ಸಿದ್ದರಾಮಯ್ಯಗೆ ಎರಡು ಸಲ ರಾಜಕೀಯವಾಗಿ ಲೈಫ್ ಕೊಟ್ಟಿದ್ದೆ: ಸಿಎಂ ಇಬ್ರಾಹಿಂ
ಮೇಕಪ್ ಮಾಡಿ ಸಿಎಂ ಮಾಡಿದೆ... ಇಂದು ನನ್ನ ಮಗನ ವಿರುದ್ಧ ಮಾತನಾಡುತ್ತಿದ್ದಾರೆ....
Team Udayavani, Feb 10, 2023, 10:46 PM IST
ಬೀದರ್ :ಸಿದ್ದರಾಮಯ್ಯಗೆ ಎರಡು ಸಲ ನಾನು ರಾಜಕೀಯವಾಗಿ ಲೈಫ್ ಕೊಟ್ಟೆ. ಜೊತೆಗೆ ಮೇಕಪ್ ಮಾಡಿ ಸಿಎಂ ಮಾಡಿದೆ. ಆದರೆ, ಇಂದು ನನ್ನ ಮಗನ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಹುಮನಾಬಾದ್ ಗೆ ಬಂದು ನನ್ನ ಮಗನ ವಿರುದ್ಧ ಮಾತಾನಾಡಿದ್ದು ನನಗೆ ತುಂಬಾ ನೋವಾಗಿದೆ. ಅವರನ್ನು ಬಾದಾಮಿಗೆ ತಂದು ನಿಲ್ಲಿಸಿ ಗೆಲ್ಲಿಸಿದ್ದು ನಾನು, ಸಿದ್ದರಾಮಯ್ಯ ವಲಸಿಗರು ಅಲ್ವಾ ಎಂದು ಇಬ್ರಾಹಿಂ ಪ್ರಶ್ನೆ ಮಾಡಿದರು.
ಬಿಜೆಪಿ ನಾಯಕರಿಗೆ ಧಮ್ ಮತ್ತು ತಾಕತ್ ಇದ್ದರೆ ಪ್ರಲ್ಹಾದ್ ಜೋಶಿ ನಮ್ಮ ಸಿಎಂ ಎಂದು ಹೇಳಿಲಿ. ಜೋಶಿಯನ್ನು ಆಗಲೇ ಸಿಎಂ ಮಾಡಬೇಕು ಅಂತ ಇತ್ತು, ನೀವು ಯಾರಿಗೂ ಬೇಕಾದರೂ ಸಿಎಂ ಮಾಡಿಕೊಳ್ಳಿ ಎಂದು ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.
ಮಾಜಿ ಸಿಎಂ ಯಡಿಯೂರಪ್ಪ ಅವರು ಮೂಲೆಗುಂಪಾಗಿ ಬಹಳ ದಿನವಾಯ್ತು, ನಿಮಗೆ ಮೋಸ ಮಾಡುತ್ತಾರೆ ಎಂದು ನಾನು 4 ವರ್ಷಗಳ ಹಿಂದೆ ಹೇಳಿದ್ದೆ. ಇಂದು ಯಡಿಯೂರಪ್ಪ ಅದನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿದರು.