿಸಿ 1.31 ಲ.ರೂ. ವಂಚನೆ
Team Udayavani, May 28, 2023, 5:52 AM IST
ಮಂಗಳೂರು: ವಿಮಾನ ಪ್ರಯಾಣದ ಟಿಕೆಟ್ ಬುಕ್ ಮಾಡಿಸಿ 1.31 ಲ.ರೂ. ವಂಚಿಸಿರುವ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಝೈನುಲ್ ಅಭಿದಿನ್ ವಂಚನೆಗೊಳಗಾದವರು. ಅಬು ಹಿಲಾಲ್ ಅಜ್ಮಿ ಆರೋಪಿ.
ಪ್ರಕರಣದ ವಿವರ
ಝೈನುಲ್ ಅಭಿದಿನ್ ಅವರು ನಗರದ ಕೆ.ಎಸ್. ರಾವ್ ರಸ್ತೆಯಲ್ಲಿರುವ ಸಿಂಗಾಪುರ ಸಿಟಿ ಕಟ್ಟಡದಲ್ಲಿ ಶುಕ್ರಿಯಾ ಟ್ರಾವೆಲ್ಸ್ ಏಜೆನ್ಸಿಯನ್ನು ನಡೆಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಅವರಿಗೆ ದಿಲ್ಲಿಯ ಕರಿಯರ್ ಏಷ್ಯಾ ಟ್ರಾವೆಲ್ ಎಜೆನ್ಸಿಯ ಮಾಲಕ ಅಬು ಹಿಲಾಲ್ ಅಜ್ಮಿಯ ಪರಿಚಯವಾಗಿತ್ತು. ಅನಂತರ ಅವರು ಗ್ರಾಹಕರಿಗಾಗಿ ವಿಮಾನ ಪ್ರಯಾಣದ ಟಿಕೆಟ್ ಬುಕ್ ಮಾಡಿಸುತ್ತಿದ್ದರು. ಇದೇ ರೀತಿ 2022ರ ನ.19 ಮತ್ತು 20ರಂದು 1,31,600 ರೂ. ಮೊತ್ತದ ಟಿಕೆಟ್ ಬುಕ್ ಮಾಡಿಸಿದ್ದರು. ಹಣವನ್ನು ಒಂದು ವಾರದ ಬಳಿಕ ನೀಡುವುದಾಗಿ ಹೇಳಿದ್ದರು. ಅನಂತರ ಹಣ ನೀಡಿರಲಿಲ್ಲ. ಕರೆ ಮಾಡಿದಾಗ ಖಾತೆಗೆ ಹಣ ಕಳುಹಿಸುವುದಾಗಿ ತಿಳಿಸಿ ಹಣಕಾಸು ವ್ಯವಹಾರದ ಮೊಬೈಲ್ ಸ್ಕ್ರೀನ್ ಶಾಟ್ ಕಳುಹಿಸಿದ್ದರು. ಆದರೆ ಬ್ಯಾಂಕ್ಗೆ ಹೋಗಿ ನೋಡಿದಾಗ ಹಣ ಜಮೆಯಾಗಿರಲಿಲ್ಲ. ಅಜ್ಮಿ ನಕಲಿ ದಾಖಲೆಗಳನ್ನು ತೋರಿಸಿ ನಂಬುವಂತೆ ಮಾಡಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ.