ತಂದೆಯ ಸಾವಿನ ನೋವಲ್ಲೂ ಹಸೆಮಣೆ ಏರಿದ ಪುತ್ರಿಯರು!
Team Udayavani, Jun 30, 2023, 7:38 AM IST
ಆನಂದಪುರ: ಮದುವೆಯ ಹಿಂದಿನ ದಿನ ಅಪಘಾತದಲ್ಲಿ ತಂದೆಯನ್ನು ಕಳೆದುಕೊಂಡ ಪುತ್ರಿಯರಿಬ್ಬರು ಆ ನೋವಿನ ನಡುವೆಯೂ ಹಸೆಮಣೆ ಏರಿದ ಹೃದಯಸ್ಪರ್ಶಿ ಘಟನೆ ನಗರದಲ್ಲಿ ನಡೆದಿದೆ.
ಇಲ್ಲಿಗೆ ಸಮೀಪದ ಕೆಂಜಿಗಾಪುರದ ಶ್ರೀ ವೀರಭದ್ರೇಶ್ವರ ಸ್ವಾಮಿ ಸಭಾಭವನದಲ್ಲಿ ಪಲ್ಲವಿ ಮತ್ತು ಪೂಜಾ ಅವರು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮುತ್ತಿನಹಳ್ಳಿ ಗ್ರಾಮದ ಶಿವಾನಂದ ಪಾಟೀಲ್ ಅವರ ಪುತ್ರರಾದ ವಿಶ್ವನಾಥ ಪಾಟೀಲ್ ಹಾಗೂ ಶ್ರೀನಾಥ್ ಜತೆಗೆ ಬುಧವಾರ ಹಸೆಮಣೆ ಏರಿದ್ದು, ಬಂಧುಗಳೆಲ್ಲರೂ ಸೇರಿ ವಿವಾಹ ನೆರವೇರಿಸಿ ಸಮಾಜಕ್ಕೆ ಮಾದರಿಯಾದರು.
ಬನವಾಸಿ ಮೂಲದ ಮಂಜುನಾಥ ಗೌಡ ಅವರ ಪುತ್ರಿಯರಾದ ಪಲ್ಲವಿ ಮತ್ತು ಪೂಜಾ ವಿವಾಹಕ್ಕೆ ಸಕಲ ಸಿದ್ಧತೆ ನಡೆದಿತ್ತು. ಮದುವೆಯ ಮುನ್ನಾದಿನವಾದ ಮಂಗಳವಾರ ಮಂಜುನಾಥ ಗೌಡ ನಡೆದುಕೊಂಡು ಹೋಗುತ್ತಿದ್ದಾಗ ಕಾರು ಢಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದರು.
ಮೊಮ್ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸಿದ ಅಜ್ಜ (ತಾಯಿಯ ತಂದೆ) ರುದ್ರಪ್ಪ ಗೌಡರು ಪೂರ್ವ ನಿಗದಿಯಂತೆ ಮದುವೆ ನಡೆಸಲು ತೀರ್ಮಾನಿಸಿ ಕುಟುಂಬದವರೊಂದಿಗೆ ಚರ್ಚಿಸಿದರು. ಬಳಿಕ ವರನ ಕಡೆಯವರ ಜತೆಗೂ ಮಾತನಾಡಿ ಮದುವೆ ಕಾರ್ಯ ಮುಂದುವರಿಸಲು ನಿರ್ಧರಿಸಿದರು. ಈ ಹೆಣ್ಮಕ್ಕಳ ತಾಯಿ ಕೂಡ ಅಪಘಾತದಲ್ಲೇ ಮೃತಪಟ್ಟಿದ್ದರು.