ಬಾದಾಮಿಯಲ್ಲಿ ಅಭಿಮಾನಿ ಹಾಕಿದ ಕೇಸರಿ ರುಮಾಲು ಕಿತ್ತೆಸೆದ ಸಿದ್ದರಾಮಯ್ಯ!
Team Udayavani, Jan 25, 2022, 5:47 PM IST
ಬಾಗಲಕೋಟೆ : ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆಂದು ಬಾದಾಮಿ ಕ್ಷೇತ್ರದಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಮಂಗಳವಾರ ಅಭಿಮಾನಿಯೊಬ್ಬರು ರುಮಾಲು (ಕೇಸರಿ ಪೇಟಾ) ತೊಡಿಸಿ ಸನ್ಮಾನಿಸಲು ಬಂದಿದ್ದ ವೇಳೆ ಕೇಸರಿ ಪೇಟವನ್ನೇ ಕಿತ್ತೆಸೆದ ಪ್ರಸಂಗ ನಡೆಯಿತು.
ಬಾದಾಮಿ ತಾಲೂಕಿನ ಕಾತರಕಿಯಲ್ಲಿ ಮಧ್ಯಾಹ್ನ ಗ್ರಾ.ಪಂ. ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮವಿತ್ತು. ಗ್ರಾಮಕ್ಕೆ ಆಗಮಿಸಿದ ಕ್ಷೇತ್ರದ ಶಾಸಕರೂ ಆಗಿರುವ ಸಿದ್ದರಾಮಯ್ಯ ಅವರ ಅಭಿಮಾನಿಯೊಬ್ಬರು, ಸಾಹೇಬ್ರ ನಮ್ಮೂರಿಗೆ ಹೊಸ ಪಂಚಾಯಿತಿ ಕಟ್ಟಡ ಕಟ್ಟಿ ಕೊಟ್ಟೀರಿ. ನಿಮಗ್ ನಾವೆಲ್ಲ ಅಭಾರಿ ಅದೀವ್ರಿ ಎನ್ನುತ್ತ ಸಿದ್ದರಾಮಯ್ಯ ಅವರತ್ತ ಆಗಮಿಸಿ, ಕೇಸರಿ ಪೇಟ ತೊಡಿಸಿ ಸನ್ಮಾನಿಸಲು ಮುಂದಾದರು. ಈ ವೇಳೆ ಸಿಟ್ಟಿಗೆದ್ದ ಸಿದ್ದರಾಮಯ್ಯ, ತೆಗಿಯಯ್ಯ ಎಂದು ತಲೆಯ ಮೇಲೆ ಹೊದಿಸಿದ ಪೇಟಾ ಕಿತ್ತೆಸೆದರು. ಈ ಘಟನೆ ಕಂಡು ದಂಗಾದ ಅಭಿಮಾನಿ, ಇಲ್ರಿ ಸಾಹೇಬ್ರ ಎನ್ನುತ್ತ ತಾವು ತಂದಿದ್ದ ಪೇಟ ಮರಳಿ ಪಡೆದು ಅಲ್ಲಿಂದ ಹೊರ ನಡೆದರು.
ಅಲ್ಲದೇ ಅಭಿಮಾನಿಯೊಬ್ಬರು ಸಿದ್ದರಾಮಯ್ಯ ಅವರಿಗೆ ಕುರಿ ಮರಿಯೊಂದನ್ನು ಕೊಡುಗೆಯಾಗಿ ನೀಡಲು ಬಂದಿದ್ದರು. ಕುರಿ ಮರಿಯನ್ನು ಮುಟ್ಟಿ ಅಭಿಮಾನಿಗೆ ಹಾರೈಸಿ ಕಳುಹಿಸಿದ ಪ್ರಸಂಗವೂ ನಡೆಯಿತು.