ಮಂಡ್ಯ: ಕೋವಿಡ್ ಪರೀಕ್ಷಾ ವರದಿ ಬರುವ ಮುನ್ನವೇ ಮಹಿಳೆ ಸಾವು
ಮೃತದೇಹ ಕಂಡು ಎಂ.ಶೆಟ್ಟಹಳ್ಳಿ ಗ್ರಾಮಸ್ಥರಲ್ಲಿ ಆತಂಕ
Team Udayavani, Apr 24, 2021, 7:02 PM IST
ಮಂಡ್ಯ: ಅನಾರೋಗ್ಯದಿಂದ ಕೋವಿಡ್ ಪರೀಕ್ಷೆಗೆ ಐದು ದಿನಗಳ ಹಿಂದೆ ಒಳಗಾಗಿದ್ದ ಮಹಿಳೆ ವರದಿ ಬರುವ ಮುನ್ನವೇ ಮೃತಪಟ್ಟ ಹಿನ್ನೆಲೆಯಲ್ಲಿ ಮೃತದೇಹ ಕಂಡು ಗ್ರಾಮಸ್ಥರು ಆತಂಕಗೊಂಡ ಘಟನೆ ಮಳವಳ್ಳಿ ತಾಲೂಕಿನ ಎಂ.ಶೆಟ್ಟಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಲಸಿಕೆ ಪಡೆದಿದ್ದ ಮಹಿಳೆ ಜ್ವರ:
ಎಂ.ಶೆಟ್ಟಹಳ್ಳಿ ಗ್ರಾಮದ 55 ವರ್ಷದ ಮಹಿಳೆ ಬೆಂಗಳೂರಿನ ಮಗಳ ಮನೆಯಲ್ಲಿದ್ದರು. ಏ.16ರಂದು ಎಂ.ಶೆಟ್ಟಹಳ್ಳಿ ಗ್ರಾಮದ ತಮ್ಮ ಮನೆಗೆ ಬಂದಿದ್ದರು. ಏ.17ರಂದು ಗ್ರಾಮದಲ್ಲಿ ಕೋವಿಡ್ ಲಸಿಕೆ ಪಡೆದಿದ್ದರು. ಏ.18ರಂದು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿ, ಏ.19ರಂದು ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದರು. ಆದರೆ ವರದಿ ಇನ್ನೂ ಬಂದಿರಲಿಲ್ಲ. ಶನಿವಾರ ಬೆಳಿಗ್ಗೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಗೆ ಚಿಕಿತ್ಸೆ ಕೊಡಿಸಲು ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.
ಮನೆಯ ಜಗಲಿ ಮೇಲೆ ಅನಾಥವಾದ ಶವ:
ಆಂಬ್ಯುಲೆನ್ಸ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಅವರ ಮನೆಯ ಜಗಲಿ ಮೇಲೆ ಶವವಿಟ್ಟು ತೆರಳಿದ್ದರು. ಕೊರೊನಾದಿಂದ ಮಹಿಳೆ ಮೃತಪಟ್ಟಿರಬಹುದು ಎಂದು ಭಾವಿಸಿದ ಗ್ರಾಮಸ್ಥರು ಭಯದಿಂದ ಶವದ ಬಳಿ ತೆರಳಲಿಲ್ಲ. ಇದರಿಂದ ಐದಾರು ಗಂಟೆಗಳ ಕಾಲ ಶವ ಅನಾಥವಾಗಿ ಜಗಲಿಯ ಮೇಲೆ ಬಿದ್ದಿತ್ತು.
ಇದನ್ನೂ ಓದಿ : ಶಿರಸಿ ವೈದ್ಯೆ ಸುಮನ್ ಹೆಗಡೆಯಿಂದ ಸ್ವಯಂ ರಕ್ತದಾನ ಮಾಡಿ ಜಾಗೃತಿ ಅಭಿಯಾನ
ಆರೋಗ್ಯಾಧಿಕಾರಿಗೆ ಮಾಹಿತಿ:
ಗ್ರಾಮ ಪಂಚಾಯಿತಿ ಸದಸ್ಯ ಮನೋಹರ್ ಅವರು ತಾಲೂಕು ಆಡಳಿತದ ಅಧಿಕಾರಿಗಳನ್ನು ಸಂಪರ್ಕಿಸಿ ಆರೋಗ್ಯ ವೈದ್ಯಾಧಿಕಾರಿ ಡಾ.ಶಿವಸ್ವಾಮಿ ಅವರನ್ನು ಸ್ಥಳಕ್ಕೆ ಕರೆಸಿಕೊಂಡರು. ಮಂಡ್ಯದಿಂದ ಬಂದ ತಂಡ ಮೃತಪಟ್ಟ ಮಹಿಳೆಯ ಶವವನ್ನು ಅಂತ್ಯಕ್ರಿಯೆ ಮಾಡಿದರು.
ಆರೋಗ್ಯ ವೈದ್ಯಾಧಿಕಾರಿ ಡಾ.ಶಿವಸ್ವಾಮಿ ಮಾತನಾಡಿ, ಬೆಂಗಳೂರಿನಿಂದ ಕಳೆದ ವಾರ ಬಂದಿದ್ದ ಮಹಿಳೆ ಅನಾರೋಗ್ಯದಿಂದ ಬಳಲುತ್ತಿದ್ದರು. ಕೋವಿಡ್ ಲಸಿಕೆ ಪಡೆದಿದ್ದ ಅವರನ್ನು ಏ.19ರಂದು ಕೋವಿಡ್ ಪರೀಕ್ಷಗೆ ಒಳಪಡಿಸಲಾಗಿತ್ತು. ವರದಿ ಕೈಸೇರಬೇಕಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಂದ ಸ್ಯಾನಿಟೈಸರ್ ಸಿಂಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
5 ದಿನ ಕಳೆದರೂ ವರದಿ ಬಂದಿಲ್ಲ:
ಗ್ರಾಮ ಪಂಚಾಯಿತಿ ಸದಸ್ಯ ಮನೋಹರ್ ಮಾತನಾಡಿ, ಬೆಂಗಳೂರಿನಿಂದ ಬಂದಿದ್ದ ಮಹಿಳೆ ಒಂದು ವಾರದಿಂದ ಜ್ವರದಿಂದ ನರಳುತ್ತಿದ್ದರು. ಈ ವಿಚಾರವನ್ನು ಯಾರೊಂದಿಗೂ ಕೇಳಿಕೊಂಡಿಲ್ಲ. ಕೋವಿಡ್ ಪರೀಕ್ಷೆ ಮಾಡಿಸಿ 5 ದಿನಗಳು ಕಳೆದರೂ ಇನ್ನೂ ವರದಿ ಬಂದಿಲ್ಲ, ಇದ್ದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಆರೋಪಿಸಿದರು.