ಆಯೋಗದ ನಿರ್ದೇಶನ ಕಟ್ಟುನಿಟ್ಟಾಗಿ ಪಾಲಿಸಿ: ಮಡಿಕೇರಿ DC ಡಾ| ಬಿ.ಸಿ. ಸತೀಶ
Team Udayavani, Apr 15, 2023, 5:54 AM IST
ಮಡಿಕೇರಿ: ವಿಧಾನಸಭಾ ಚುನಾವಣೆ ಹಿನ್ನೆಲೆ ನಾಮಪತ್ರ ಸಲ್ಲಿಕೆಯು ಆರಂಭವಾಗಿದ್ದು, ಈ ಸಂಬಂಧ ಚುನಾವಣ ಆಯೋಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೆಕ್ಟರ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ| ಬಿ.ಸಿ. ಸತೀಶ ಅವರು ನಿರ್ದೇಶನ ನೀಡಿದ್ದಾರೆ.
ನಗರದ ಗಾಂಧಿ ಭವನದಲ್ಲಿ ಸೆಕ್ಟರ್ ಅಧಿಕಾರಿಗಳಿಗೆ ಶುಕ್ರವಾರ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾಮಪತ್ರ ಸಲ್ಲಿಸುವ ಸಂದರ್ಭ ಮೆರವಣಿಗೆ, ಜಾಥ, ರ್ಯಾಲಿ ಮಾಡಿದ್ದಲ್ಲಿ ವೀಡಿಯೋ ಮಾಡಿಕೊಳ್ಳುವುದು ಸೇರಿದಂತೆ ಚುನಾವಣ ಆಯೋಗದ ನಿರ್ದೇಶನಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಆ ನಿಟ್ಟಿನಲ್ಲಿ ಹೆಚ್ಚಿನ ಗಮನಹರಿಸಬೇಕು. ವೀಡಿಯೋ ಮತ್ತು ಪ್ಲೆçಯಿಂಗ್ ಸ್ಕ್ವಾಡ್ ತಂಡಗಳು ಸರಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಹೇಳಿದರು.
ಚುನಾವಣ ಕರ್ತವ್ಯ ನಿರ್ವಹಿಸುವ ಅಧಿಕಾರಿ ಮತ್ತು ಸಿಬಂದಿಗಳು ಅಂಚೆ ಮತಪತ್ರ ಮೂಲಕ ಮತ ಚಲಾಯಿಸಲು ಮುಂದಾಗಬೇಕು. ಆ ನಿಟ್ಟಿನಲ್ಲಿ ತಾವು ಹುದ್ದೆಗೆ ನೇಮಕವಾದ ಪ್ರತಿಯನ್ನು ನಮೂನೆ ಜತೆ ಲಗತ್ತಿಸಬೇಕು. ವೋಟರ್ ಹೆಲ್ಫ್ ಲೈನ್ ಆ್ಯಪ್ನಲ್ಲಿ ತಮ್ಮ ಮತಕ್ಷೇತ್ರದ ಮತಗಟ್ಟೆ ವಿವರವನ್ನು ಬರೆಯಬೇಕು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ| ನಂಜುಂಡೇಗೌಡ ಅವರು ಮಾತನಾಡಿ ಸಭೆ ಸಮಾರಂಭಗಳಲ್ಲಿ ಚುನಾವಣಾಧಿಕಾರಿಗಳು ಅನುಮತಿ ನೀಡಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಅಭ್ಯರ್ಥಿಗಳು ಅನುಮತಿ ಪಡೆದಿರುವ ವಾಹನಗಳಿಗೆ ಅವಕಾಶ ನೀಡಬೇಕು ಎಂದರು.