ಕರಾವಳಿ: ಅಂದುಕೊಂಡದ್ದು ಹೆಚ್ಚು; ಸಿಕ್ಕಿದ್ದು ಸ್ವಲ್ಪ
ಕಡಲ ಕಿನಾರೆ ಅಂತಾರಾಷ್ಟ್ರೀಯ ದರ್ಜೆಗೆ; 1,348 ಕಿಂಡಿ ಅಣೆಕಟ್ಟು
Team Udayavani, Mar 9, 2021, 6:30 AM IST
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ ಸಹಿತವಾಗಿ ಕರಾವಳಿ ಕರ್ನಾಟಕದ ಅಭಿವೃದ್ಧಿಗೆ ರಾಜ್ಯ ಸರಕಾರ ಹೊಸ ಯೋಜನೆಗಳನ್ನು ಘೋಷಣೆ ಮಾಡದೇ ಇದ್ದರೂ ಈಗಾಗಲೇ ಇರುವ ಯೋಜನೆಗಳನ್ನು ಉನ್ನತೀಕರಿಸುವ ಹಾಗೂ ಕೇಂದ್ರ ಸರಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಬಜೆಟ್ ಮೂಲಕ ಭರವಸೆ ನೀಡಿದೆ.
ಕರಾವಳಿ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ಯೋಜನೆಯನ್ನು ರೂಪಿಸಿ ಮೂಲಸೌಕರ್ಯಗಳನ್ನು ಕಲ್ಪಿಸಲು ಸರಕಾರ ಉದ್ದೇಶಿಸಿದೆ. ಈ ನಿಟ್ಟಿನಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಕರಾವಳಿ ಅಭಿವೃದ್ಧಿ ಮಂಡಳಿಯನ್ನಾಗಿ ಪುನಾರಚಿಸಲು ವಿಧೇಯಕ ತರುವ ಪ್ರಸ್ತಾವ ಮಾಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಅಂಕೋಲಾದ ನೌಕಾ ವಾಯುನೆಲೆ ಸಮೀಪದಲ್ಲಿ ಸಿವಿಲ್ ಎನ್ಕ್ಲೇವ್ ಅಭಿವೃದ್ಧಿಪಡಿಸಲಾಗುತ್ತದೆ.
ಪ್ಲಾಸ್ಟಿಕ್ ಪಾರ್ಕ್ಗೆ 66 ಕೋಟಿ ರೂ.
ಪ್ಲಾಸ್ಟಿಕ್ ಮತ್ತು ಪೆಟ್ರೋಕೆಮಿಕಲ್ ಕೈಗಾರಿಕೆಗಳನ್ನು ಪ್ರೋತ್ಸಾ ಹಿಸಲು ಮಂಗಳೂರಿನ ಗಂಜಿಮಠದಲ್ಲಿ 100 ಎಕರೆ
ಭೂಮಿಯಲ್ಲಿ 66 ಕೋಟಿ ರೂ.ಗಳ ಯೋಜನಾ ವೆಚ್ಚದಲ್ಲಿ ಕೇಂದ್ರ ಸರಕಾರದ ನೆರವಿನೊಂದಿಗೆ ಪ್ಲಾಸ್ಟಿಕ್ ಪಾರ್ಕ್ ಅಭಿವೃದ್ಧಿಪಡಿಸಲಾಗುತ್ತದೆ. ಹಾಗೆಯೇ ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವ ಉದ್ದೇಶದೊಂದಿಗೆ ಶಿರಸಿಯಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು 7 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುತ್ತದೆ. ಈ ಯೋಜನೆಗೆ 2021-22ರಲ್ಲಿ 2 ಕೋಟಿ ರೂ. ಒದಗಿಸ ಲಾಗುತ್ತದೆ.
ಪ್ರವಾಸೋದ್ಯಮಕ್ಕೆ ಒತ್ತು
ರಾಜ್ಯವು 320 ಕಿ.ಮೀ. ಕಡಲ ಕಿನಾರೆ ಹೊಂದಿದ್ದು, ಹೆಚ್ಚಿನ ಕಡಲತೀರಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ, ಅಂತಾ ರಾಷ್ಟ್ರೀಯ ದರ್ಜೆಗೆ ಏರಿಸಿ ಕೇಂದ್ರೀಕೃತಗೊಳಿಸಿ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಭರವಸೆ ವ್ಯಕ್ತಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ತ್ರಾಸಿ, ಮರವಂತೆ, ಒತ್ತಿನೆಣೆ ಹಾಗೂ ಇತರ ಕಡಲ ತೀರಗಳನ್ನು 10 ಕೋಟಿ ರೂ. ವೆಚ್ಚದಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಬೈಂದೂರು ತಾಲೂಕಿನ ಸೋಮೇಶ್ವರ ಕಡಲ ತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ 10 ಕೋಟಿ ರೂ. ಒದಗಿಸ ಲಾಗುವುದು.
