ಪ್ರಜಾಧ್ವನಿ ಹೆಸರಿನಲ್ಲಿ ಬಸ್ಯಾತ್ರೆ ಹಾಸ್ಯಾಸ್ಪದ: ಡಾ| ಅಶ್ವತ್ಥ ನಾರಾಯಣ
Team Udayavani, Jan 13, 2023, 11:18 PM IST
ಬೆಂಗಳೂರು: ಕಾಂಗ್ರೆಸ್ನಲ್ಲೇ ಆಂತರಿಕ ಪ್ರಜಾಪ್ರಭುತ್ವಕ್ಕೆ ಬೆಲೆ ಇಲ್ಲ. ಹೀಗಿರುವಾಗ ಪ್ರಜಾಧ್ವನಿ ಹೆಸರಿನಲ್ಲಿ ಬಸ್ ಯಾತ್ರೆ ನಡೆಸುವುದು ಹಾಸ್ಯಾಸ್ಪದವಾಗಿದ್ದು, ಕನಿಷ್ಠ ಒಂದು ಬಸ್ನಲ್ಲಿರುವ ಸೀಟ್ಗಳಷ್ಟು ಸ್ಥಾನದಲ್ಲಾದರೂ ಗೆಲ್ಲಲಿ ಎಂದು ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್.ಅಶ್ವತ್ಥನಾರಾಯಣ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದೊಳಗಿನ ಪ್ರಜಾಧ್ವನಿಯನ್ನೇ ಕಾಂಗ್ರೆಸ್ ಗೌರವಿಸುತ್ತಿಲ್ಲ. ಅದು ಕುಟುಂಬ ಆಧರಿತ ಪಕ್ಷವಾಗಿದೆ. ಬರೀ ಸುಳ್ಳು ಹೇಳುವುದೇ ಕಾಂಗ್ರೆಸ್ ನಾಯಕರ ಕೆಲಸವಾಗಿದ್ದು, ರಾಜ್ಯ ಸರಕಾರದ ವಿರುದ್ಧ ಅನಗತ್ಯ ಆರೋಪ ಮಾಡುತ್ತಿದ್ದಾರೆ. ನಮ್ಮ ಸರಕಾರದ ಅವಧಿಯಲ್ಲೇ ಮಹಾದಾಯಿ ಯೋಜನೆಯ ಡಿಪಿಆರ್ ಅಪ್ರೂವಲ್ ಆಗಿದ್ದು ಎಂದು ತಿರುಗೇಟು ನೀಡಿದರು.
ಕೃತಿ ಓದದೆ ಭೀತಿಯಿಂದ ತಡೆಯಾಜ್ಞೆ
ಸಿದ್ದು ನಿಜ ಕನಸು ಪುಸ್ತಕ ತೇಜೋವಧೆಯ ಪುಸ್ತಕವಲ್ಲ. ರಾಜಕೀಯವಾಗಿ ಅವರ ದ್ವಂದ್ವಗಳನ್ನು ಪ್ರಶ್ನಿಸುವ ಉದ್ದೇಶವನ್ನು ಮಾತ್ರ ಹೊಂದಿತ್ತು. ಆ ಪುಸ್ತಕವನ್ನು ಓದದೆ ಹೆದರಿಕೊಂಡು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಆಕ್ಷೇಪಾರ್ಹ ವಿಷಯ ಇದ್ದಿದ್ದರೆ ಮಾನನಷ್ಟ ಮೊಕದ್ದಮೆ ಹೂಡಬಹುದಿತ್ತಲ್ಲ. ಅವರಿಗೆ ಸತ್ಯವನ್ನು ಎದುರಿಸುವ ಧೈರ್ಯವಿಲ್ಲ ಎಂದು ಅಣಕವಾಡಿದರು.