ಆಡಳಿತದಲ್ಲಿ ಹಸ್ತಕ್ಷೇಪವಿಲ್ಲ, ಪಕ್ಷ ಸಂಘಟನೆಗೆ ಆದ್ಯತೆ : ಬಿ. ವೈ. ವಿಜಯೇಂದ್ರ
Team Udayavani, Feb 7, 2021, 6:00 AM IST
ಬೆಂಗಳೂರು: ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಬೇಕೆನ್ನುವ ಪಕ್ಷದ ಗುರಿ ತಲುಪಲು ಪಕ್ಷ ಸಂಘಟನೆಗಷ್ಟೇ ನನ್ನ ಆದ್ಯತೆ. ಸರಕಾರದ ಯಾವುದೇ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಬೆಂಗಳೂರಿನ ಉದಯವಾಣಿ ಕಚೇರಿಯಲ್ಲಿ “ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಯ ಪುತ್ರ ಎನ್ನುವ ಕಾರಣಕ್ಕೆ ಯಾರದೇ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಆ ರೀತಿಯ ಆರೋಪದ ದಾಖಲೆ ಇದ್ದರೆ ತೋರಿಸಿ. ಪಕ್ಷ ನನಗೆ ಸಂಘಟನೆಯ ಜವಾಬ್ದಾರಿ ವಹಿಸಿದೆ. ನನ್ನ ಮೇಲೆ ವಿಶ್ವಾಸ ಇಟ್ಟಿದೆ. ಅದನ್ನು ಉಳಿಸಿಕೊಂಡು ಹೋಗಬೇಕಿರುವುದು ನನ್ನ ಕರ್ತವ್ಯ ಎಂದರು.
ಹಣದಿಂದ ಗೆಲ್ಲಲು ಸಾಧ್ಯವಿಲ್ಲ
ಮಂಡ್ಯದ ಕೆ.ಆರ್. ಪೇಟೆ ಉಪ ಚುನಾವಣೆ ಹಾಗೂ ಶಿರಾ ಉಪ ಚುನಾವಣೆಯಲ್ಲಿ ಪಕ್ಷವನ್ನು ತಳ ಮಟ್ಟದಿಂದ ಸಂಘಟಿಸಿ ಗೆಲ್ಲುವುದು ಸವಾಲಾಗಿತ್ತು. ಜಾತಿ ಮತ್ತು ಹಣದಿಂದ ಚುನಾವಣೆ ಗೆಲ್ಲುತ್ತೇವೆ ಎನ್ನುವುದು ತಪ್ಪು ಕಲ್ಪನೆ. ಎರಡು ಕ್ಷೇತ್ರಗಳಲ್ಲೂ ಪಕ್ಷದ ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸದೇ ಮತದಾರರಿಗೆ ಹಣ ಹಂಚಿ ಚುನಾವಣೆ ಗೆಲ್ಲಲು ಆಗುವುದಿಲ್ಲ. ಅಲ್ಲದೇ ಯಾವುದೇ ಒಂದು ಸಮುದಾಯವನ್ನು ಮುಂದಿಟ್ಟುಕೊಂಡು ಗೆಲ್ಲುವುದೂ ಕಷ್ಟ. ಕೆ.ಆರ್. ಪೇಟೆ ಮತ್ತು ಶಿರಾದಲ್ಲಿ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಗೆಲುವು ಸಾಧಿಸಿದ್ದೇವೆ. ಎರಡೂ ಉಪ ಚುನಾವಣೆಗಳಲ್ಲಿ ಹದಿನೈದು ದಿನಗಳ ಕ್ಷೇತ್ರಗಳಲ್ಲಿಯೇ ಉಳಿದುಕೊಂಡು ಕೆಲಸ ಮಾಡಿದ್ದೇನೆ. ಈಗ ಮಸ್ಕಿ ಉಪ ಚುನಾವಣೆಯ ಜವಾಬ್ದಾರಿಯನ್ನು ಪಕ್ಷ ನೀಡಿದೆ. ಅಲ್ಲಿಯೂ ಪಕ್ಷ ಹಾಗೂ ಕಾರ್ಯಕರ್ತರ ವಿಶ್ವಾಸ ಉಳಿಸಿಕೊಳ್ಳಬೇಕೆಂದರೆ ಕಠಿನ ಪ್ರಯತ್ನ ಮಾಡಬೇಕಿದೆ ಎಂದರು.
