ಸರಕಾರಿ ಶಾಲೆಗಳಿಗಿಲ್ಲ ಶೂನ್ಯ ಫಲಿತಾಂಶ
ಶೂನ್ಯ ಫಲಿತಾಂಶದ ಖಾಸಗಿ, ಅನುದಾನಿತ ಶಾಲೆಗಳ ಸಂಖ್ಯೆ ಏರಿಕೆ: ಶೇ.100 ಫಲಿತಾಂಶ ದಾಖಲಿಸಿದ ಸರಕಾರಿ ಶಾಲೆಗಳ ಸಂಖ್ಯೆ ಏರಿಕೆ
Team Udayavani, May 9, 2023, 8:13 AM IST
ಬೆಂಗಳೂರು: ಈ ಬಾರಿ ಯಾವುದೇ ಸರಕಾರಿ ಶಾಲೆ ಶೂನ್ಯ ಫಲಿತಾಂಶ ದಾಖಲಿಸಿಲ್ಲ. ಆದರೆ ಶೂನ್ಯ ಫಲಿತಾಂಶ ದಾಖಲಿಸಿರುವ ಖಾಸಗಿ ಮತ್ತು ಅನುದಾನಿತ ಶಾಲೆಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗಿದೆ. ಜತೆಗೆ ಶೇ.100 ಫಲಿತಾಂಶ ದಾಖಲಿಸಿದ ಸರಕಾರಿ ಶಾಲೆಗಳ ಸಂಖ್ಯೆಯಲ್ಲಿಯೂ ಗಣನೀಯ ಹೆಚ್ಚಳವಾಗಿದೆ.
ಕಳೆದ ವರ್ಷ ಎರಡು ಸರಕಾರಿ ಶಾಲೆಗಳು ಶೂನ್ಯ ಫಲಿತಾಂಶ ಪಡೆದಿದ್ದವು. ಕಳೆದ ವರ್ಷ 3 ಅನುದಾನಿತ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದ್ದು, ಈ ವರ್ಷ ಅದು 11 ಶಾಲೆಗಳಿಗೆ ಏರಿಕೆ ಕಂಡಿದೆ. ಖಾಸಗಿ ಶಾಲೆಗಳಲ್ಲಿ ಕಳೆದ ವರ್ಷ 15 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿದ್ದು, ಈ ಬಾರಿ ಅದು 23 ಶಾಲೆಗಳಿಗೆ ಏರಿಕೆ ಕಂಡಿದೆ. ಶೂನ್ಯ ಫಲಿತಾಂಶ ಪಡೆದ ಶಾಲೆಗಳ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಶಾಲಾ ಶಿಕ್ಷಣ ಇಲಾಖೆಗೆ ಶಿಫಾರಸು ಮಾಡುವುದಾಗಿ ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.
ಸರಕಾರಿ ಶಾಲೆಯಲ್ಲಿ ಶೇ. 100 ಫಲಿತಾಂಶ ಏರಿಕೆ
ಈ ಬಾರಿ ಶೇ. 100 ಫಲಿತಾಂಶ ಪಡೆದ ಶಾಲೆಗಳಲ್ಲಿಯೂ ಸರಕಾರಿ ಶಾಲೆಗಳು ಉತ್ತಮ ಸಾಧನೆ ಮಾಡಿವೆ. ಹಿಂದಿನ ವರ್ಷ 1,462 ಸರಕಾರಿ ಶಾಲೆಗಳ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ಈ ವರ್ಷ 1,517 ಶಾಲೆಗಳಲ್ಲಿ ಶೇ. 100ನ ಫಲಿತಾಂಶ ಬಂದಿದೆ.
ಅನುದಾನ ರಹಿತ ಶಾಲೆಗಳಲ್ಲಿ ಕಳೆದ ವರ್ಷ 1,991 ಶಾಲೆಗಳಲ್ಲಿ ಶೇ.100 ಫಲಿತಾಂಶ ಬಂದಿದ್ದು, ಈ ವರ್ಷ 1,824 ಶಾಲೆಗಳಲ್ಲಿ ಮಾತ್ರ ಶೇ.100 ಫಲಿತಾಂಶ ಬಂದಿದೆ. ಉಳಿದಂತೆ ಅನುದಾನಿತ ಶಾಲೆಗಳಲ್ಲಿ ಕಳೆದ ವರ್ಷ 467 ಶಾಲೆಗಳು ಶೇ. 100 ಸಾಧನೆ ಮಾಡಿದ್ದರೆ ಈ ವರ್ಷ 482 ಶಾಲೆಗಳಲ್ಲಿ ಎಲ್ಲರೂ ತೇರ್ಗಡೆಯಾಗಿದ್ದಾರೆ.
