ಹಿಜಾಬ್ ವಿವಾದ ಭಾರತದ ಹೆಸರು ಕೆಡಿಸುವ ಪ್ರಯತ್ನ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ
ಅಲ್ಲಾಹು ಅಕ್ಬರ್ ಘೋಷಣೆ ಕೂಗಿದವಳನ್ನು ವೈಭವೀಕರಣ ಮಾಡಲಾಯಿತು..!
Team Udayavani, Feb 19, 2022, 7:24 PM IST
ಧಾರವಾಡ: ಹಿಜಾಬ್ ವಿವಾದವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಡಿ ಭಾರತದ ಹೆಸರು ಕೆಡಿಸುವ ಪ್ರಯತ್ನ ಸಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆ-ಕಾಲೇಜುಗಳಲ್ಲಿ ಕೇಸರಿ ಧ್ವಜ, ಹಿಜಾಬ್, ಟೋಪಿ ಹಾಕಬಾರದು. ಇದರಿಂದ ಮುಸ್ಲಿಂ, ಹಿಂದೂ ಎಂಬ ಭಾವ ಶುರುವಾಗುತ್ತದೆ. ಶಾಲೆಯಲ್ಲಿ ಗುಂಪುಗಳು ಬೆಳೆಯುತ್ತವೆ. ಇದನ್ನು ದುರುದ್ದೇಶಪೂರ್ವಕವಾಗಿ ಕೆಲವರು ಮಾಡುತ್ತಿದ್ದು, ಭಾರತ ವಿರೋಧಿ ಸಂಘಟನೆಗಳು ಪ್ರಚಾರ ಮಾಡುತ್ತಿವೆ. ಇದಕ್ಕಾಗಿ ಟೂಲ್ಕಿಟ್ ತಯಾರಾಗಿದೆ. ಹಿಜಾಬ್ ವಿಷಯದಲ್ಲಿ ಕೆಲ ಸಂಘಟನೆಗಳು ಭಾರತ ಹೆಸರು ಕೆಡಿಸುವ ಪ್ರಯತ್ನ ನಡೆಸಿವೆ. ಕೆಲವರು ದುರುದ್ದೇಶಪೂರ್ವಕ ಈ ಕೆಲಸ ಮಾಡುತ್ತಿದ್ದಾರೆ. ಭಾರತದ ವಿರೋಧಿ ಸಂಘಟನೆಗಳು ಯಾವ ರೀತಿ ಕೆಲಸ ಮಾಡುತ್ತಿದ್ದಾರೆ. ಅಲ್ಲಾಹು ಅಕ್ಬರ್ ಘೋಷಣೆ ಕೂಗಿದವಳನ್ನು ವೈಭವೀಕರಣ ಮಾಡಲಾಯಿತು. ಹೀಗೆ ಅನೇಕ ವಿಚಾರದಲ್ಲಿ ಅತ್ಯಂತ ಸುವ್ಯವಸ್ಥಿತವಾಗಿ ದೇಶದ ಹೆಸರು ಹಾಳು ಮಾಡುವ ಪ್ರಯತ್ನ ನಡೆದಿದೆ. ಇನ್ನು ಕಾಂಗ್ರೆಸ್ ಪಕ್ಷವು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ವಿರೋಧಿಸುವ ಭರದಲ್ಲಿ ದೇಶವನ್ನು ವಿರೋಧಿಸಬಾರದು ಎಂದರು.
ಹಿಜಾಬ್ ವಿಚಾರವಾಗಿ ಕಾಂಗ್ರೆಸ್ನಲ್ಲಿ 2 ಗುಂಪುಗಳಾಗಿವೆ. ಹಿಜಾಪ್ ಪರ ಹಾಗೂ ವಿರೋಧದ ನಿರ್ಣಯ ಕೈಗೊಳ್ಳುವ ಕುರಿತು ಅವರಲ್ಲೇ ಗೊಂದಲ ಇದೆ. ತಮ್ಮ ನಿಲುವನ್ನ ಸ್ಪಷ್ಟಪಡಿಸಲು ಅಧಿವೇಶನ ಹಾಳು ಮಾಡುತ್ತಿದ್ದಾರೆ. ಆಂತರಿಕ ಸಮಸ್ಯೆ ಮುಚ್ಚಿಡಲು ಈಶ್ವರಪ್ಪ ಹೇಳಿಕೆ ಮುಂದಿಟ್ಟುಕೊಂಡು ಅಽವೇಶನ ಹಾಳು ಮಾಡುತ್ತಿದ್ದಾರೆ. ಸಚಿವ ಈಶ್ವರಪ್ಪ ಅವರು 100-200 ವರ್ಷಗಳ ನಂತರ ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸಲಾಗುವುದು ಎಂಬ ಹೇಳಿಕೆ ಕೊಟ್ಟಿದ್ದು, ಆದರೆ ಕಾಂಗ್ರೆಸ್ ಪಕ್ಷ ಇದನ್ನೇ ವಿಷಯವನ್ನಾಗಿಸಿಕೊಂಡು ಅಧಿವೇಶನ ಹಾಳು ಮಾಡುತ್ತಿದೆ ಎಂದು ಆಪಾದಿಸಿದರು.