ವಿಧಾನ ಕದನ 2023: ನಾಯಕರು ನುಡಿದರೆ ಮತದಾರರು ಅಹುದು ಅಹುದು ಎನ್ನಬೇಕು…!
ಚುನಾವಣೆ ಸಂದರ್ಭದ ವೇಳೆ ಪೇಚಿಗೆ ಸಿಲುಕಿಸುವ ಹೇಳಿಕೆಗಳು
Team Udayavani, Mar 10, 2023, 7:20 AM IST
ಚುನಾವಣೆಯ ಹೊಸ್ತಿಲಲ್ಲಿ ನೀಡುವ ಹೇಳಿಕೆಗಳು ಯಾವುದ್ಯಾವುದೋ ಕಾರಣಕ್ಕೆ ವಿವಾದಕ್ಕೀಡಾಗುವುದುಂಟು. ಆದರೆ ಹೇಳಿಕೆಗಳ ನೇರ ಪರಿಣಾಮ ಅಂದಾಜಿಸುವುದು ಕೊಂಚ ಕಷ್ಟವಾದರೂ, ಗುಪ್ತಗಾಮಿನಿಯಾಗಿ ನಿರ್ಣಯಕಾರಿಯಾದ ಹಲವು ಉದಾಹರಣೆಗಳು ಇವೆ. ಫಲಿತಾಂಶಕ್ಕೂ ಹೇಳಿಕೆಗೂ ನೇರವಾಗಿ ಸಂಬಂಧ ಕಲ್ಪಿಸುವುದು ಕಷ್ಟ ಸಾಧ್ಯವಾದರೂ ವೈಯಕ್ತಿಕ ಅಥವಾ ಆಯಾ ಪಕ್ಷದ ಮೇಲೆ ಬೀರುವ ಪರಿಣಾಮ ಬರೀ ಚುಕ್ಕೆಗಳಂತೆ. ನಾವೇ ಒಂದಕ್ಕೊಂದು ಚುಕ್ಕಿಗೆ ಗೆರೆ ಜೋಡಿಸಿಕೊಂಡು ಚಿತ್ರ ರೂಪಿಸಿಕೊಳ್ಳಬೇಕು !
ಮಂಗಳೂರು: ಮಾತು ಆಡಿದರೆ ಮುಗಿಯಿತು, ಮುತ್ತು ಒಡೆದರೆ ಹೋಯಿತು. ಇದು ಯಾವತ್ತಿಗೂ ಸತ್ಯವೇ. ಆದರೆ ರಾಜಕಾರಣದಲ್ಲಿ ಈ ಮಾತೆಂಬುದು ಲಾಭದ ಕೊಯ್ಲೂ ಮಾಡಿದ್ದಿದೆ, ನಷ್ಟದ ನೆರೆಯನ್ನೂ ತಂದದ್ದಿದೆ.
ಯಾವುದೋ ಜೋಶ್ನಲ್ಲಿ ರಾಜಕಾರಣಿ ಗಳು ಏನನ್ನೋ ಹೇಳಲು ಹೋಗಿ ಏನೋ ಹೇಳಿಬಿಡುತ್ತಾರೆ. ಅದು ವಿವಾದಕ್ಕೀಡಾಗಿ, ಸಂಕಷ್ಟವನ್ನು ತಂದೊಡ್ಡುತ್ತದೆ. ಇನ್ನು ಹಲವು ಬಾರಿ ವಿಷಯಕ್ಕಿಂತ ಬಳಸಿದ ಪದಗಳೇ ಪಕ್ಷಗಳನ್ನು ಮುಳುಗಿಸಿದ್ದಿದೆ.
ದೇಶದ ಹಲವು ಚುನಾವಣೆಗಳಲ್ಲಿ ಇಂಥ ಪ್ರಸಂಗಗಳನ್ನು ಕಾಣಬಹುದು. ಚುನಾವಣೆ ಹತ್ತಿರ ಬರುವಾಗ ಎಲ್ಲರೂ ಮಾತಾಡುವ ಮೊದಲು ಯೋಚಿಸಬೇಕು ಎನ್ನುತ್ತಾರೆ ನಾಗ ರಿಕರು. ಆದರೂ ಕೆಲವರ ಬಾಯಿಯಿಂದ ಹೇಳಿಕೆಗಳು ಜಾರಿ ಬಿಡುತ್ತವೆ !
