ಮುಸ್ಲಿಮರಿಗಾಗಿ ಪ್ರತ್ಯೇಕ ಕಾಲೇಜ್ ಸರಿಯಲ್ಲ: ಜೆಡಿಎಸ್ ರಾಜ್ಯಾಧ್ಯಕ್ಷ ಇಬ್ರಾಹಿಂ
ರೌಡಿಗಳನ್ನು ಸೇರಿಸಿಕೊಳ್ಳುವ ವಿಚಾರ ಅಷ್ಟು ಪ್ರಾಮುಖ್ಯತೆ ಪಡೆಯುವುದಿಲ್ಲ...
Team Udayavani, Dec 2, 2022, 3:00 PM IST
ಕಲಬುರಗಿ: ರಾಜ್ಯದಲ್ಲಿ ಎಲ್ಲ ವರ್ಗಗಳ ಹಿತಕ್ಕಾಗಿ ವಿದ್ಯಾದಾನವನ್ನು ಮಾಡುವ ನಿಟ್ಟಿನಲ್ಲಿ ಸರಕಾರ ಆಲೋಚನೆ ಮಾಡಬೇಕು. ಹಿಂದೂಗಳಿಗೊಂದು, ಮುಸ್ಲಿಮರಿಗಾಗಿ ಪ್ರತ್ಯೇಕವಾಗಿ ಕಾಲೇಜು ಮಾಡ್ತಾರೇನು? ಬಿಜೆಪಿಗರ ತಲೆ ಸರಿಯಾಗಿ ಓಡುತ್ತಿಲ್ಲ, ವಕ್ಫ್ ಬೋರ್ಡ್ ತೀರ್ಮಾನ ಒಳ್ಳೆಯ ಬೆಳೆವಣಿಗೆಯಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಕ್ಫ್ ಬೋರ್ಡ್ ನಿರ್ಧಾರದ ಹಿಂದೆ ಸರಕಾರದ ದೂರದೃಷ್ಟಿ ಇದೆ. ಇದರಿಂದ ಎರಡೂ ವ್ಯವಸ್ಥೆಗಳನ್ನು ಹುಟ್ಟುಹಾಕುವ ಆ ಮೂಲಕ ಶಿಕ್ಷಣದ ಹಕ್ಕಿನಿಂದ ಕೆಲವು ವರ್ಗವನ್ನು ವಂಚಿಸುವ ಕೆಲಸ ನಡೆದಿದೆ ಎಂದರು. ಅ. 5 ತಿಂಗಳಲ್ಲಿ ಬಿಜೆಪಿ ಸರಕಾರ ಬಿದ್ದು ಹೋಗುತ್ತದೆ. ಇವರೇನು ಕಾಲೇಜು ಆರಂಭಿಸುತ್ತಾರೆ. ನಾವು ಅಧಿಕಾರಕ್ಕೆ ಬಂದ ಬಳಿಕ ಕಾಲೇಜು ಆರಂಭಿಸುತ್ತೇವೆ. ಆದರೆ, ಅದು ಎಲ್ಲ ವರ್ಗಗಳಿಗೆ, ಬಡ ಮಕ್ಕಳಿಗೆ ಶಿಕ್ಷಣ ನೀಡುವಂತಹ ಕಾಲೇಜು ಆಗಿರಲಿದೆ ಎಂದ ಅವರು, ಹೋಬಳಿ ಮಟ್ಟಕ್ಕೆ ಒಂದು ಕಾಲೇಜು ಮಾಡುವುದು ನಮ್ಮ ಉದ್ದೇಶವಾಗಿದೆ ಎಂದರು.
ಬಿಜೆಪಿ, ಕಾಂಗ್ರೆಸ್ ನಲ್ಲಿ ಸಭ್ಯರಾರು?
ನೋಡ್ರಿ… ಬಿಜೆಪಿಯಲ್ಲಿ ರೌಡಿಗಳನ್ನು ಸೇರಿಸಿಕೊಳ್ಳುವ ವಿಚಾರದಲ್ಲಿ ಏನು ಬೇಕಾದರೂ ತೀರ್ಮಾನ ಕೈಗೊಂಡು ಸಾಯಲಿ, ಅವರಲ್ಲಿ ಈಗ ಇದ್ದವರಲ್ಲಿ ಯಾರು ಸಭ್ಯರಿದ್ದಾರೆ ಹೇಳಿ. ಕಾಂಗ್ರೆಸ್ನಲ್ಲೂ ಇದೇ ಸ್ಥಿತಿ ಇದೆ. ಅಲ್ಲೂ ಸಭ್ಯರು ಸಿಗುತ್ತಿಲ್ಲ ಹೀಗಾಗಿ ಈ ವಿಚಾರ ಅಷ್ಟು ಪ್ರಾಮುಖ್ಯತೆ
ಪಡೆಯುವುದಿಲ್ಲ. ಮುಂದೆ ಇದರ ವಿರುದ್ಧ ಜನರೇ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ಡಿಸೆಂಬರ್ ನಲ್ಲಿ ಘೋಷಣೆ
ನಮ್ಮ ಪಕ್ಷದಲ್ಲಿ ಡಿಸೆಂಬರ್ನಲ್ಲಿ ಮೊದಲ ಹಂತದ ಟಿಕೆಟ್ ಘೋಷಣೆಯಾಗಲಿದೆ. ಎಲ್ಲ ತೀರ್ಮಾನಗಳನ್ನು ದೇವೇಗೌಡರು ಕೈಗೊಳ್ಳುತ್ತಾರೆ. ಅವರು ಹಿರಿಯ ಯಜಮಾನರಿದ್ದಾರೆ. ಅವರ ತೀರ್ಮಾನಗಳೇ ಅಂತಿಮ. ಅವರು ಸಾಕಷ್ಟು ಅನುಭವ ಮತ್ತು ದೂರದೃಷ್ಟಿ ಹೊಂದಿದ್ದಾರೆ. ಮುಖ್ಯ ಮಂತ್ರಿ ಅಭ್ಯರ್ಥಿ ಕುಮಾರಸ್ವಾಮಿ ಅವರೇ, ಅದರಲ್ಲಿ ಬದಲಿಲ್ಲ. ಇನ್ನುಳಿದಂತೆ ಪಕ್ಷದ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ನನ್ನ ಪುತ್ರ ಹುಮನಬಾದ್ನಲ್ಲಿ ಸ್ಪರ್ಧಿಸುವ ಕುರಿತು ಪಕ್ಷವೇ ತೀರ್ಮಾನಿಸಲಿದೆ ಎಂದರು.