ಹಕ್ಕುದಾರರಿಲ್ಲದ ಮೊತ್ತ ಪಡೆಯಲು ಜನರಿಗೆ ಕೇಂದ್ರ ನೆರವು
10.24 ಕೋಟಿ ಖಾತೆಗಳಲ್ಲಿ 35,000 ಕೋಟಿ ರೂ. ಸಂಗ್ರಹ -ಈ ಮೊತ್ತವನ್ನು ಸೂಕ್ತ ಉತ್ತರಾಧಿಕಾರಿಗಳು ಪಡೆಯಲು ಕೇಂದ್ರ ಅಭಿಯಾನ
Team Udayavani, May 9, 2023, 7:37 AM IST
ನವದೆಹಲಿ: ದೇಶದ ಸರ್ಕಾರಿ ಬ್ಯಾಂಕ್ಗಳ 10.24 ಕೋಟಿ ಖಾತೆಗಳಲ್ಲಿ 35,000 ಕೋಟಿ ರೂ. ಹಣ ಸಂಗ್ರಹಗೊಂಡಿದೆ. ಆದರೆ ಈ ಹಣಕ್ಕೆ ಹಕ್ಕುದಾರರೇ ಇಲ್ಲ! ಇದಕ್ಕೆ ನಾವೇ ವಾರಸುದಾರರು, ನಮಗೆ ನೀಡಿ ಎಂದು ಹೇಳಿಕೊಳ್ಳುವ ವ್ಯಕ್ತಿಗಳೇ ಕಾಣಿಸುತ್ತಿಲ್ಲ, ಇದೊಂದು ಅನಾಥ ಮೊತ್ತದಂತಾಗಿದೆ. ಸೋಮವಾರ ನಡೆದ ಎಫ್ಎಸ್ಡಿಸಿ (ಅತ್ಯುನ್ನತ ಆರ್ಥಿಕ ಸ್ಥಿರತೆ ಮತ್ತು ಅಭಿವೃದ್ಧಿ ಆಯೋಗ) ಸಭೆಯಲ್ಲಿ ಈ ವಿಷಯವೇ ಪ್ರಧಾನವಾಗಿ ಚರ್ಚೆಯಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷರಾಗಿರುವ ಎಫ್ಎಸ್ಡಿಸಿ ಸಭೆಯಲ್ಲಿ, ಹಕ್ಕುದಾರರಿಲ್ಲದೇ ಬಿದ್ದಿರುವ ಹಣವನ್ನು ಪಡೆದುಕೊಳ್ಳಲು ಜನರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಒಂದು ಅಭಿಯಾನ ಮಾಡಲು ನಿರ್ಧರಿಸಲಾಗಿದೆ. ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ಸದ್ಯ ಸರ್ಕಾರಿ ಬ್ಯಾಂಕ್ಗಳು 35,000 ಕೋಟಿ ರೂ. ಮೊತ್ತವನ್ನು ಆರ್ಬಿಐಗೆ ವರ್ಗಾಯಿಸಿವೆ. ಕಳೆದ 10ಕ್ಕೂ ಅಧಿಕ ವರ್ಷಗಳಿಂದ ಈ ಮೊತ್ತ ಕೇಳುವರಿಲ್ಲದ ಸ್ಥಿತಿಯಲ್ಲಿದೆ.