ಮಂದಿರ ಕಾಮಗಾರಿ ಮತ್ತಷ್ಟು ಬಿರುಸು
ಮೊದಲ ಅಂತಸ್ತಿನ ಫೋಟೋ ಹಂಚಿಕೊಂಡ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್
Team Udayavani, Jul 10, 2023, 7:57 AM IST
ಲಕ್ನೋ: ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ 2024ಕ್ಕೆ ನಿಗದಿಯಾಗಿರುವ ನಡುವೆಯೇ, ರಾಮಮಂದಿರ ನಿರ್ಮಾಣದ ಕೆಲಸ ಬಿರುಸುಗೊಂಡಿದೆ. ಮಂದಿರದ ನೆಲಮಹಡಿಯ ಕಾಮಗಾರಿ ಪೂರ್ಣಗೊಂಡು, ಮೊದಲ ಅಂತಸ್ತಿನ ಕಾಮಗಾರಿ ನಡೆಯುತ್ತಿದೆ. ಅದರ ನೂತನ ಫೋಟೋಗಳನ್ನು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಟ್ವಿಟರ್ನಲ್ಲಿ ಹಂಚಿಕೊಂಡಿದೆ.
ಮೊದಲ ಅಂತಸ್ತನ್ನು ರಾಮದರ್ಬಾರ್ ಆಗಿ ನಿರ್ಮಿಸಲು ಯೋಜಿಸಲಾಗಿದೆ. ಪ್ರಭು ಶ್ರೀರಾಮನು ತಮ್ಮ ನಾಲ್ವರು ಸಹೋದರರ ಜತೆಗೆ ದರ್ಬಾರಿನಲ್ಲಿ ಆಸೀನರಾಗುವಂಥ ವಿನ್ಯಾಸವನ್ನು ಮೊದಲ ಅಂತಸ್ತು ಹೊಂದಿರಲಿದೆ. ಅಲ್ಲದೆ, ಮಹಾಪೀಠವನ್ನೂ ಸ್ಥಾಪಿಸಲು ಯೋಜಿಸಲಾಗಿದೆ. ಮೊದಲ ಅಂತಸ್ತಿನಲ್ಲಿ ನಿರ್ಮಿಸಲಾಗುವ ಕಂಬಗಳಲ್ಲಿನ ಕೆತ್ತನೆ ಕೆಲಸವೂ ಆರಂಭಗೊಂಡಿದ್ದು, ವೇಗವಾಗಿ ನಡೆಯುತ್ತಿದೆ ಎಂಬುದಾಗಿಯೂ ಟ್ರಸ್ಟ್ ತಿಳಿಸಿದೆ.
ಇನ್ನು ಎರಡನೇ ಮಹಡಿಯಲ್ಲಿ ಏನಿರಲಿದೆ ಎಂಬುದರ ಬಗ್ಗೆ ಇನ್ನೂ ಯೋಜಿಸಿಲ್ಲ. ನೆಲ ಮಹಡಿಯಲ್ಲೇ ರಾಮಲಲ್ಲಾನ ಪ್ರಾಣಪ್ರತಿಷ್ಠಾನೆ ಸಮಾರಂಭ ನೆರವೇರಲಿದೆ ಎಂದು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಸದಸ್ಯ ಡಾ. ಅನಿಲ್ ಮಿಶ್ರಾ ಹೇಳಿದ್ದಾರೆ. ಟ್ರಸ್ಟ್ ಹಂಚಿಕೊಂಡಿರುವ ಫೋಟೋಗಳಿಗೆ ಕೋಟ್ಯಂತರ ರಾಮಭಕ್ತರು ಪ್ರತಿಕ್ರಿಯಿಸಿದ್ದಾರೆ. ಆದಷ್ಟು ಬೇಗ ಭವ್ಯ ರಾಮಮಂದಿರವನ್ನು ಕಣ್ತುಂಬಿಕೊಳ್ಳುವ ಭಾಗ್ಯ ದೊರೆಯಲೆಂದೂ ಪ್ರಾರ್ಥಿಸಿ, ಕಮೆಂಟಿಸಿದ್ದಾರೆ.