ಹಿಂದೆ ಸರಿಯುವುದಿಲ್ಲ
ನಾನು ರಾಜಕೀಯಕ್ಕೆ ಬರಲೇಬಾರದು ಎಂದುಕೊಂಡಿದ್ದೆ. ಆದರೆ, ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ನಡೆದ ಕೆಲವು ರಾಜಕೀಯ ಬೆಳವಣಿಗೆಗಳು ನನ್ನ ಮನಸ್ಸಿಗೆ ಘಾಸಿ ಮಾಡಿದವು. ಹೀಗಾಗಿ ಅದನ್ನು ಸವಾಲಾಗಿ ತೆಗೆದುಕೊಂಡು ರಾಜಕೀಯ ಪ್ರವೇಶಿಸಿದ್ದೇನೆ. ಇನ್ನು ಹಿಂದಿರುಗಿ ನೋಡುವ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪ ಅವರು ನಲುವತ್ತು ವರ್ಷ ಹೋರಾಟ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ರಾಜ್ಯದಲ್ಲಿ ಮುಂದಿನ ಬಾರಿಯೂ ಬಿಜೆಪಿ 150 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತ ಪಡೆಯಬೇಕು ಎನ್ನುವುದು ಹೈಕಮಾಂಡ್ ಹಾಗೂ ರಾಜ್ಯ ನಾಯಕರ ಇಚ್ಛೆಯಾಗಿದೆ.
ಬಿಜೆಪಿಗೆ ಕೆಲವು ಕ್ಷೇತ್ರಗಳಲ್ಲಿ ಸ್ಥಳೀಯವಾಗಿ ನಾಯಕತ್ವದ ಕೊರತೆಯಿದ್ದು, ಅಲ್ಲೆಲ್ಲ ಯುವ ನಾಯಕತ್ವವನ್ನು ಬೆಳೆಸುವ ಕೆಲಸ ಮಾಡಬೇಕಿದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕ ಮತ್ತು ಹಳೆ ಮೈಸೂರು ಭಾಗದಲ್ಲಿ ಪಕ್ಷ ಇನ್ನೂ ಹೆಚ್ಚಿನ ಸ್ಥಾನ ಗೆಲ್ಲಬೇಕಾಗಿದೆ. ಅದಕ್ಕಾಗಿ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ಉಪ ಚುನಾವಣೆ ಸ್ಪರ್ಧೆ ಯೋಚಿಸಿಲ್ಲ
ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಬಸವಕಲ್ಯಾಣಕ್ಕೆ ಸ್ಪರ್ಧಿಸುವಂತೆ ಸ್ಥಳೀಯರ ಬೇಡಿಕೆ ಇದೆ. ಆದರೆ, ಈ ಬಗ್ಗೆ ನಾನು ಯೋಚಿಸಿಲ್ಲ. ಸದ್ಯಕ್ಕೆ ಪಕ್ಷ, ಮಸ್ಕಿ ಚುನಾವಣೆ ಉಸ್ತುವಾರಿ ಕೊಟ್ಟಿದೆ. ಅಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಬೇಕು ಎಂದರು.
ಸಂಬಂಧ ಗಟ್ಟಿಯಾಗಿದೆ
ರಾಜ್ಯ ಸರಕಾರದ ಬಗ್ಗೆ ಕೇಂದ್ರ ನಾಯಕರಿಗೆ ಯಾವುದೇ ಬೇಸರವಿಲ್ಲ. ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು, ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಾರೆ. ಅವರಿಗೆ ರಾಜ್ಯದ ಬಗ್ಗೆ ಯಾವುದೇ ಅಸಮಾಧಾನ ಇಲ್ಲ ಎಂದರು.
ಪಕ್ಷಕ್ಕೆ ನಷ್ಟ
ಇತ್ತೀಚೆಗೆ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಈ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿಯಲ್ಲ. ಸಚಿವ ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆ ವಿಚಾರದಲ್ಲಿ ನಡೆಯುತ್ತಿರುವ ಬೆಳವಣಿಗೆಯಿಂದ ಸರಕಾರ ಮತ್ತು ಪಕ್ಷಕ್ಕೆ ಹಾನಿಯಾಗುತ್ತದೆ. ಯಾವುದೇ ವ್ಯಕ್ತಿ ಪ್ರತಿಷ್ಠೆ ಮಾಡಿದರೂ, ಅಂತಿಮವಾಗಿ ಪಕ್ಷಕ್ಕೆ ಹಾನಿಯಾಗುತ್ತದೆ. ಅದು ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ಪಕ್ಷಕ್ಕಾಗಿ ಲಕ್ಷಾಂತರ ಕಾರ್ಯಕರ್ತರು ಅಧಿಕಾರವಿಲ್ಲದೆ ದುಡಿಯುತ್ತಿ¨ªಾರೆ. ಅವರನ್ನು ನಾವು ನೋಡಬೇಕು. ಅಧಿಕಾರ ಬಂದಾಗ ಸರಿಯಾಗಿ ನಡೆಸಿಕೊಳ್ಳದಿದ್ದರೆ ನಮಗೆ ನಷ್ಟವಾಗಲಿದೆ ಎಂದು ಹೇಳಿದರು.
ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಡುವೆ ಯಾವುದೇ ರೀತಿಯ ಗೊಂದಲ ಇಲ್ಲ. ಕಟೀಲ್ ಅವರು ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸ ಮಾಡುತ್ತಿ¨ªಾರೆ. ಮುಖ್ಯಮಂತ್ರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತಿ¨ªಾರೆ .
ವಿಜಯೇಂದ್ರ