“ಭಾರತೀಯ ಕ್ರಿಕೆಟಿಗೆ ದ್ರಾವಿಡ್ ಕೊಡುಗೆ ಅಪಾರ’ : ಗಂಗೂಲಿ
Team Udayavani, Mar 10, 2021, 6:10 AM IST
ಹೊಸದಿಲ್ಲಿ: ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ 3-1 ಅಂತರದಿಂದ ಟೆಸ್ಟ್ ಸರಣಿ ಗೆದ್ದು, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಅರ್ಹತೆ ಪಡೆದ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ “ಗೋಡೆ’ ಖ್ಯಾತಿಯ ರಾಹುಲ್ ದ್ರಾವಿಡ್ ಅವರ ಗುಣಗಾನ ಮಾಡಿದ್ದಾರೆ. ತಂಡದಲ್ಲಿ ಮಿಂಚಿದ ಯುವ ಆಟಗಾರರೆಲ್ಲ ದ್ರಾವಿಡ್ ಗರಡಿಯಲ್ಲಿ ಪಳಗಿದವರು ಎಂದಿದ್ದಾರೆ.
ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಳಲ್ಲಿ ಹಿರಿಯ ಆಟಗಾರರಿಗಿಂತ ಯುವ ಆಟಗಾರರೇ ಹೆಚ್ಚು ಮಿಂಚಿದ್ದರು. ರಿಷಭ್ ಪಂತ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್ ಸೇರಿದಂತೆ ಕಿರಿಯ ಕ್ರಿಕೆಟಿಗರು ಟೀಮ್ ಇಂಡಿಯಾದಲ್ಲಿ ಅಬ್ಬರಿಸುತ್ತಿದ್ದಾರೆ. ಈ ಯುವ ಪ್ರತಿಭೆಗಳನ್ನು ರಾಷ್ಟ್ರೀಯ ತಂಡಕ್ಕೆ ಕಳುಹಿಸಿದ ಕೀರ್ತಿ ಮಾಜಿ ನಾಯಕ ಹಾಗೂ ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯ ನಿರ್ದೇಶಕ ರಾಹುಲ್ ದ್ರಾವಿಡ್ಗೆ ಸಲ್ಲುತ್ತದೆ ಎಂದು ಗಂಗೂಲಿ ಹೇಳಿದರು.
ಅದ್ಭುತ ಕಾರ್ಯ ನಿರ್ವಹಣೆ
ಬೆಂಗಳೂರಿನ ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ರಾಹುಲ್ ದ್ರಾವಿಡ್ ಅದ್ಭುತ ಕಾರ್ಯ ನಿರ್ವಹಿಸುತ್ತಿದ್ದಾರೆಂದು ನಾನು ಯಾವಾಗಲೂ ಹೇಳುತ್ತೇನೆ. ಎರಡನೇ ಆಧ್ಯತೆಯ ಹಲವು ಪ್ರತಿಭಾನ್ವಿತ ಆಟಗಾರರನ್ನು ರಾಹುಲ್ ದ್ರಾವಿಡ್ ಭಾರತ ತಂಡಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದು ಹೇಳಿದರು.