ಕೆಲವೇ ದಿನಗಳ ಹಿಂದೆ ರಾಜ್ಯ ಮಟ್ಟದಲ್ಲಿ ಜೆಡಿಎಸ್ನ ಎಚ್.ಡಿ. ಕುಮಾರಸ್ವಾಮಿ ಒಂದು ಸಮುದಾಯದ ಬಗ್ಗೆ ಹೇಳಿದ ಹೇಳಿಕೆ ಸೃಷ್ಟಿಸಿದ ವಿವಾದ, ಸ್ಪಷ್ಟೀಕರಣ ಎಲ್ಲವೂ ಮುಗಿದ ಅಧ್ಯಾಯ. ಅದರೊಂದಿಗೆ ಕಾಂಗ್ರೆಸ್ ಸಿದ್ದರಾಮಯ್ಯನವರ ನಾಯಿ ಮರಿ ಹೇಳಿಕೆ ವಿವಾದಕ್ಕೀಡಾಗಿದ್ದು… ಹೀಗೆ ಈ ಚುನಾವಣೆಯಲ್ಲೂ ಇಂಥ ಬಾಯಿ ತಪ್ಪಿ ಜಾರುವ ಹೇಳಿಕೆಗಳ ಪರ್ವ ಆರಂಭವಾಗಿದೆ.
ಇಂಥ ಕೆಲವು ವಿವಾದಿತ ಹೇಳಿಕೆಗಳು ಯಾವ್ಯಾವುದೋ ತಿರುವು ಪಡೆಯುತ್ತಾ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸುವುದಷ್ಟೇ ಅಲ್ಲ, ಅದು ಚುನಾವಣೆಯಲ್ಲಿ ಮತದಾನದ ವರೆಗೂ ಸಾಗಿ ತನ್ನದೇ ಪರಿಣಾಮವನ್ನು ಬೀರದೆ ಇರದು.
ಇತ್ತೀಚೆಗೆ ಮೂಡುಬಿದಿರೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿರುವ ಕಾಂಗ್ರೆಸ್ನ ಮಿಥುನ್ ರೈ ಉಡುಪಿಯ ಶ್ರೀಕೃಷ್ಣಮಠಕ್ಕೆ ಜಾಗ ನೀಡಿರುವ ಸಂಗತಿ ಕುರಿತ ಹೇಳಿಕೆ ರಾಜ್ಯಾದ್ಯಂತ ಸದ್ದು ಮಾಡಿದೆ. ಅದಾಗಲೇ ಅವರು ತಮ್ಮ ಹೇಳಿಕೆಗೆ ಆಧಾರ ವಿವರಿಸಿ, ಸ್ಪಷ್ಟೀಕರಿಸಿದ್ದಾರೆ. ಆದರೂ ಗಾಳಿ ಬೀಸಿ ಹೋದ ಮೇಲೆ ಉಳಿದ ಕಾಳುಗಳೆಷ್ಟು ಎಂದು ಎಣಿಸಿಕೊಳ್ಳುವುದಕ್ಕೆ ಸ್ವಲ್ಪ ಹೊತ್ತು ಬೇಕು. ಹಾಗಾಗಿ ಇಂಥ ಹೇಳಿಕೆ ಯಾವ ಪರಿಣಾಮ ಬೀರಬಹುದು ಎಂಬುದು ಮುಂದಿನ ದಿನ ಗಳಲ್ಲಿ ಕಾದು ನೋಡಬೇಕು.
