“ತಾಂಡವ’ ತಂಡಕ್ಕೆ ಮಧ್ಯಂತರ ರಕ್ಷಣೆ ನೀಡಲು ಸುಪ್ರೀಂ ಕೋರ್ಟ್ ನಕಾರ
Team Udayavani, Jan 27, 2021, 9:30 PM IST
ನವದೆಹಲಿ: ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಮಾಡಲಾಗಿದೆ ಎಂಬ ಆರೋಪ ಎದುರಿಸುತ್ತಿರುವ “ತಾಂಡವ’ ವೆಬ್ ಸರಣಿಯ ತಂಡಕ್ಕೆ ಬಂಧನದಿಂದ ರಕ್ಷಣೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ತಾಂಡವ ನಿರ್ದೇಶಕ ಅಲಿ ಅಬ್ಟಾಸ್ ಜಾಫರ್, ಅಮೆಜಾನ್ ಪ್ರೈಮ್ ಇಂಡಿಯಾ ಮುಖ್ಯಸ್ಥೆ ಅಪರ್ಣಾ ಪುರೋಹಿತ್, ನಿರ್ಮಾಪಕ ಹಿಮಾಂಶು ಮೆಹ್ರಾ, ಸರಣಿಯ ಬರೆಹಗಾರ ಗೌರವ ಸೋಲಂಕಿ, ನಟ ಮೊಹಮ್ಮದ್ ಝೀಶನ್ ಅಯ್ಯೂಬ್ ಪ್ರತ್ಯೇಕ ಅರ್ಜಿ ಸಲ್ಲಿಸಿ, ತಮ್ಮ ವಿರುದ್ಧ ದಾಖಲಾಗಿರುವ ಎಲ್ಲ ಎಫ್ಐಆರ್ಗಳನ್ನು ಒಂದರಲ್ಲೇ ಸೇರಿಸಬೇಕು, ಜೊತೆಗೆ ಅವನ್ನು ರದ್ದು ಮಾಡಬೇಕು ಎಂದು ಕೋರಿದ್ದರು. ಜತೆಗೆ, ಬಂಧಿಸುವ ಬದಲು ಮಧ್ಯಂತರ ರಕ್ಷಣೆ ಒದಗಿಸಬೇಕು ಎಂದೂ ಮನವಿ ಮಾಡಿದ್ದರು. ಈ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ಸ್ವತ್ಛಂದವಲ್ಲ, ಅದಕ್ಕೂ ಕೆಲವು ನಿರ್ಬಂಧಗಳಿರುತ್ತವೆ ಎಂದು ಕೋರ್ಟ್ ಹೇಳಿದೆ.
ಇದನ್ನೂ ಓದಿ:ರಾಜ್ಯದ ಒಂದಿಂಚು ಜಾಗವನ್ನೂ ಬಿಡೆವು, ನಮ್ಮನ್ನು ಕೆಣಕಿದರೆ ಪರಿಣಾಮ ನೆಟ್ಟಗಿರಲ್ಲ :ನಾರಾಯಣಗೌಡ
ಜತೆಗೆ ಈ ಬಗ್ಗೆ ಕರ್ನಾಟಕ, ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಬಿಹಾರ, ದೆಹಲಿ ಸರ್ಕಾರಗಳ ಅಭಿಪ್ರಾಯವನ್ನು ಸರ್ವೋಚ್ಚ ನ್ಯಾಯಾಲಯ ಕೇಳಿದೆ.