ಬಂದರು-ರಸ್ತೆ ಜೋಡಣೆ
ರಾಜ್ಯದ ಬಂದರುಗಳನ್ನು ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಪ ರ್ಕಿಸಲು ಹೊನ್ನಾವರದ ಕಾಸರಕೋಡ ಬದಿಯಲ್ಲಿ ಅಭಿವೃದ್ಧಿ
ಪಡಿಸುತ್ತಿರುವ ಬಂದರು ಪ್ರದೇಶಕ್ಕೆ ರಾಷ್ಟ್ರೀಯ ಹೆದ್ದಾರಿ-66ರಿಂದ ಭಾರತಮಾಲಾ ಯೋಜನೆಯಡಿ ಚತುಷ್ಪಥ ಸಂಪರ್ಕ ರಸ್ತೆಯನ್ನು 100 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೆಂಡರ್ ಕರೆದಿದ್ದು, ಕಾಮಗಾರಿ ಶೀಘ್ರಗತಿಯಲ್ಲಿ ಪೂರ್ಣಗೊಳ್ಳಲಿದೆ. ಕೊಚ್ಚಿಯಿಂದ ಮಂಗಳೂರು ವರೆಗಿನ 450 ಕಿ.ಮೀ. ಅನಿಲ ಪೈಪ್ಲೈನನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. 3,000 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳ್ಳಲಿರುವ ಈ ಯೋಜನೆಯಿಂದ ಹೊಸ ಉದ್ಯೋಗ ಸೃಷ್ಟಿಗೆ ಮತ್ತು ಮಾಲಿನ್ಯ ಕಡಿಮೆ ಮಾಡಲು ಅನುಕೂಲವಾಗಲಿದೆ.
ರಾಜ್ಯದ ಕರಾವಳಿ ಪ್ರದೇಶದಲ್ಲಿ ಸುರಕ್ಷೆ ಮತ್ತು ಭದ್ರತೆ ಯನ್ನು ಹೆಚ್ಚಿಸಲು ಕರಾವಳಿ ಕಾವಲು ಪಡೆಯನ್ನು ಅತ್ಯಾಧು ನಿಕ ತಂತ್ರಜ್ಞಾನವನ್ನು ಅಳವಡಿಸಿ ಹಂತ ಹಂತವಾಗಿ ಬಲಪಡಿಸ ಲಾಗುವುದು. ಈ ಉದ್ದೇಶಕ್ಕಾಗಿ ಪ್ರಸಕ್ತ ಸಾಲಿನಲ್ಲಿ 2 ಕೋಟಿ ರೂ. ನೀಡಲಾಗಿದೆ. ಮಂಗಳೂರಿನ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥದ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಿ, ಈ ವರ್ಷದಲ್ಲಿ ಲೋಕಾರ್ಪಣೆ ಮಾಡಲಾಗುತ್ತದೆ.
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶದ ನದಿಗಳಲ್ಲಿ ಪ್ರವಾಹ ಉಂಟಾದಾಗ ಮತ್ತು ಭಾರೀ ಅಲೆಗಳಿಂದಾಗಿ ಉಪ್ಪು
ನೀರು ಹಿಮ್ಮುಖವಾಗಿ ನುಗ್ಗುವುದನ್ನು ಫ್ಲಾಪ್ ಗೇಟ್ ಮುಖಾಂತರ ತಡೆಗಟ್ಟಲು ಖಾರ್ಲ್ಯಾಂಡ್ ಯೋಜನೆಯನ್ನು 300 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿದೆ. ಕರಾವಳಿ ಭಾಗದಲ್ಲಿ ಸಮರ್ಪಕ ರಸ್ತೆ ಸಂಪರ್ಕವಿಲ್ಲದ ಸ್ಥಳಗಳಲ್ಲಿ ಕಾಲುಸಂಕಗಳನ್ನು ನಿರ್ಮಿಸುವ ಗ್ರಾಮಬಂಧ ಸೇತುವೆ ಯೋಜನೆಯನ್ನು 100 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು.
