PFI Ban: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಿಷೇಧಕ್ಕೆ ಕೇಂದ್ರ ಸರ್ಕಾರ ಕೊಟ್ಟ 5 ಕಾರಣಗಳೇನು?
ಪಿಎಫ್ ಐ ಸಂಘಟನೆಯನ್ನು ನಿಷೇಧಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ ಎಂಬ ವದಂತಿ ದಟ್ಟವಾಗಿ ಹಬ್ಬಿತ್ತು.
Team Udayavani, Sep 28, 2022, 10:13 AM IST
ನವದೆಹಲಿ:ದೇಶಾದ್ಯಂತ ಪಿಎಫ್ ಐ ಕಚೇರಿ, ಮುಖಂಡರ ನಿವಾಸಗಳ ಮೇಲೆ ಎನ್ ಐಎ ಮತ್ತು ಜಾರಿ ನಿರ್ದೇಶನಾಲಯ ದಾಳಿ ನಡೆಸಿದ್ದ ಬೆನ್ನಲ್ಲೇ ಕೇಂದ್ರ ಸರ್ಕಾರ ಬುಧವಾರ (ಸೆಪ್ಟೆಂಬರ್ 28) ಮಧ್ಯರಾತ್ರಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಅದರ ಸಹವರ್ತಿ ಸಂಘಟನೆಗಳನ್ನು ಐದು ವರ್ಷಗಳ ಕಾಲ ನಿಷೇಧಿಸಿ ಅಧಿಸೂಚನೆ ಹೊರಡಿಸಿದೆ.
ಇದನ್ನೂ ಓದಿ:ವಿಧ್ವಂಸಕ ಕೃತ್ಯಗಳಿಗೆ ಈ ದೇಶದಲ್ಲಿ ಅವಕಾಶವಿಲ್ಲ- ಬಸವರಾಜ ಬೊಮ್ಮಾಯಿ
ಪಿಎಫ್ ಐ ಹಾಗೂ ಅದರ ಸಹವರ್ತಿ ಸಂಘಟನೆಗಳು ದೇಶದಲ್ಲಿ ರಹಸ್ಯ ಅಜೆಂಡಾವನ್ನು ಇಟ್ಟುಕೊಂಡು ಕಾನೂನು ಬಾಹಿರ ಚಟುವಟಿಕೆ ನಡೆಸುವ ಮೂಲಕ ಸಮಾಜದಲ್ಲಿ ಅಶಾಂತಿ, ಗಲಭೆ ಹುಟ್ಟುಹಾಕಲು ಯತ್ನಿಸಿರುವುದಾಗಿ ಕೇಂದ್ರ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ ಎಂದು ವರದಿಯಾಗಿದೆ.
ದೇಶಾದ್ಯಂತ ಪಿಎಫ್ ಐ ಮತ್ತು ಎಸ್ ಡಿಪಿಐ ಕಚೇರಿ, ಮುಖಂಡರ ನಿವಾಸದ ಮೇಲೆ ಎನ್ ಐಎ ಮತ್ತು ಜಾರಿ ನಿರ್ದೇಶನಾಲಯ ದಾಳಿ ನಡೆಸಿದ್ದ ಬಳಿಕ ಪಿಎಫ್ ಐ ಸಂಘಟನೆಯನ್ನು ನಿಷೇಧಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ ಎಂಬ ವದಂತಿ ದಟ್ಟವಾಗಿ ಹಬ್ಬಿತ್ತು.
ಸೆಪ್ಟೆಂಬರ್ 22ರಂದು ನಡೆಸಿದ ದಾಳಿಯಲ್ಲಿ ಲಭ್ಯವಾದ ಪುರಾವೆ ಮತ್ತು ಬಳಿಕ ದೇಶವ್ಯಾಪಿ ನಡೆದ ಹಿಂಸಾಚಾರವು, ಪಿಎಫ್ ಐ ಅತ್ಯಂತ ಅಪಾಯಕಾರಿ ಸಂಘಟನೆಯಾಗಿದ್ದು, ಯಾವುದೇ ರೀತಿಯ ಭಯೋತ್ಪಾದನೆ ಕೃತ್ಯ ಎಸಗುವ ಸಾಮರ್ಥ್ಯ ಹೊಂದಿತ್ತು ಎಂಬುದು ದೃಢಪಟ್ಟಿರುವುದಾಗಿ ಕೇಂದ್ರಕ್ಕೆ ಎನ್ ಐಎ ಮತ್ತು ಇ.ಡಿ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿರುವುದಾಗಿ ತಿಳಿಸಿದೆ.
ಪಿಎಫ್ ಐ ಮತ್ತು ಸಹವರ್ತಿ ಸಂಘಟನೆಗಳ ನಿಷೇಧಕ್ಕೆ ಕೇಂದ್ರದ ಐದು ಕಾರಣಗಳು:
1)ಪಿಎಫ್ ಐ ಸಂಘಟನೆಯನ್ನು ನಿಷೇಧಿಸಲು ಕೇಂದ್ರ ಸರ್ಕಾರ ನೀಡಿರುವ ಕಾರಣ, 2006ರಲ್ಲಿ ಕೇರಳದಲ್ಲಿ ಹುಟ್ಟುಹಾಕಿರುವ ಪಿಎಫ್ ಐ ಸಂಘಟನೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗುವ ಮೂಲಕ ದೇಶದ ಭದ್ರತೆಗೆ ಅಪಾಯವನ್ನು ತಂದೊಡ್ಡಿದೆ ಮತ್ತು ಕೋಮು ಸೌಹಾರ್ದತೆ ಮತ್ತು ಶಾಂತಿಯನ್ನು ಹದಗೆಡಿಸಿರುವುದಾಗಿ ತಿಳಿಸಿದೆ.
2)ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದೇಶದಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡುತ್ತಿತ್ತು.
3)ಪಿಎಫ್ ಐನ ಸ್ಥಾಪಕ ಮುಖಂಡರು ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಇಂಡಿಯಾ (ಸಿಮಿ)ಯ ಸದಸ್ಯರಾಗಿದ್ದಾರೆ. ಅಷ್ಟೇ ಅಲ್ಲ ಬಾಂಗ್ಲಾದೇಶದ ಜಮಾತ್ ಉಲ್ ಮುಜಾಹಿದೀನ್ ಜೊತೆ ಸಂಪರ್ಕ ಹೊಂದಿರುವುದಾಗಿ ಕೇಂದ್ರದ ಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
4)ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಾಗತಿಕ ಭಯೋತ್ಪಾದಕ ಸಂಘಟನೆಗಳಾದ ಇರಾಕ್ ಮತ್ತು ಸಿರಿಯಾದಲ್ಲಿ ಕಾರ್ಯಾಚರಿಸುತ್ತಿರುವ ಐಸಿಸ್ ಜೊತೆ ಸಂಪರ್ಕ ಹೊಂದಿರುವುದಾಗಿ ಕೇಂದ್ರದ ಅಧಿಸೂಚನೆಯಲ್ಲಿ ವಿವರಿಸಿದೆ.
5)ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದೇಶದಲ್ಲಿ ಉಗ್ರವಾದ ಮತ್ತು ಅಭದ್ರತೆಯನ್ನು ಹುಟ್ಟುಹಾಕುತ್ತಿದೆ ಎಂದು ಕೇಂದ್ರ ತಿಳಿಸಿದೆ.