ಸುವರ್ಣ ವಿಧಾನಸೌಧದೆದುರು ಹೈಡ್ರಾಮಾ : ಕೈ ನಾಯಕರಿಂದ ಮುತ್ತಿಗೆ ಯತ್ನ
Team Udayavani, Dec 16, 2021, 12:48 PM IST
ಬೆಳಗಾವಿ: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸುವರ್ಣ ವಿಧಾನ ಸೌಧಕ್ಕೆ ಗುರುವಾರ ಬೆಳಗ್ಗೆ ಮುತ್ತಿಗೆ ಹಾಕಲು ಯತ್ನಿಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಶಾಸಕರು, ವಿಧಾನ ಪರಿಷತ್ ಸದಸ್ಯರನ್ನು ಪೊಲೀಸರು ತಡೆದರು.
ಬೆಳಗಾವಿ ಕಾಂಗ್ರೆಸ್ ಭವನದಿಂದ ಟ್ರ್ಯಾಕ್ಟರ್ ಗಳಲ್ಲಿ ಪ್ರತಿಭಟನಾ ರಾಲಿ ನಡೆಸುತ್ತ ಸುವರ್ಣ ವಿಧಾನಸೌಧಕ್ಕೆ ನುಗ್ಗಲು ಯತ್ನಿಸಿದ ಕಾಂಗ್ರೆಸ್ ನಾಯಕರನ್ನು ಪೊಲೀಸರು ತಡೆದರು. ಈ ವೇಳೆ ಪೊಲೀಸರು ಹಾಗೂ ಕಾಂಗ್ರೆಸ್ ನಾಯಕರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ನಂತರ ಕಾಂಗ್ರೆಸ್ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರನ್ನು ಮಾತ್ರ ಗೇಟ್ ಒಳಗೆ ಬಿಡಲಾಯಿತು. ಪ್ರತಿಭಟನೆ ನಡೆಸುತ್ತ ಸುವರ್ಣ ವಿಧಾನಸೌಧಕ್ಕೆ ತೆರಳಿದರು. ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಸಿದ್ದರಾಮಯ್ಯ ಕಿಡಿ
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ನಾನು ಹಾಗೂ ಶಾಸಕ ಮಿತ್ರರು ಕಾರ್ಯಕರ್ತರೆಲ್ಲರೂ ಸೇರಿ ಕಾಂಗ್ರೆಸ್ ಕಚೇರಿಯಿಂದ ಸುವರ್ಣಸೌಧ ವರೆಗೆ ಟ್ರ್ಯಾಕ್ಟರ್ ಗಳಲ್ಲಿ ಕುಳಿತು ಬಂದಿದ್ದೇವೆ. ಸರಕಾರ ಹಾಗೂ ಜನರ ಗಮನ ಸೆಳೆಯಲು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ರಾಜ್ಯದಲ್ಲಿ ಇಂದು ಭ್ರಷ್ಟಾಚಾರ ತುಂಬಿ ಹೋಗಿದೆ. ಅನೇಕ ಪ್ರಾಜೆಕ್ಟ್ ಮಾಡಬೇಕಾದರೆ 40 ಪರ್ಸೆಂಟ್ ಕಮಿಷನ್ ಕೊಡಬೇಕಾಗಿದೆ. ಗುತ್ತಿಗೆದಾರರು ದೂರು ನೀಡಿ ಮೂರು ಬಾರಿ ಮಾಧ್ಯಮಗಳ ಬಳಿ ಹೇಳಿಕೆ ನೀಡಿದ್ದಾರೆ. ನ್ಯಾಯಾಂಗ ತನಿಖೆಯಾದರೂ ಮಾಡಿ ಅಥವಾ ಸದನ ಸಮಿತಿಯಾದರೂ ರಚಿಸಿ, ನಮ್ಮ ಸರಕಾರದ ವಿರುದ್ಧ ಹತ್ತು ಪರ್ಸೆಂಟ್ ಆರೋಪ ಮಾಡಿದರು, ಮೋದಿ ರಾಜಕೀಯ ಆರೋಪ ಮಾಡಿದರು, ನಮ್ಮ ವಿರುದ್ಧದ ಆರೋಪ ಸೇರಿಸಿ ತನಿಖೆ ಮಾಡಲಿ ಎಂದು ಕಿಡಿ ಕಾರಿದರು.
ಅತಿವೃಷ್ಟಿ ಆದರೂ ಈವರೆಗೂ ಪರಿಹಾರ ಕೊಟ್ಟಿಲ್ಲ,ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಪರಿಹಾರ ಕೊಟ್ಟಿಲ್ಲ ಎಂದು ಆಕ್ರೋಶ ಹೊರ ಹಾಕಿದರು.