ಕೇಂದ್ರ ಸರಕಾರದ ರಾಷ್ಟ್ರೀಯ ಜಲಮಾರ್ಗಗಳ ಪ್ರಾಧಿಕಾರದ ಧನಸಹಾಯದೊಂದಿಗೆ 60 ಕೋಟಿ ರೂ. ಮೊತ್ತದಲ್ಲಿ ಕಾಳಿ, ನೇತ್ರಾವತಿ ನದಿ, ಗುರುಪುರ ಹಾಗೂ ಉಡುಪಿ ಜಿಲ್ಲೆಯ ಹಂಗಾರಕಟ್ಟೆಯಿಂದ ಮಣಿಪಾಲದವರೆಗೆ ಪ್ರವಾಸೋದ್ಯಮಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸಲು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಮರವಂತೆ, ತ್ರಾಸಿ, ಸೋಮೇಶ್ವರ ಕಡಲ ತೀರ ಅಭಿವೃದ್ಧಿ
ಕುಂದಾಪುರ, ಮಾ. 8: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಜೆಟ್ನಲ್ಲಿ ಕುಂದಾಪುರ, ಬೈಂದೂರು ಭಾಗದ ಪಶ್ಚಿಮ ವಾಹಿನಿ ಯೋಜನೆಯಡಿ ಕಿಂಡಿ ಅಣೆಕಟ್ಟುಗಳಿಗೆ ಅನುದಾನ ಹಾಗೂ ಪ್ರಮುಖವಾಗಿ ತ್ರಾಸಿ, ಮರವಂತೆ, ಒತ್ತಿನೆಣೆ ಹಾಗೂ ಸೋಮೇಶ್ವರ ಕಡಲ ತೀರಗಳ ಸಮಗ್ರ ಅಭಿವೃದ್ಧಿ ಒಟ್ಟು 20 ಕೋ.ರೂ. ಘೋಷಿಸಲಾಗಿದೆ.
ಪಶ್ಚಿಮವಾಹಿನಿ ಯೋಜನೆಯಡಿ ಮಾಸ್ಟರ್ ಪ್ಲಾನ್ ಅಡಿ ಮುಂದಿನ 5 ವರ್ಷಗಳಲ್ಲಿ 3,986 ಕೋ.ರೂ. ವೆಚ್ಚದಲ್ಲಿ ಕರಾವಳಿ ಜಿಲ್ಲೆಗಳ 1,348 ಕಿಂಡಿ ಅಣೆಟ್ಟು ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಈ ಸಾಲಿನಲ್ಲಿ ಇದಕ್ಕಾಗಿ 500 ಕೋ.ರೂ. ಅನುದಾವನ್ನು ಮೀಸಲಿರಿಸಲಾಗಿದೆ. ಈ ಪೈಕಿ ಕುಂದಾಪುರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದ ಸಾಕಷ್ಟು ಕಿಂಡಿ ಅಣೆಕಟ್ಟುಗಳಿಗೆ ಅನುದಾನ ವಿನಿಯೋಗವಾಗಲಿದೆ.
ಅಂತಾರಾಷ್ಟ್ರೀಯ ದರ್ಜೆ
ಮರವಂತೆಯ ಬೀಚ್ ಈಗಾಗಲೇ ತನ್ನ ಸಹಜ ಸೌಂದರ್ಯದಿಂದಲೇ ವಿಶ್ವ ಪ್ರಸಿದ್ಧವಾಗಿದೆ. ಆದರೆ ಇಲ್ಲಿಗೆ ಬರುವ ಪ್ರವಾಸಿಗರಿಗೆ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಇನ್ನೂ ಸಾಕಷ್ಟು ಅಭವೃದ್ಧಿ ಕಾರ್ಯಗಳು ಬಾಕಿಯಿದ್ದು, ಆ ನಿಟ್ಟಿನಲ್ಲಿ ಇದರೊಂದಿಗೆ ತ್ರಾಸಿ ಹಾಗೂ ಒತ್ತಿನೆಣೆ ಕಡಲ ಕಿನಾರೆಯನ್ನು ಅಂತಾರಾಷ್ಟ್ರೀಯ ದರ್ಜೆಯ ಬೀಚ್ಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ಬೀಚ್ನ ಸಮಗ್ರ ಅಭಿವೃದ್ಧಿಗೆ 10 ಕೋ.ರೂ.ಘೋಷಿಸಲಾಗಿದೆ.
ಸೋಮೇಶ್ವರಕ್ಕೆ 10 ಕೋ.ರೂ.
ಬೈಂದೂರು ವಿಧಾನಸಭಾ ಕ್ಷೇತ್ರದ ಸೋಮೇಶ್ವರ ಕಡಲ ತೀರವನ್ನು ಸುಂದರ ಪ್ರವಾಸೋದ್ಯಮ ತಾಣವನ್ನಾಗಿಸುವ ನಿಟ್ಟಿನಲ್ಲಿ 10 ಕೋ.ರೂ. ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Home Minister ಅಮಿತ್ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್
Karnataka Govt ಎಸ್ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ
D. K. Shivakumar ಪೆನ್ಡ್ರೈವ್ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ
Prajwal Revanna Case ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್ ದಾಖಲು
Hassan Pen Drive Case; ಕಾರ್ತಿಕ್ ಪೆನ್ಡ್ರೈವ್ ಕೊಟ್ಟಿದ್ದು ನಿಜ: ದೇವರಾಜೇಗೌಡ