ವಿಭಿನ್ನ ಸಾಮರ್ಥ್ಯದ ಮಕ್ಕಳ ವಿಶಿಷ್ಟ ಸಾಧನೆ
ಮನೋ ಸಮಸ್ಯೆ, ದೈಹಿಕ ನ್ಯೂನತೆ ಮುಂತಾದ ಸಮಸ್ಯೆಗಳ ಮಧ್ಯೆಯೂ ವಿಭಿನ್ನ ಸಾಮರ್ಥ್ಯದ ಮಕ್ಕಳ ಫಲಿತಾಂಶ ಉತ್ತಮವಾಗಿದೆ. ಇಂತಹ 4,649 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 3,723 ಮಂದಿ ಉತ್ತೀರ್ಣರಾಗುವ ಮೂಲಕ ಶೇ. 80.08 ಫಲಿತಾಂಶ ಪಡೆದಿದ್ದಾರೆ.
ಖಾಸಗಿ ಶಾಲೆಗಳಲ್ಲಿ ಶೇ.90 ಫಲಿತಾಂಶ
ರಾಜ್ಯದ 5,833 ಸರಕಾರಿ ಶಾಲೆಗಳಿಂದ 3.33 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಈ ಪೈಕಿ 2.89 ಲಕ್ಷ ಮಂದಿ ಉತ್ತೀರ್ಣರಾಗಿ ಶೇ. 86.74 ಫಲಿತಾಂಶ ಬಂದಿದೆ. 3,622 ಅನುದಾನಿತ ಶಾಲೆಗಳಿಂದ 2.05 ಲಕ್ಷ ಮಂದಿ ಹಾಜರಾಗಿದ್ದು 1.75 ಲಕ್ಷ ವಿದ್ಯಾರ್ಥಿಗಳು ಪಾಸಾಗಿ ಶೇ. 85.64 ಫಲಿತಾಂಶ ಬಂದಿದೆ. 6,038 ಖಾಸಗಿ ಶಾಲೆಗಳಿಂದ 2.48 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2.25 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.90.89 ಫಲಿತಾಂಶ ಬಂದಿದೆ. ಇದು ಶಾಲೆಗಳ ರೆಗ್ಯುಲರ್ ವಿದ್ಯಾರ್ಥಿಗಳನ್ನು ಆಧರಿಸಿದ ಅಂಕಿ ಅಂಶವಾಗಿದೆ.
ತೃತೀಯ ಭಾಷೆಯಲ್ಲಿ ಗರಿಷ್ಠ ಪ್ರತಿಶತ ಅಂಕ
ತೃತೀಯ ಭಾಷೆಯಲ್ಲಿ 16,170 ಮಂದಿ ನೂರಕ್ಕೆ ನೂರು ಅಂಕ ಪಡೆದಿದ್ದಾರೆ. ಪ್ರಥಮ ಭಾಷೆಯಲ್ಲಿ 14,983, ದ್ವಿತೀಯ ಭಾಷೆಯಲ್ಲಿ 9,754, ಸಮಾಜ ವಿಜ್ಞಾನದಲ್ಲಿ 8,311, ಗಣಿತದಲ್ಲಿ 2,132 ಮತ್ತು ವಿಜ್ಞಾನದಲ್ಲಿ 983 ಮಂದಿ ನೂರಕ್ಕೆ ನೂರು ಅಂಕ ಪಡೆದಿದ್ದಾರೆ.
ಆಂಗ್ಲ ಮಾಧ್ಯಮದಲ್ಲಿ ಹೆಚ್ಚಳ
ಆಂಗ್ಲ ಮಾಧ್ಯಮದಲ್ಲಿ 3.14 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 2.88 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ. 91.66 ಫಲಿತಾಂಶ ಸಾಧಿಸಲಾಗಿದೆ. ಕಳೆದ ವರ್ಷ
ಆಂಗ್ಲ ಮಾಧ್ಯಮದ ಫಲಿತಾಂಶ ಶೇ. 92.88ರಷ್ಟಿತ್ತು. ಕನ್ನಡ ಮಾಧ್ಯಮಕ್ಕೆ ಹೋಲಿಸಿದರೆ ಆಂಗ್ಲ ಮಾಧ್ಯಮದಲ್ಲಿ ಹೆಚ್ಚಿನ ಫಲಿತಾಂಶ ಬಂದಿದೆ.
ಇನ್ನುಳಿದಂತೆ ಉರ್ದು ಮಾಧ್ಯಮದಲ್ಲಿ ಶೇ.76.09, ಮರಾಠಿ ಶೇ. 86.24, ತೆಲುಗು ಶೇ. 80.40, ತಮಿಳು ಶೇ. 50, ಹಿಂದಿ ಮಾಧ್ಯಮದಲ್ಲಿ ಶೇ. 79.55 ಫಲಿತಾಂಶ ದಾಖಲಾಗಿದೆ.
