ನಾಪತ್ತೆಯಾದ ಬಾಲಕನ ಮೃತದೇಹ ಕೆರೆಯಲ್ಲಿ ಪತ್ತೆ
Team Udayavani, Apr 10, 2023, 5:08 AM IST
ಬಂಟ್ವಾಳ: ಮನೆಯಿಂದ ನಾಪತ್ತೆಯಾದ ಬಿ.ಸಿ.ರೋಡಿನ ಬಾಲಕನ ಮೃತಹೇಹ ಕೆರೆಯೊಂದರಲ್ಲಿ ಪತ್ತೆಯಾದ ಘಟನೆ ಎ. 8ರ ತಡರಾತ್ರಿ ಕಳ್ಳಿಗೆ ಗ್ರಾಮದ ಕುಪ್ಪಿಲದಲ್ಲಿ ನಡೆದಿದೆ.
ಬಿ.ಸಿ.ರೋಡಿನ ಮಿತ್ತಬೈಲು ನಿವಾಸಿ ಅಬ್ದುಲ್ ರಝಾಕ್ ಅವರ ಪುತ್ರ ಅಝೀಂ(13) ಮೃತಪಟ್ಟ ಬಾಲಕ. ಬಾಲಕ 8ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಎ. 8ರಂದು ಮಧ್ಯಾಹ್ನದ ವೇಳೆಗೆ ಪಾಣೆಮಂಗಳೂರಿನ ಅಜ್ಜಿ ಮನೆಗೆ ಬಂದಿದ್ದನು. ಅಲ್ಲಿ ಬಾಲಕ ತನ್ನ ಸ್ನೇಹಿತರೊಂದಿಗೆ ಆಡುತ್ತಿದ್ದು, ಬಳಿಕ ಏಕಾಏಕಿ ಕಾಣೆಯಾಗಿದ್ದನು.
ಮನೆಮಂದಿ ಸಾಕಷ್ಟು ಹುಡುಕಾಟ ನಡೆಸಿದರೂ ಆತನ ಸುಳಿವು ಪತ್ತೆಯಾಗಿರಲಿಲ್ಲ. ಆತನ ಕೈಯಲ್ಲಿದ್ದ ಮೊಬೈಲ್ ರಿಂಗಿಣಿಸುತ್ತಿದ್ದರೂ, ಕರೆ ಸ್ವೀಕರಿಸುತ್ತಿರಲಿಲ್ಲ. ಹೀಗಾಗಿ ಮನೆ ಮಂದಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಬಳಿಕ ಆತನಲ್ಲಿದ್ದ ಮೊಬೈಲ್ ಲೊಕೇಶನ್ ಆಧಾರದಲ್ಲಿ ಕುಪ್ಪಿಲ ಭಾಗದಲ್ಲಿ ಹುಡುಕಾಟ ನಡೆಸಿದಾಗ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ.
ಕೆರೆಯ ಮೇಲ್ಭಾಗದಲ್ಲಿ ಬಾಲಕ ಧರಿಸಿದ್ದ ವಸ್ತ್ರ, ಪಾದರಕ್ಷೆ ಹಾಗೂ ಮೊಬೈಲ್ ಫೋನ್ ಪತ್ತೆಯಾಗಿದೆ. ಬಾಲಕ ಕೆರೆಯ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಸಾಧ್ಯತೆಯ ಕುರಿತು ಸಂಶಯಿಸಲಾಗಿದ್ದು, ಆದರೆ ಅಜ್ಜಿ ಮನೆಗೆ ತೆರಳಿದ್ದ ಬಾಲಕ ಏಕಾಏಕಿ ಕುಪ್ಪಿಲ ಭಾಗಕ್ಕೆ ಯಾಕೆ ಬಂದಿದ್ದಾನೆ. ಒಬ್ಬನೇ ಬಂದು ನೀರಿಗೆ ಇಳಿದಿದ್ದಾನೆಯೇ ಎಂಬ ಅನುಮಾನಗಳು ಸೃಷ್ಟಿಯಾಗಿದೆ. ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.