ಇದೇನೂ ಹೊಸದಲ್ಲ, ರಾಷ್ಟ್ರಮಟ್ಟದಲ್ಲಿ, ರಾಜ್ಯ, ಪ್ರಾದೇಶಿಕ ಮಟ್ಟದಲ್ಲಿ ರಾಜ ಕೀಯ ನಾಯಕರ ಹೇಳಿಕೆಗಳು ಉದ್ದೇಶ ಪೂರ್ವಕವೋ, ಅಲ್ಲವೋ ಒಟ್ಟೂ ವಿವಾದಕ್ಕೆ ಕಾರಣವಾಗಿವೆ. ಇತ್ತೀಚೆಗಷ್ಟೇ ಸಂಸದರೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಪಕ್ಷದ ಬೂತ್ ಅಭಿಯಾನದ ಸಂದರ್ಭದಲ್ಲಿ ಲವ್ ಜೆಹಾದ್ ಬಗ್ಗೆ ಮಾತನಾಡಿ, ಚರಂಡಿ, ರಸ್ತೆ ಬಗ್ಗೆ ಅಲ್ಲ ಎಂಬ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ರೋಶಕ್ಕೆ, ಟ್ರೋಲಿಂಗ್ಗೆ ಒಳಗಾಯಿತು.
2017ರಲ್ಲಿ ಬಿಜೆಪಿ ಕಾರ್ಯಕರ್ತ ಕಾರ್ತಿಕ್ ರಾಜ್ ಅವರ ಹತ್ಯೆ ವಿರುದ್ಧ ಹಮ್ಮಿಕೊಂಡ ಪ್ರತಿಭಟನೆ ವೇಳೆ ಆರೋಪಿಗಳನ್ನು ಬೇಗ ಬಂಧಿಸಲು ಆಗ್ರಹಿಸಿ ನೀಡಿದ ಹೇಳಿಕೆ ವಿರುದ್ಧ ಕೇಸು ದಾಖಲಾಗಿತ್ತು. ಎರಡು ವರ್ಷದ ಬಳಿಕ ಪ್ರಕರಣ ಬಿದ್ದು ಹೋಯಿತು. ಆದರೆ ಆ ಹೇಳಿಕೆ ಬಹಳಷ್ಟು ಟೀಕೆಗೆ ಗುರಿಯಾಗಿತ್ತು.
ಇಂತಹುದೇ ಇನ್ನೊಂದು ಪ್ರಕರಣ 2017ರಲ್ಲಿ ನಡೆದಿತ್ತು, ಮಾಜಿ ಸಚಿವರೂ, ಕಾಂಗ್ರೆಸ್ ನಾಯಕರೂ ಆದ ಬಿ. ರಮಾನಾಥ ರೈ ಅವರು ನಾನು 6 ಬಾರಿ ಶಾಸಕ ಆಗಲು ಒಂದು ಸಮುದಾಯದ ಬೆಂಬಲ ಪ್ರಮುಖ ಕಾರಣ ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು. ಅದರ ವೀಡಿಯೊ ತುಣುಕು ಕೆಲವು ಸಮಯದ ಬಳಿಕ ಬಹಿರಂಗಗೊಂಡು ಸಾಕಷ್ಟು ವಿವಾದಕ್ಕೆ ಒಳಗಾಯಿತು. ಇದನ್ನು ಸಮರ್ಥವಾಗಿ ಬಳಸಿಕೊಂಡ ಬಿಜೆಪಿ ರೈ ಅವರ ವಿರುದ್ಧ ಅಸ್ತ್ರವಾಗಿ ಬಳಸಿತ್ತು.
ಅದಕ್ಕೆ ಉದುರುವ ಮಾತು ಮುತ್ತೋ, ಮೃತ್ಯುವೋ ಎಂದು ಆಮೇಲೆ ಯೋಚಿಸುವುದಕ್ಕಿಂತ ಮೊದಲೇ ಅದರ ರೂಪವನ್ನು ನಿರ್ಧರಿಸುವುದು ಹೆಚ್ಚು ಸುರಕ್ಷಿತ ಎನ್ನುತ್ತಾರೆ ಹಿರಿಯರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ
Lok Sabha Polls: ಸ್ಟ್ರಾಂಗ್ ರೂಂಗಳಲ್ಲಿ ಮತಯಂತ್ರಗಳು ಸುಭದ್ರ
Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ
MUST WATCH
ಹೊಸ ಸೇರ್ಪಡೆ
Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