ಕನ್ನಡ ಮಾಧ್ಯಮದಲ್ಲಿ ಇಳಿಕೆ
ಕನ್ನಡ ಮಾಧ್ಯಮದಲ್ಲಿ ಈ ಬಾರಿ 4.43 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 3.79 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ.85.59ರ ಸಾಧನೆ ಮಾಡಿದ್ದಾರೆ. ಆದರೆ ಕಳೆದ ವರ್ಷದ ಫಲಿತಾಂಶ ಶೇ. 87.65 ಆಗಿತ್ತು. ಇದಕ್ಕೆ ಹೋಲಿಸಿದರೆ ಈ ವರ್ಷ ಅಂದಾಜು ಶೇ.2 ಫಲಿತಾಂಶ ಕಡಿಮೆಯಾಗಿದೆ.
ಛಾಯಾಪ್ರತಿ, ಮರು ಮೌಲ್ಯಮಾಪನ, ಪೂರಕ ಪರೀಕ್ಷೆಗೆ ಅರ್ಜಿ
ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಗಳ ಛಾಯಾಪ್ರತಿ (ಸ್ಕಾನ್ ಕಾಪಿ) ಪಡೆಯಲು ಆನ್ಲೈನ್ ಮೂಲಕ ಮೇ 14ರ ವರೆಗೆ ಅರ್ಜಿ ಸಲ್ಲಿಸಬಹುದು. ಮೇ 15ರಿಂದ 21ರ ವರೆಗೆ ಮರು ಎಣಿಕೆ/ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು. ಮೇ 15ರ ವರೆಗೆ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಮರು ಎಣಿಕೆ ಮತ್ತು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಛಾಯಾಪ್ರತಿಯನ್ನು ಪಡೆಯಬೇಕು. ಬಳಿಕವಷ್ಟೇ ಮರು ಎಣಿಕೆ ಮತ್ತು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬೇಕು. ಮರು ಎಣಿಕೆ ಉಚಿತವಾಗಿರುತ್ತದೆ. ಪ್ರತಿ ವಿಷಯದ ಸ್ಕ್ಯಾನ್ ಪ್ರತಿ ಪಡೆಯಲು 410 ರೂ. ಮತ್ತು ಮರು ಮೌಲ್ಯಮಾಪನಕ್ಕೆ 810 ರೂ. ನಿಗದಿ ಮಾಡಲಾಗಿದೆ. ಸ್ಕಾ$éನ್ ಪ್ರತಿ ಕಳುಹಿಸಿರುವ ಬಗ್ಗೆ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ. ಬಳಿಕ ಮಂಡಳಿ ವೆಬ್ಸೈಟ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಪೂರಕ ಪರೀಕ್ಷೆಗೆ ಒಂದು ವಿಷಯಕ್ಕೆ 370 ರೂ., 2 ವಿಷಯಕ್ಕೆ 461 ರೂ. ಮತ್ತು ಮೂರಕ್ಕಿಂತ ಹೆಚ್ಚಿನ ವಿಷಯಗಳಿಗೆ 620 ರೂ.ಗಳನ್ನು ನಿಗದಿ ಮಾಡಲಾಗಿದೆ. ಈ ಬಗ್ಗೆ ಸಂದೇಹಗಳಿದ್ದರೆ ಮಾಹಿತಿ ಪಡೆಯಲು ಸಹಾಯವಾಣಿ 080- 23310075/76 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.
ಸಿಇಟಿ: ಪ್ರವೇಶ ಪತ್ರ ಡೌನ್ಲೋಡ್ ಸೌಲಭ್ಯ
ಬೆಂಗಳೂ: ಎಂಜಿನಿಯರಿಂಗ್, ಕೃಷಿ ವಿಜ್ಞಾನ, ವೆಟರ್ನರಿ, ಬಿ.ಎಸ್ಸಿ (ನರ್ಸಿಂಗ್) ಮುಂತಾದ ವೃತ್ತಿಪರ ಕೋರ್ಸುಗಳಿಗೆ ಮೇ 20 ಮತ್ತು 21ರಂದು ಸಿಇಟಿ ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ ಸೈಟ್ http://kea.kar.nic.in ಗೆ ಹೋಗಿ ಪ್ರವೇಶಪತ್ರ ಡೌನ್ಲೋಡ್ ಮಾಡಿಕೊಳ್ಳಬಹುದು. ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ರಮ್ಯಾ ಅವರು ಸೋಮವಾರ ಪತ್ರಿಕಾ ಪ್ರಕಟನೆ ಮೂಲಕ ಈ ವಿಷಯ ತಿಳಿಸಿದ್ದು, ಅಭ್ಯರ್ಥಿಗಳು ಸಿಇಟಿ ಸಂಬಂಧ ನೀಡಿರುವ ಸೂಚನೆಗಳನ್ನು ಕೂಡ ಸರಿಯಾಗಿ ಪಾಲಿಸಬೇಕು ಎಂದಿದ್ದಾರೆ. ಜತೆಗೆ, ಗಡಿನಾಡು ಮತ್ತು ಹೊರನಾಡು ಕನ್ನಡ ವಿದ್ಯಾರ್ಥಿಗಳಿಗೆ ಮೇ 22ರಂದು ಕನ್ನಡ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
MUST WATCH
ಹೊಸ ಸೇರ್ಪಡೆ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