ಸೌಪರ್ಣಿಕಾ ನದಿ ನೀರು ಸ್ವತ್ಛಗೊಳಿಸುವುದೇ ದೊಡ್ಡ ಸವಾಲು
Team Udayavani, Feb 14, 2021, 4:20 AM IST
ಕೊಲ್ಲೂರು: ಸವಾಲಾಗಿ ಇರುವ ಕೊಲ್ಲೂರು ಪರಿಸರ ಸ್ವತ್ಛತೆಗೆ ಆದ್ಯತೆ ನೀಡಿ ತ್ಯಾಜ್ಯ ಮುಕ್ತ ಗ್ರಾಮವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಕಳೆದ ಒಂದು ತಿಂಗಳಿನಿಂದ ಸ್ವತ್ಛತಾ ಅಭಿಯಾನ ನಡೆಯುತ್ತಿದ್ದರೂ, ಸೌಪರ್ಣಿಕಾ ನದಿಯಲ್ಲಿ ಹರಿಯುವ ಇಲ್ಲಿನ ವಸತಿಗೃಹಗಳ ಮಲಿನ ನೀರನ್ನು ಬೇರ್ಪಡಿಸುವಲ್ಲಿ ಎದುರಾದ ಇಚ್ಛಾಶಕ್ತಿಯ ಕೊರತೆ ಸಾಂಕ್ರಾಮಿಕ ರೋಗ ಹರಡುವಿಕೆಗೆ ಕಾರಣವಾಗುವ ಸಾಧ್ಯತೆ ಎದುರಾಗಿದೆ.
ಜನಪರ ಕಾಳಜಿಯ ಹರಿಕಾರರಾಗಿ ತ್ಯಾಜ್ಯ ಮುಕ್ತ ಕೊಲ್ಲೂರು ನಿರ್ಮಾಣದ ಪ್ರವರ್ತಕರಾಗಿರುವ ಶ್ರೀ ಮೂಕಾಂಬಿಕಾ ಪರಿಸರ ಅಭಿವೃದ್ಧಿ ಸಮಿತಿಗೆ ಸೌಪರ್ಣಿಕಾ ನದಿಯ ಮಲಿನ ನೀರನ್ನು ಸ್ವತ್ಛಗೊಳಿಸುವುದು ತಲೆನೋವಾಗಿದೆ. ವಸತಿ ಗೃಹಗಳ ಕೊಳಚೆ ನೀರಿನ ಹರಿವಿಗೆ ನಿರ್ಬಂಧ ಅಗತ್ಯವಾಗಿದೆ.
ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಇಲ್ಲಿನ ಒಳಚರಂಡಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ತ್ವರಿತಗತಿಯಲ್ಲಿ ಕಾಮಗಾರಿ ಮುಗಿಸಲು ಸೂಚಿಸಲಾಗಿದ್ದರೂ, ಕೊನೆಯ ಹಂತದ ಕಾಮಗಾರಿ ಪೂರ್ಣಗೊಳ್ಳದೇ ಮನೆ ಮನೆಗೆ ಒದಗಿಸಲಾಗುವ ಕುಡಿಯುವ ನೀರಿನ ವ್ಯವಸ್ಥೆ ಕಗ್ಗಂಟಾಗಿ ಉಳಿದಿದೆ.
ತುರ್ತು ಸಮಸ್ಯೆ ನಿವಾರಣೆ
ಖಾಸಗಿ ವಸತಿಗೃಹಗಳಿಂದ ಸೌಪರ್ಣಿಕಾ ನದಿ ನೀರು ಮಲಿನಗೊಳ್ಳುತ್ತಿದೆ ಎಂಬ ಬಗ್ಗೆ ಅನೇಕ ದೂರುಗಳು ಬಂದಿವೆ. ಈ ದಿಸೆಯಲ್ಲಿ ವಸತಿಗೃಹದ ಮಾಲಕರಿಗೆ ನೋಟಿಸ್ ನೀಡಲಾಗುವುದು.ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆಯ ಕಾಮಗಾರಿ ಪೂರ್ಣಗೊಂಡಿದ್ದರೂ ತಾಂತ್ರಿಕ ಕಾರಣಗಳಿಂದ ನೀರು ಸರಬರಾಜಿಗೆ ವಿಳಂಬವಾಗುತ್ತಿದೆ. ಗ್ರಾಮ ಪಂಚಾಯತ್ ಅಧ್ಯಕ್ಷರ ಆಯ್ಕೆಯ ಅನಂತರ ಅಧಿಕಾರಿಗಳ ಸಭೆ ಕರೆದು ಎದುರಾದ ಸಮಸ್ಯೆ ನಿಭಾಯಿಸಲಾಗುವುದು.
-ರುಕ್ಕಣ್ಣ ಗೌಡ ಪಿ.ಡಿ.ಒ. ಕೊಲ್ಲೂರು ಗ್ರಾ.ಪಂ.