ಕೇರಳದಲ್ಲಿ ಕ್ರೈಸ್ತಮತಗಳಿಗೆ ಕೈಹಾಕಿದ್ದಾರಾ ಮೋದಿ?
Team Udayavani, Apr 28, 2023, 8:12 AM IST
ತಿರುವನಂತಪುರ: 2024ರ ಲೋಕಸಭಾ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಈಗಲೇ ಕೇರಳದಲ್ಲಿ ಪ್ರಚಾರ ಆರಂಭಿಸಿದ್ದಾರೆ. ಕೇರಳ ಶೈಲಿಯಲ್ಲೇ ಪಂಚೆಯುಟ್ಟು ವಂದೇ ಭಾರತ್ ಟ್ರೈನಿಗೆ ಚಾಲನೆ ನೀಡಿದ್ದಾರೆ. ಇದರ ಮಧ್ಯೆಯೇ ಸದ್ದಿಲ್ಲದೇ ಕ್ರೈಸ್ತರನ್ನು ಬಿಜೆಪಿಗೆ ಸೆಳೆಯಲು ಕಾರ್ಯತಂತ್ರ ರೂಪಿಸಿದ್ದಾರೆ. ದೇವರ ಸ್ವಂತನಾಡಿನಲ್ಲಿ ಹಿಂದುತ್ವ ಪರಿಣಾಮಕಾರಿಯಲ್ಲ ಎಂಬುದನ್ನು ಅರಿತಿರುವ ಅವರು ಕ್ರೈಸ್ತಮತೀಯರನ್ನು ತಮ್ಮಕಡೆಗೆ ಸೆಳೆದು ಕೊಳ್ಳಲು ದಾರಿ ಹುಡುಕುತ್ತಿದ್ದಾರೆಂದು ವಿಶ್ಲೇಷಣೆ ಮಾಡಲಾಗಿದೆ.
ಈಗಾಗಲೇ ಕೇರಳ ಮಾಜಿ ಮುಖ್ಯ ಮಂತ್ರಿ ಎ.ಕೆ.ಆ್ಯಂಟನಿ ಪುತ್ರ ಅನಿಲ್ ಆ್ಯಂಟನಿಯನ್ನು ಪಕ್ಷಕ್ಕೆ ಸೆಳೆದುಕೊಳ್ಳ ಲಾಗಿದೆ. ಕಾಂಗ್ರೆಸ್ ಮಾಜಿ ನಾಯಕ ವಿಕ್ಟರ್ ಟಿ.ಥಾಮಸ್ ಕೂಡ ಬಿಜೆಪಿ ಸೇರಿಕೊಂಡಿದ್ದಾರೆ. ಇಷ್ಟರ ಮಧ್ಯೆ ಮೋದಿ, ಕೇರಳದ ಬಿಷಪ್ಗಳೊಂದಿಗೆ ಸಭೆ ನಡೆಸಿದ್ದಾರೆ. ಇದು ಪರಿಣಾಮಕಾರಿಯಾಗಿ ನಡೆದಿದೆ ಎಂದು ಬಿಜೆಪಿ ಹೇಳಿಕೊಂಡಿದೆ. ಇವೆಲ್ಲ ಕ್ರೈಸ್ತಮತಗಳನ್ನು ಸೆಳೆಯುವ ಯತ್ನ ಎನ್ನಲಾಗಿದೆ.
ಕ್ರೈಸ್ತರು ಕೆಲವು ಈಶಾನ್ಯ ರಾಜ್ಯಗಳಲ್ಲಿ, ಗೋವಾದಲ್ಲಿ ಬಿಜೆಪಿ ಬೆಂಬಲಕ್ಕೆ ನಿಂತಿ ದ್ದಾರೆ. ಅದೇ ಪ್ರಯತ್ನವನ್ನು ಕೇರಳದಲ್ಲಿ ಮಾಡಲಾಗುತ್ತಿದೆ. ಕೇರಳದಲ್ಲಿ ದೇಶದಲ್ಲೇ ಗರಿಷ್ಠ ಪ್ರಮಾಣದಲ್ಲಿ ಆರ್ಎಸ್ಎಸ್ ಶಾಖೆಗಳಿದ್ದರೂ ಬಿಜೆಪಿಗೆ ಅಲ್ಲಿ ಮತ ಬರುತ್ತಿಲ್ಲ. ಕಾರಣ ಅಲ್ಲಿ ಹಿಂದೂಗಳಿಗೆ ಸರಿಸಮನಾಗಿ ಅಲ್ಪಸಂಖ್ಯಾಕರಿದ್ದಾರೆ. ಈ ಸಮಸ್ಯೆಯನ್ನು ನಿವಾರಿಸಿಕೊಳ್ಳುವುದು ಅವರ ಉದ್ದೇಶವೆನ್ನಲಾಗಿದೆ.