ಏಕದಿನ ವಿಶ್ವಕಪ್ಗೂ ರಿಷಭ್ ಪಂತ್ ಅನುಮಾನ
Team Udayavani, Apr 27, 2023, 7:38 AM IST
ನವದೆಹಲಿ: ಭೀಕರ ಕಾರು ಅಪಘಾತಕ್ಕೆ ಸಿಲುಕಿ ಪ್ರಾಣಾಪಾಯದಿಂದ ಪಾರಾಗಿರುವ ರಿಷಭ್ ಪಂತ್ ಬಹಳ ಬೇಗ ಚೇತರಿಕೆ ಕಂಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದೊಂದಿಗೆ ಸಂಚಾರವನ್ನೂ ಮಾಡುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿಗೂ ಆಗಮಿಸಿದ್ದರು.
ಅಂದಮಾತ್ರಕ್ಕೆ ರಿಷಭ್ ಪಂತ್ ಶೀಘ್ರದಲ್ಲೇ ಕ್ರಿಕೆಟ್ ಕಣಕ್ಕೆ ಇಳಿಯಲಿದ್ದಾರೆ ಎಂದು ಭಾವಿಸಿದರೆ ತಪ್ಪಾಗುತ್ತದೆ. ಪೂರ್ಣ ಪ್ರಮಾಣದ ಕ್ರಿಕೆಟ್ ಫಿಟ್ನೆಸ್ಗೆ 7-8 ತಿಂಗಳು ಬೇಕಾಗಬಹುದು ಎಂದು ವರದಿಯಾಗಿದೆ. ಹೀಗಾಗಿ ಪಂತ್ ಮುಂದಿನ ಏಷ್ಯಾ ಕಪ್ ಮಾತ್ರವಲ್ಲ, ವರ್ಷಾಂತ್ಯ ಭಾರತದ ಆತಿಥ್ಯದಲ್ಲಿ ಆಡಲಾಗುವ ಏಕದಿನ ವಿಶ್ವಕಪ್ ಪಂದ್ಯಾವಳಿಯಿಂದಲೂ ಬೇರ್ಪಡುವುದು ಅನಿವಾರ್ಯವಾಗಬಹುದು ಎನ್ನಲಾಗಿದೆ.
“ರಿಷಭ್ ಪಂತ್ ಕ್ರಿಕೆಟ್ ಕಣಕ್ಕಿಳಿಯಲು ಇನ್ನೂ 7ರಿಂದ 8 ತಿಂಗಳು ಬೇಕಾದೀತು. ಇದು ಕೇವಲ ಬ್ಯಾಟರ್ ಆಗಿ ಮಾತ್ರ. ಅವರು ಮತ್ತೆ ಕೀಪಿಂಗ್ ನಡೆಸಬೇಕಾದರೆ ಇನ್ನೂ ಹೆಚ್ಚಿನ ಸಮಯ ಬೇಕಾಗುತ್ತದೆ. ಮೊದಲು ಪಂತ್ ಕೇವಲ ಬ್ಯಾಟರ್ ಆಗಿ ತಂಡಕ್ಕೆ ಮರಳುವುದು ಸೂಕ್ತವೆನಿಸಲಿದೆ. ಪಂತ್ ಟೀಮ್ ಇಂಡಿಯಾದ ಬ್ಯಾಟಿಂಗ್ ಆಸ್ತಿ” ಎಂಬುದಾಗಿ ಕ್ರಿಕೆಟ್ ವೆಬ್ಸೈಟ್ ವರದಿ ಮಾಡಿದೆ.
ಏಕದಿನ ವಿಶ್ವಕಪ್ ಪಂದ್ಯಾವಳಿ ಅ.5ರಿಂದ ನ.19ರ ತನಕ ಸಾಗಲಿದೆ.