Pakistan: ದೇಗುಲಗಳ ಧ್ವಂಸ- ಹಿಂದೂಗಳು ದನಿ ಎತ್ತಬೇಕಿದೆ: ಕ್ರಿಕೆಟರ್ ಡ್ಯಾನಿಶ್ ಕನೇರಿಯಾ
ಪಾಕ್ನಲ್ಲಿನ ದೌರ್ಜನ್ಯದ ವಿರುದ್ಧ ಕ್ರಿಕೆಟರ್ ಡ್ಯಾನಿಶ್ ಕನೇರಿಯಾ ಕಿಡಿ
Team Udayavani, Jul 19, 2023, 7:15 AM IST
ಕರಾಚಿ: “ಪಾಕಿಸ್ತಾನದಲ್ಲಿ ಐತಿಹಾಸಿಕ ಹಿಂದೂ ದೇಗುಲಗಳನ್ನು ನೆಲಸಮ ಮಾಡುತ್ತಿರುವ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯವೇಕೆ ಮೌನವಾಗಿದೆ?”
ಹೀಗೆಂದು ಪ್ರಶ್ನಿಸಿರುವುದು ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಡ್ಯಾನಿಶ್ ಕನೇರಿಯಾ. “ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ಪ್ರತಿದಿನ ಲೆಕ್ಕವಿಲ್ಲದಷ್ಟು ಮತಾಂತರ, ಅಪಹರಣ, ಅತ್ಯಾಚಾರ, ಹತ್ಯೆ ಸೇರಿದಂತೆ ಅನೇಕ ರೀತಿಯ ದೌರ್ಜನ್ಯಗಳು ನಡೆಯುತ್ತಿವೆ. ಈ ಅನ್ಯಾಯದ ವಿರುದ್ಧ ವಿಶ್ವಾದ್ಯಂತ ಇರುವ ಹಿಂದೂಗಳು ದನಿ ಎತ್ತಬೇಕು,’ ಎಂದು ಅವರು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ದೇಗುಲಗಳಿಗೆ ಭದ್ರತೆ:
ದುಷ್ಕರ್ಮಿಗಳ ಗುಂಪು ರಾಕೆಟ್ ಲಾಂಚರ್ಗಳನ್ನು ಬಳಸಿ ಹಿಂದೂ ದೇಗುಲವನ್ನು ಧ್ವಂಸಗೊಳಿಸಿದ ಬೆನ್ನಲ್ಲೇ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಹಿಂದೂ ದೇವಾಲಯಗಳ ಭದ್ರತೆಗಾಗಿ 400 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎರಡು ತಿಂಗಳ ಮಟ್ಟಿಗೆ ಅವರಿಗೆ ದೇವಾಲಯಗಳ ಭದ್ರತೆಯ ಟಾಸ್ಕ್ ನೀಡಲಾಗಿದೆ ಎಂದು ಸಿಂಧ್ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.
ಇನ್ನೊಂದೆಡೆ, ಕಶ್ಮೋರ್ ಪ್ರದೇಶದಲ್ಲಿ ಭಾನುವಾರ ದೇಗುಲ ಮತ್ತು ಸಮೀಪದ ಹಿಂದೂಗಳ ಮನೆಗಳನ್ನು ರಾಕೆಟ್ ಲಾಂಚರ್ ಬಳಸಿ ಧ್ವಂಸಗೊಳಿಸಿದ ಸಂಬಂಧ ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅವರ ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.